ನವದೆಹಲಿ: ಅಬಕಾರಿ ಅಧಿಕಾರಿಯೊಬ್ಬರ ಪತ್ನಿ ಮತ್ತು ಪುಟ್ಟ ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಪಶ್ಚಿಮ ದೆಹಲಿಯ ಉತ್ತಮ ನಗರ ಪ್ರದೇಶದಲ್ಲಿ ಸೋಮವಾರ ನಡೆದಿದೆ.
ಮೃತರನ್ನು ದೀಪಮಾಲಾ( 34) ಅವರ ಪುತ್ರ ಸಕ್ಷಮ್(7) ಮತ್ತು ಪುತ್ರಿ ಶೈಲಿ(2) ಎಂದು ಗುರುತಿಸಲಾಗಿದೆ. ಅಧಿಕಾರಿ ಅಮಿತ್ ರಾತ್ರಿ ಮನೆಗೆ ಮರಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ ದೀಪಮಾಲಾರನ್ನು ಅವರ ಮಲಗುವ ಕೋಣೆಯಲ್ಲಿ ಕೊಲೆ ಮಾಡಲಾಗಿದೆ. ಮಕ್ಕಳಿಬ್ಬರನ್ನು ಸ್ನಾನದ ಕೋಣೆಯಲ್ಲಿ ಹತ್ಯೆಗೈಯ್ಯಲಾಗಿದೆ. ಎಲ್ಲರ ಮೈಮೇಲೂ ಹರಿತವಾದ ಆಯುಧದಿಂದ ಮಾಡಲಾದ ದಾಳಿಯ ಗುರುತಿದೆ.
ರಾತ್ರಿ 8.30 ರ ಸುಮಾರಿಗೆ ಪೊಲೀಸರಿಗೆ ಘಟನೆಯ ಮಾಹಿತಿ ದೊರೆತಿದ್ದು, ತಕ್ಷಣ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ದರೋಡೆ ನಡೆದಿರುವ ಕುರಿತು ಯಾವುದೇ ಕುರುಹು ಲಭಿಸಿಲ್ಲ. ಪುಟ್ಟ ಮಕ್ಕಳನ್ನು ಅಮಾನುಷವಾಗಿ ಹತ್ಯೆ ನಾಡಿರುವುದನ್ನು ನೋಡಿದರೆ ವೈಯಕ್ತಿತ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.