ಗಲ್ಫ್

ದುಬೈಯಲ್ಲಿ ‘ದಿ ವಿಲನ್’ ಚಿತ್ರದ ಅದ್ಧೂರಿ ಆಡಿಯೋ ಬಿಡುಗಡೆ ! ಹೊಸ ಇತಿಹಾಸಕ್ಕೆ ಸಾಕ್ಷಿಯಾದ ಶಿವಣ್ಣ, ಅಂಬರೀಷ್, ಪ್ರೇಮ್

Pinterest LinkedIn Tumblr

ದುಬೈ: ಖ್ಯಾತ ನಿರ್ದೇಶಕ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಅದ್ಧೂರಿ ಆಡಿಯೋ ರಿಲೀಸ್ ಸಮಾರಂಭ ದುಬೈನ ಲೀಮೆರೀಡಿಯನ್ ನ ಗ್ರೇಟ್ ಬಾಲ್’ರೂಮಿನಲ್ಲಿ ಶುಕ್ರವಾರ ನಡೆಯುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ‘ದಿ ವಿಲನ್’ ಚಿತ್ರವನ್ನು ಸಿನಿ ರಸಿಕರು ಕಾತುರದಿಂದ ಕಾಯುತ್ತಿದ್ದು, ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಬಂದಿದ್ದು, ಇದೀಗ ಕನಸಿನ ನಗರಿ ದುಬೈಯಲ್ಲಿ ಚಿತ್ರದ ಆಡಿಯೋ ರಿಲೀಸ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದೆ.

ಕನ್ನಡ ಚಲನಚಿತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದುಬೈಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕನ್ನಡಿಗರ ಸಮ್ಮುಖದಲ್ಲಿ ಚಿತ್ರದ ಸಿಡಿಯನ್ನು ಬಿಡುಗಡೆ ಮಾಡಲಾಯಿತು.

‘ದಿ ವಿಲನ್’ ಸಿನೆಮಾದ ನಾಯಕ ನಟರು ಸೇರಿದಂತೆ ಇಡೀ ಚಿತ್ರ ತಂಡವೇ ಈ ಅದ್ದೂರಿ ಸಮಾರಂಭಕ್ಕೆ ಸಾಕ್ಷಿಯಾದರು. ಡಾ. ಶಿವರಾಜ್ ಕುಮಾರ್, ಹಿರಿಯ ನಟ ಅಂಬರೀಷ್, ಆಮಿ ಜಾಕ್ಸನ್, ನಟ ಶ್ರೀಕಾಂತ್, ನಿರ್ದೇಶಕ ಪ್ರೇಮ್, ಸಂಗೀತ ನಿರ್ದೇಶ ಅರ್ಜುನ್ ಜನ್ಯ, ನಿರ್ಮಾಪಕ ಸಿ. ಮನೋಹರ್, ಹರ್ಷಿಕಾ ಪೂಣಚ್ಚ, ಕಾರುಣ್ಯಾ ರಾಮ್, ಭಾವನಾ ರಾವ್, ಶ್ರುತಿ ಪ್ರಕಾಶ್, ಸೋನು ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಆಡಿಯೋ ಬಿಡುಗಡೆಯ ಸಮಾರಂಭದಲ್ಲಿ ಮನರಂಜನೆಯ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗಿತ್ತು. ನಟ ಶಿವರಾಜ್ ಕುಮಾರ್ ಡಾನ್ಸ್ ಮಾಡಿ್ದರೆ, ಪ್ರೇಮ್ ಹಾಡಿ ಎಲ್ಲರನ್ನು ರಂಜಿಸಿದರು.

ಕಾರ್ಯಕ್ರಮಕ್ಕೆ ಗೈರಾದ ಕಿಚ್ಚ ಸುದೀಪ್

ಆಡಿಯೋ ಬಿಡುಗಡೆಯ ಸಮಾರಂಭದಲ್ಲಿ ಇಡೀ ಚಿತ್ರ ತಂಡವೇ ಪಾಲ್ಗೊಂಡಿದ್ದರೂ ನಟ ಕಿಚ್ಚ ಸುದೀಪ್ ಗೈರಾಗಿದ್ದದ್ದು ಎಲ್ಲರಲ್ಲಿ ನಿರಾಸೆ ಮೂಡಿಸಿತ್ತು. ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ಸುದೀಪ್ ಕೊನೆಯ ಗಳಿಗೆಯಲ್ಲಿ ಕಾರಣಾಂತರದಿಂದ ಮಿಸ್ಸಾಗಿದ್ದು, ಸುದೀಪ್’ನ್ನು ಕಾಣಲು ಬಂದಿದ್ದ ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡುವಂತೆ ಮಾಡಿತ್ತು.

ದುಬೈಯ ACME ಬಿಲ್ಡಿಂಗ್ ಮೆಟೀರಿಯಲ್ಸ್ನ್ ಆಡಳಿತ ನಿರ್ದೇಶಕ, ಕನ್ನಡ ಚಿತ್ರ ನಿರ್ಮಾಪಕ, ಖ್ಯಾತ ಗಾಯಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್’ನ ಮಾಲಕ ಪ್ರವೀಣ್ ಶೆಟ್ಟಿ, ಉದ್ಯಮಿಗಳಾದ ರಾಜ್ ಶೆಟ್ಟಿ, ಗುಣಶೀಲ ಶೆಟ್ಟಿ, ಹರೀಶ್ ಬಂಗೇರ, ಪ್ರೇಮ್ ಶೆಟ್ಟಿ, ಗ್ರ್ಯಾಂಡ್ ಬ್ಲೂಮ್ ಕಂಪನಿಯ ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ಮೀಡಿಯಾ ಫಾರಂ’ನ ನೋಯೆಲ್ ಅಲ್ಮೇಡಾ, ಇಮ್ರಾನ್ ಖಾನ್ ಎರ್ಮಾಳ್, ಚಂದ್ರಕಾಂತ್, ನವೀದ್, ಹಿದಾಯತ್, ಸುನಿಲ್, ಸಿರಾಜ್ ಪರ್ಲಡ್ಕ, ಪೀಟರ್, ಜನನಿ, ಸಲೀಂ, ಅಲ್ತಾಫ್, ಅನ್ಸಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Photo: KMF UAE

Comments are closed.