ನವದೆಹಲಿ: ನಕಲಿ ಪದವಿ ಪ್ರಮಾಣ ಪತ್ರ ನೀಡಿ ಬಂಧನಕ್ಕೊಳಗಾಗಿರುವ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ತೋಮರ್ ಅವರ ಪೊಲೀಸ್ ಕಸ್ಟಡಿ 2 ದಿನದ ವರೆಗೆ ವಿಸ್ತರಣೆಯಾಗಿದೆ.
ದೆಹಲಿಯ ನ್ಯಾಯಾಲಯದಲ್ಲಿ ತೋಮರ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಪ್ರಕರಣವನ್ನು ಜೂ.22 ಕ್ಕೆ ಮುಂದೂಡಿರುವ ಕೋರ್ಟ್, ತೋಮರ್ ಪೊಲೀಸ್ ಕಸ್ಟಡಿಯನ್ನು 2 ದಿನದ ವರೆಗೆ ವಿಸ್ತರಿಸಿದೆ. ಜಿತೇಂದ್ರ ಸಿಂಗ್ ಗೆ ನಕಲಿ ಬಿ.ಎಸ್ಸಿ ಪದವಿ ನೀಡಿದ್ದ ಮಧ್ಯವರ್ತಿ ಮದನ್ ಪ್ರತಾಪ್ ಚೌಹ್ಹಾಣ್ ನನ್ನು ವಿಚಾರಣೆ ನಡೆಸಲಾಗುತ್ತಿದ್ದು, ತೋಮರ್ ಹಾಗೂ ಮಧ್ಯವರ್ತಿಯನ್ನು ಮುಖಾಮುಖಿಯಾಗಿಸಿ ವಿಚಾರಣೆ ನಡೆಸುವ ಅಗತ್ಯವಿರುವುದರಿಂದ ತೋಮರ್ ಕಸ್ಟಡಿಯನ್ನು ವಿಸ್ತರಿಸಬೇಕೆಂದು ದೆಹಲಿ ಪೊಲೀಸರು ಮನವಿ ಮಾಡಿದ್ದರು.
4 ದಿಂದ ಕಸ್ಟಡಿ ಮುಕ್ತಾಯಗೊಂಡಿದ್ದ ಹಿನ್ನೆಲೆಯಲ್ಲಿ ಜೂ.19 ರಂದು ಜಿತೇಂದ್ರ ತೋಮರ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ತೋಮರ್ ಗೆ ಕೇಳಿದ್ದ 250 ಪ್ರಶ್ನೆಗಳಲ್ಲಿ ಕೆಲವಕ್ಕೆ ಮಾತ್ರ ಉತ್ತರ ನೀಡಿದ್ದು ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಎಂದು ಅಭಿಯೋಜಕರು ತಿಳಿಸಿದ್ದಾರೆ.