ಜೈಪುರ್: ಆರೋಪಿ ಲಲಿತ್ ಮೋದಿಗೆ ನೆರವು ನೀಡಿದ ವಿವಾದದ ಹಿನ್ನೆಲೆಯಲ್ಲಿ ರಾಜಸ್ಥಾನ್ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧ್ಯಾ
ಲಂಡನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಬಂಡವಾಳಗಾರರ ಜತೆಗೆ ಮಹತ್ವದ ಸಭೆ ನಡೆಸಲು ಅವರು ಶುಕ್ರವಾರ ನಿಯೋಗದ ಜತೆ ಲಂಡನ್ಗೆ ತರೆಳಬೇಕಿತ್ತು.
ಲಲಿತ್ ಮೋದಿ ಜತೆಗಿನ ವಿವಾದ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ರಾಜೇ ಈ ಪ್ರವಾಸದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ನೀತಿ ಆಯೋಗದ ಜತೆಗಿನ ಸಭೆ ಹಿನ್ನೆಲೆಯಲ್ಲಿ ಲಂಡನ್ಗೆ ತರಳುತ್ತಿಲ್ಲ ಎಂದು ಪ್ರವಾಸ ರದ್ದಾಗಿರುವ ಕುರಿತು ಸಿಎಂ ಕಚೇರಿಯ ಮೂಲಗಳು ಸ್ಪಷ್ಟನೆ ನೀಡಿದೆ.
ತಮ್ಮ ವಿರುದ್ಧ ಭಾರತದಲ್ಲಿ ಭೃಷ್ಟಾಚಾರದ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ತಾವು ಲಂಡನ್ನಲ್ಲಿ ನೆಲೆಯೂರಲು ರಾಜಸ್ಥಾನದ ಮುಖ್ಯಮಂತ್ರಿ ಸಹಾಯ ಮಾಡಿದ್ದರು ಎಂಬುದಕ್ಕೆ ಸಾಕ್ಷ್ಯವಾಗಿ ಲಲಿತ್ ಮೋದಿ ಬಿಡುಗಡೆ ಮಾಡಿರುವ ದಾಖಲೆಗಳ ಕುರಿತು ಸ್ಪಷ್ಟನೆ ನೀಡಿ ರಾಜೇ ಇನ್ನು ಕೂಡ ಸಾರ್ವಜನಿಕ ಹೇಳಿಕೆ ನೀಡಿಲ್ಲ.
ಕೇಂದ್ರ ಬಿಜೆಪಿ ಕೂಡ ಅವರನ್ನು ಸಮರ್ಥನೆ ಮಾಡಿಕೊಳ್ಳದೇ ದೂರವುಳಿದಿತ್ತು. ಆದರೆ ಸೋಮವಾರ ಜೈಪುರದಲ್ಲಿ ಅವರನ್ನು ಭೇಟಿಯಾದ ಕೇಂದ್ರ ಸಚಿವ ನಿತಿನ ಗಡ್ಕರಿ ಪ್ರಬಲ ಬೆಂಬಲವನ್ನು ವ್ಯಕ್ತಪಡಿಸಿದ್ದು ವಿವಾದಕ್ಕೆ ಸಂಬಂಧಿಸಿದಂತೆ ರಾಜೇ ಪ್ರಥಮ ಬಾರಿಗೆ ತಮ್ಮ ಪಕ್ಷದ ಕಡೆಯಿಂದ ಪಡೆದ ಬೆಂಬಲ ಇದಾಗಿದೆ.