ಜೈಪುರ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ ಆರೋಪ ಎದುರಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಬೆಂಬಲಕ್ಕೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರ ನಿಂತಿದೆ.
ರಾಜೇ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ರಾಜಸ್ಥಾನ ಮುಖ್ಯಮಂತ್ರಿಯ ವಿರುದ್ಧದ ಆರೋಪಗಳೆಲ್ಲಾ ಆಧಾರ ರಹಿತ ಎಂದಿದ್ದಾರೆ. ಅಲ್ಲದೆ ಪಕ್ಷ ಹಾಗೂ ಸರ್ಕಾರ ರಾಜೇ ಬೆಂಬಲಕ್ಕಿದೆ ಎಂದಿದ್ದಾರೆ.
ಲಲಿತ್ ಮೋದಿ ಪ್ರಕರಣದ ಹಿನ್ನೆಲೆಯಲ್ಲಿ ಗಡ್ಕರಿ ಅವರು ಇಂದು ಜೈಪುರದಲ್ಲಿ ರಾಜೇ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಗಡ್ಕರಿ, ರಾಜೇ ವಿರುದ್ಧದ ಎಲ್ಲಾ ಆರೋಪಗಳು ಆಧಾರ ರಹಿತವಾಗಿದ್ದು, ಸರ್ಕಾರ ಮತ್ತು ಪಕ್ಷ ಅವರ ಬೆಂಬಲಕ್ಕಿದೆ ಎಂದು ಹೇಳಿದ್ದಾರೆ.
ಲಲಿತ್ ಮೋದಿ ಜತೆ ರಾಜೇ ಪುತ್ರ ದುಶ್ಯಂತ್ ಸಿಂಗ್ ಅವರು ಹಣಕಾಸು ವ್ಯವಹಾರ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಗಡ್ಕರಿ, ‘ಆ ಎಲ್ಲಾ ವ್ಯವಹಾರಗಳು ಆದಾಯ ತೆರಿಗೆ ಇಲಾಖೆಯಲ್ಲಿ ದಾಖಲಾಗಿವೆ. ಮತ್ತೊಬ್ಬರಿಂದ ಸಾಲ ಪಡೆಯುವುದು ಅಪರಾಧವಲ್ಲ’ ಎಂದಿದ್ದಾರೆ.