ಅಂತರಾಷ್ಟ್ರೀಯ

25 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ್ರೂ ಕೈಯಲ್ಲಿ ತೊಗಟೆ ಬೆಳೆಯುವುದು ನಿಂತಿಲ್ಲ!

Pinterest LinkedIn Tumblr

ಢಾಕಾ: ವರ್ಷದ ಹಿಂದೆ ಬಾಂಗ್ಲಾದೇಶದ ವ್ಯಕ್ತಿಯೊಬ್ಬರ ಮೈತುಂಬಾ ತೊಗಟೆ ರೀತಿಯಲ್ಲಿ ಬೆಳೆದು ಶಸ್ತ್ರಚಿಕಿತ್ಸೆ ನಂತರ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವೈದ್ಯರು ಹೇಳಿದ್ರು. ಆದ್ರೆ 25 ಬಾರಿ ಶಸ್ತ್ರಚಿಕಿತ್ಸೆಯ ನಂತರವೂ ಆ ವ್ಯಕ್ತಿಯ ಕೈಯಲ್ಲಿ ಮತ್ತೆ ತೊಗಟೆ ಬೆಳೆಯಲು ಶುರುವಾಗಿದೆ.

ರಿಕ್ಷಾ ತಳ್ಳುವ ಕೆಲಸ ಮಾಡಿಕೊಂಡಿದ್ದ ಅಬುಲ್ ಬಜಂದರ್ ಈ ರೀತಿಯ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು `ಟ್ರಿ ಮ್ಯಾನ್’ ಅಂತಾನೇ ಕರೆಯಲಾಗುತ್ತಿದೆ.

24ನೇ ಬಾರಿಯ ಶಸ್ತ್ರಚಿಕಿತ್ಸೆಯ ಬಳಿಕ ಇವರ ಕೈ ಹಾಗೂ ಕಾಲುಗಳಲ್ಲಿ ಬೆಳೆದಿದ್ದ ತೊಗಟೆ ರೀತಿಯ ಅಂಶವನ್ನು ತೆಗೆದ ನಂತರ ಕಾಯಿಲೆ ವಾಸಿಯಾಗಿರುವುದಾಗಿ ವೈದ್ಯರು ಹೇಳಿದ್ದರು. ಅದಾಗಿ ವರ್ಷ ಕಳೆಯುವಷ್ಟರಲ್ಲಿ ಬಜಂದರ್ ಕೈಯಲ್ಲಿ ಮತ್ತೆ ತೊಗಟೆಯ ಬೆಳವಣಿಗೆ ಶುರುವಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಖಾಯಿಲೆಯನ್ನ ಗುಣಪಡಿಸಿದ್ದು ವೈದ್ಯಕೀಯ ಇತಿಹಾಸದಲ್ಲೇ ಮೇಲುಗಲ್ಲು ಎಂದು ವೈದ್ಯರು ಹೇಳಿಕೊಂಡಿದ್ದರು. ಆದ್ರೆ ಇದೀಗ ಅದೇ ಕಾಯಿಲೆಯಿಂದ ಅವರು ಬಳಲುತ್ತಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊದಲನೇ ಬಾರಿಗಿಂತಲೂ ಈ ಬಾರಿ ಈ ಪ್ರಕರಣ ನಮಗೆ ಅತ್ಯಂತ ದೊಡ್ಡ ಸವಾಲಾಗಿದೆ ಅಂತ ಸರ್ಜನ್ ಸಮಂತ್ ಲಾಲ್ ಸೇನ್ ಹೇಳಿದ್ದಾರೆ.

ಈ ಕಾಯಿಲೆಯಿಂದ ಬಳುತ್ತಿರುವ ಹಿನ್ನೆಲೆಯಲ್ಲಿ ಬಜಂದರ್ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿಲ್ಲ. ಹೀಗಾಗಿ ಇವರ ಜೊತೆ ಕುಟುಂಬವೂ ಆಸ್ಪತ್ರೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಮತ್ತೆ ನನ್ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುತ್ತಾರಾ ಎಂಬ ಆತಂಕ ಶುರುವಾಗಿದೆ. ಇದರಿಂದ ನನ್ನ ಕೈ ಹಾಗೂ ಪಾದಗಳು ಸರಿಯಾಗುತ್ತದೆ ಎಂಬ ಭರವಸೆ ನನಗಿಲ್ಲ ಎಂದು ಢಾಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 27 ವರ್ಷದ ಬಜಂದರ್ ಹೇಳಿದ್ದಾರೆ. ಬಜಂದರ್ ಅವರು ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ ಶಸ್ತ್ರ ಚಿಕಿತ್ಸೆ ಮಾಡಿ ಕೈ ಮತ್ತು ಕಾಲಿನಿಂದ ಸುಮಾರು 5 ಕೆಜಿ ತೂಕದ ಮರದಂತೆ ಬೆಳೆದ ಭಾಗವನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಮತ್ತೆ ಶಸ್ತ್ರ ಚಿಕಿತ್ಸೆ ಪಡೆಯಲು ಅವರು ಭಯಪಡುತ್ತಿದ್ದಾರೆ.

ಇದೇ ಆಸ್ಪತ್ರೆಯ ಒಂದು ಪುಟ್ಟ ಕೋಣೆಯಲ್ಲಿ ಬಜಂದರ್ ಪತ್ನಿ ಹಾಗೂ 4 ವರ್ಷದ ಮಗಳು ಕೂಡ ವಾಸವಾಗಿದ್ದಾರೆ. ಇದೇ ವಾರ ಬಜಂದರ್ 25ನೇ ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. 4 ವರ್ಷದ ಮಗಳನ್ನ ನೋಡಿಕೊಳ್ಳುತ್ತಿರೋ ಬಜಂದರ್ ಪತ್ನಿ ಗಂಡನ ಆರೋಗ್ಯ ಸುಧಾರಿಸಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

ಬಜಂದರ್ ಅವರ ವಿಚಿತ್ರ ಕಾಯಿಲೆಗೆ ಈವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಬಜಂದರ್ ತನ್ನ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಹೇಗೆ ಎಂಬ ಚಿಂತಿಯಲ್ಲಿದ್ದಾರೆ. ನನ್ನ ಮಗಳು ಡಾಕ್ಟರ್ ಆಗಬೇಕೆಂದು ಯಾವಾಗ್ಲೂ ಬಯದಿದ್ದೆ. ಆದ್ರೆ ನನ್ನ ಸ್ಥಿತಿ ಮತ್ತಷ್ಟು ಹದಗೆಟ್ಟರೆ ಆಕೆಯನ್ನು ಶಾಲಾಗೆ ತಾನೇ ಹೇಗೆ ಕಳಿಸಲಿ ಎಂದು ಬಂಜಂದರ್ ಚಿಂತೆಯಲ್ಲಿದ್ದಾರೆ.

ಬಜಂದರ್ ಬಳಲುತ್ತಿರುವ ಕಾಯಿಲೆಗೆ ಎಪಿಡರ್ಮೊ ಡಿಸ್ಪ್ಲೇಸಿಯಾ ವೆರುಸಿಫಾರ್ಮಿಸ್ ಎಂದು ಕರೆಯಲಾಗುತ್ತದೆ. ಅಪರೂಪದಲ್ಲಿ ಅಪರೂಪವೆಂಬಂತೆ ಜಗತ್ತಿನಾದ್ಯಂತ ಅರ್ಧ ಡಜನ್ ನಷ್ಟು ಮಂದಿ ಈ ಕಾಯಿಲೆ ಹೊಂದಿದ್ದಾರೆ. ಮರದ ತೊಗಟೆಯಂತೆ ಬೆಳೆಯುವ ಕಾರಣ ಇದಕ್ಕೆ ಟ್ರಿ ಮ್ಯಾನ್ ಡಿಸೀಸ್ ಅಂತಲೂ ಕರೆಯಲಾಗುತ್ತದೆ.

ಈ ಬಗ್ಗೆ ಮತ್ತಷ್ಟು ತನಿಖೆ ಮಾಡಿ ಅವರ ಕಾಯಿಲೆ ಗುಣಪಡಿಸಿ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದೇವೆ. ಆದ್ರೆ ಇದಕ್ಕೆ ಎಷ್ಟು ಸಮಯ ಹಿಡಿಯುತ್ತದೆಂದು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Comments are closed.