ರಾಷ್ಟ್ರೀಯ

ಮಹಾಪಾತಕ: ಪತಿ ಸೇರಿದಂತೆ 7 ಜನ ಸಂಪೂರ್ಣ ಪರಿವಾರವನ್ನು ಸುಟ್ಟು ಕೊಂದ ಸತಿ

Pinterest LinkedIn Tumblr

fire

ಮಧುರೈ: ಕೌಟುಂಬಿಕ ಕಲಹದಿಂದ ಕುಪಿತಳಾಗಿದ್ದ ಮಹಿಳೆಯೊಬ್ಬಳು ತನ್ನ ಪತಿ ಸೇರಿದಂತೆ ಆತನ ಸಂಪೂರ್ಣ ಪರಿವಾರವನ್ನು ಜೀವಂತ ಸುಟ್ಟು ಹಾಕಿದ ಘೋರ ಕುಕೃತ್ಯ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಒಟ್ಟು 7 ಜನರು ಈ ಘಟನೆಯಲ್ಲಿ ಅಸು ನೀಗಿದ್ದಾರೆ.

ಮಧುರೈನ ಕುಮಾರಪುರಮ್ ಎಂಬ ಹಳ್ಳಿಯಲ್ಲಿ ಇಂದು ಪ್ರಾತಃ ಕಾಲದಲ್ಲಿ ಈ ಘಟನೆ ನಡೆದಿದೆ.

ಮೃತ ಕನ್ನನ್(27) ಮತ್ತು ಆರೋಪಿ ಪಂಡೀಶ್ವರಿ (25) ಕಳೆದ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಅವರಿಬ್ಬರಲ್ಲಿ ಹೊಂದಾಣಿಕೆಯಿರಲಿಲ್ಲವೆಂಬ ಕಾರಣಕ್ಕೆ ಕಳೆದ ಒಂದು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ಅವರಿಬ್ಬರನ್ನು ಒಂದು ಗೂಡಿಸಲು ಪ್ರಯತ್ನಿಸಿದ್ದ ಕೆಲ ಹಳ್ಳಿಗರು ಚೆನ್ನೈನಲ್ಲಿ ವಾಸಿಸುತ್ತಿದ್ದ ಕನ್ನನ್‌ನನ್ನು ಗ್ರಾಮಕ್ಕೆ ಹಿಂತಿರುಗಿ ಕರೆಸಿಕೊಂಡಿದ್ದರು. ಅಂತೆಯೇ ಗ್ರಾಮಕ್ಕೆ ವಾಪಸ್ಸಾಗಿದ್ದ ಆತ ತನ್ನ ತಂದೆ-ತಾಯಿ, ಸಹೋದರಿ ಮತ್ತು ಆಕೆಯ ಕುಟುಂಬದ ಜತೆ ವಾಸವಾಗಿದ್ದ.

ಇಂದು ಬೆಳಿಗ್ಗೆ ಪತಿ ವಾಸಿಸುತ್ತಿದ್ದ ಮನೆ ಬಳಿ ಬಂದ ಪಂಡೀಶ್ವರಿ , ಹೊರಗಡೆಯಿಂದ ಬೀಗ ಹಾಕಿ ಸೀಮೆಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಕೆನ್ನಾಲಿಗೆಗೆ ದಗದಗಿಸಿ ಉರಿದ ಮನೆಯ ಒಳಗೆ ಇದ್ದ ಕನ್ನನ್, ಆತನ ತಂದೆ, ವೇಲು (65) , ತಾಯಿ ಪಚಿಯಮ್ಮಳ್ (50), ಅಕ್ಕ ಸುಗಂಧಿ (35) , ಆಕೆಯ ಮಕ್ಕಳಾದ ಸಂಗೀತಾ(17), ಸಂಗೀತ್ ಸುಟ್ಟು ಕರಕಲಾಗಿ ಹೋದರು. ತೀವೃ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವಿನೀತ್( 13) ಕೂಡ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ.

ಈ ಘೋರ ಪಾತಕವನ್ನು ಎಸಗಿದ ನಂತರ ಆರೋಪಿ ನೇರವಾಗಿ ಸದಾಪೆಟ್ಟಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ.

Write A Comment