ಶ್ರೀನಗರ/ ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಶನಿವಾರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಜತೆ ಸೇರಿ ಮೈತ್ರಿ ಸರ್ಕಾರ ರಚನೆಗೆ ತಯಾರಿರುವ ಸುಳಿವು ನೀಡಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯು(ಪಿಡಿಪಿ), ಎರಡು ಕಠಿಣ ಷರತ್ತುಗಳನ್ನು ಮುಂದಿಟ್ಟಿದೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ಕಲಂ ಯಥಾರೀತಿ ಮುಂದುವರಿಸಬೇಕು ಮತ್ತು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್ಎಸ್ಪಿಎ) ರದ್ದುಗೊಳಿಸಬೇಕು ಎಂಬ ಪ್ರಮುಖ ಬೇಡಿಕೆಗಳ ಬಗ್ಗೆ ನಿಲುವು ತಿಳಿಸುವಂತೆ ಬಿಜೆಪಿಯನ್ನು ಕೇಳಿದೆ.
ಈ ಎರಡು ಷರತ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ತೆರನಾದ ರಾಜಿಗೂ ತಾನು ಸಿದ್ಧವಿಲ್ಲ ಎಂದಿರುವ ಪಿಡಿಪಿ ತನ್ನ ದೃಢ ನಿಲುವನ್ನು ಸ್ಪಷ್ಟಪಡಿಸಿದೆ. ಪಿಡಿಪಿ ಮುಂದಿಟ್ಟಿರುವ ಈ ಷರತ್ತುಗಳನ್ನು ಬಿಜೆಪಿ ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತದೆ ಎನ್ನುವುದು ಮುಂದಿನ ಬೆಳವಣಿಗೆಗಳನ್ನು ನಿರ್ಧರಿಸಲಿದೆ.
ಒಪ್ಪಿಗೆ ಕಷ್ಟ: ಬಿಜೆಪಿ ಈ ಎರಡು ಷರತ್ತುಗಳನ್ನು ಒಪ್ಪಿಕೊಳ್ಳುವ ಸಾಧ್ಯತೆ ಬಹುತೇಕ ಇಲ್ಲ ಎನ್ನಲಾಗುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆ ಕುರಿತು ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಬಿಜೆಪಿ ಹೇಳಿದೆ.
‘ಮಾತುಕತೆ ನಡೆಯುತ್ತಿದೆ. ಏನಾಗುತ್ತದೆ ನೋಡೋಣ’ ಎಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಯಾವ ಪಕ್ಷದೊಂದಿಗೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂಬ ಸುಳಿವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
‘ನಮ್ಮ ಎದುರು ಎಲ್ಲ ಆಯ್ಕೆಗಳು ಮುಕ್ತವಾಗಿವೆ. ಯಾವುದೇ ನಿರ್ದಿಷ್ಟ ಪಕ್ಷದೊಂದಿಗೂ ಸೇರಿ ಸರ್ಕಾರ ರಚಿಸುವ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಪಿಡಿಪಿ ವಕ್ತಾರ ನಯೀಮ್ ಅಖ್ತರ್ ಸ್ಪಷ್ಟಪಡಿಸಿದ್ದಾರೆ.
‘ಪಕ್ಷದ ನಾಯಕರು ಸರ್ಕಾರ ರಚನೆಯ ಎಲ್ಲ ಸಾಧ್ಯತೆಗಳ ಕುರಿತು ಇನ್ನೂ ಚರ್ಚಿಸುತ್ತಿದ್ದಾರೆ’ ಎಂದ ಅವರು, ಬಿಜೆಪಿ ಜತೆ ನಂಟು ಬೆಳೆಸುವ ಸುಳಿವು ನೀಡಿದರು.
‘ಯಾವ ಪಕ್ಷದ ಜತೆ ಸೇರಿ ರಚಿಸಿದರೂ ಪಕ್ಷದ ಪ್ರಣಾಳಿಕೆಯ ಪ್ರಮುಖ ಭರವಸೆಗಳನ್ನು ಆ ಪಕ್ಷ ಒಪ್ಪಿಕೊಳ್ಳುವುದಾಗಿ ಸ್ಪಷ್ಟ ಆಶ್ವಾಸನೆ ನೀಡಬೇಕು’ ಎಂದು ಅಖ್ತರ್ ಹೇಳಿದರು.
ಅಚ್ಚರಿಯ ಬೆಳವಣಿಗೆ: ರಾಜಕೀಯ ಬದ್ಧ ವೈರಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ನೀಡಿದ್ದ ಬೆಂಬಲದ ಹೊರತಾಗಿಯೂ ವಿಭಿನ್ನ ಸೈದ್ಧಾಂತಿಕ ನಿಲುವು ಹೊಂದಿರುವ ಬಿಜೆಪಿ ಜತೆ ನಂಟು ಬೆಳೆಸಲು ಮುಂದಾಗಿರುವ ಪಿಡಿಪಿ ನಿರ್ಧಾರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.