ಚಂಡೀಗಢ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂ ಅವ್ಯವಹಾರಗಳ ಬಗ್ಗೆ ಹರಿಯಾಣಾ ಸರಕಾರ ಸದ್ಯದಲ್ಲೇ ತನಿಖೆ ಆರಂಭಿಸಲಿದೆ.
‘ರಾಹುಲ್ ಗಾಂಧಿ ಅವರ ಸೂಟು ಬೂಟಿನ ಜೀಜಾಜೀಯ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪು ಮಾಡಿದ್ದರೆ ವಾದ್ರಾಗೆ ಶಿಕ್ಷೆ ಆಗುವುದು, ಯಾವುದೇ ಕಾರಣಕ್ಕೂ ವಿನಾಯಿತಿ ದೊರೆಯುವುದಿಲ್ಲ,’ ಎಂದು ಹರಿಯಾಣಾ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ರಾಹುಲ್ ಗಾಂಧಿ ಹಾಗೂ ರಿಯಲ್ ಎಸ್ಟೇಟ್ ಸಂಸ್ಥೆ ಡಿಎಲ್ಎಫ್ ನಡುವಿನ ವಿವಾದಿತ ಭೂ ಖರೀದಿ ಒಪ್ಪಂದಕ್ಕೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರಕಾರ ನೆರವಾಗಿತ್ತು ಎಂದು ಸಿಎಜಿ ದೂರಿತ್ತು.
ವಾದ್ರಾ ಅವರ ಸ್ಕೈ ಲೈಟ್ ಹಾಸ್ಪಿಟಾಲಿಟಿ ಸಂಸ್ಥೆ, ಗುರ್ಗಾಂವ್ನ ಮನೆಸರದಲ್ಲಿ 3.5 ಎಕರೆ ಭೂಮಿಯನ್ನು 2008ರಲ್ಲಿ ಡಿಎಲ್ಎಫ್ ಕಂಪನಿಗೆ 58 ಕೋಟಿ ರೂ.ಗೆ ಮಾರಾಟ ಮಾಡಿತ್ತು. ವಾದ್ರಾ ಅವರ ಕಂಪನಿ ಆ ಜಾಗವನ್ನು ಕೇವಲ 15 ಕೋಟಿಗೆ ಖರೀದಿಸಿತ್ತು. ಹೂಡಾ ಸರಕಾರದಿಂದ ಭೂ ಬಳಕೆ ಬದಲಾವಣೆ (ಸಿಎಲ್ಯು) ಹಾಗೂ ಇತರ ಅನುಮತಿ ಪಡೆದ ನಂತರ ಡಿಎಲ್ಎಫ್ ಕಂಪನಿಗೆ ಭೂಮಿಯನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿತ್ತು.
ಗುರ್ಗಾಂವ್ನ ಶಿಕೋಪುರ್ನಲ್ಲಿ ವಿವಾದಿತ ಭೂಮಿಗೆ ವಾದ್ರಾ ಅನುಮತಿ ಪಡೆದ ಸಂದರ್ಭದಲ್ಲಿ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆ ರಾಜ್ಯದಲ್ಲಿ ನಿಗದಿ ಪಡಿಸಿರುವ ಮಿತಿಗಿಂತ ಹೆಚ್ಚು ಭೂಮಿಯನ್ನು ಹೊಂದಿತ್ತು ಎಂದು ಹರಿಯಾಣಾ ಸರಕಾರದ ಇಬ್ಬರು ಹಿರಿಯ ಅಧಿಕಾರಿಗಳು ನಡೆಸಿದ್ದ ಮತ್ತೊಂದು ತನಿಖೆಯಿಂದ ತಿಳಿದುಬಂದಿದೆ.