ಮನಾಮ, ಬಹ್ರೈನ್: ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯವರು ನಡೆಸಿರುವ ಏಪ್ರಿಲ್-2014ರ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾಗಿ ಉತ್ಕೃಷ್ಟ ಶೈಕ್ಷಣಿಕ ಸಾಧನೆಯನ್ನು ಗೈದಿರುವ ಮೊಗವೀರ ಸಮುದಾಯದ ವಿದ್ಯಾರ್ಥಿಗಳಿಗೆ ಕೊಡಮಾಡಲು ಉದ್ದೇಶಿಸಿರುವ ಶೈಕ್ಷಣಿಕ ಸಾಧನಾ ಪ್ರಶಸ್ತಿಗಳಿಗೆ ಮೊಗವೀರ್ಸ್ ಬಹ್ರೈನ್ ಸಂಸ್ಥೆಯು ತನ್ನ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಅದರಂತೆ ಪ್ರಶಸ್ತಿಗಳಿಗೆ ಅರ್ಹರಾಗುವ ವಿಜೇತರ ವಿವರಗಳು ಈ ರೀತಿ ಇವೆ;
ಪ್ರಥಮ: ಪ್ರಜ್ಞಾ ಹೇಮನಾಥ್ ಪುತ್ರನ್, ಹೆಜಮಾಡಿ ಕೋಡಿ [98.88%], ದ್ವಿತೀಯ: ನಿತೀಶ್ ಕುಮಾರ್ ಶಂಕರ್, ಕಿರಿಮಂಜೇಶ್ವರ [96.00%] ಹಾಗೂ ತೃತೀಯ: ಪುನೀತ್ ಕರುಣಾಕರ್ ಕರ್ಕೇರ, ಮಟ್ಟು ಕಟಪಾಡಿ [94.08%].
ಅದೇ ರೀತಿ ಸಂಸ್ಥೆಯು 90% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಅತ್ಯುತ್ತಮ ಶೈಕ್ಷಣಿಕ ನಿರ್ವಹಣೆಯನ್ನು ತೋರಿರುವ ಸ್ವಸಮುದಾಯದ ಇತರ ಐದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಕ ಪ್ರಶಸ್ತಿಗೆ ಆಯ್ಕೆಗೊಳಿಸಿದ್ದು, ಅದರಂತೆ ತೆಕ್ಕಟ್ಟೆ ಭಗವತಿ ನಾರಾಯಣ, ಐರೋಡಿ ವರ್ಷಾ ಶಂಕರ, ಕಡೆಕಾರು ಭಾಗ್ಯಶ್ರೀ ಶಂಕರ, ಕೋಟೇಶ್ವರ ನೂಪುರ ಆನಂದ, ಹೆಬ್ರಿ ವರ್ಷಿತಾ ರತ್ನಾಕರ ಇವರೆಲ್ಲಾ ಆ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ಗತ ಹತ್ತು ವರ್ಷಗಳಿಂದಲೂ ಸಂಸ್ಥೆಯ ಅಗ್ರ ಪ್ರಾಶಸ್ತ್ಯದ ಕಾರ್ಯಕ್ರಮವಾಗಿ ಮೂಡಿ ಬಂದಿರುವ ಈ ಶೈಕ್ಷಣಿಕ ಸಾಧಕರ ಸಮ್ಮಾನ ಕಾರ್ಯಕ್ರಮದನ್ವಯ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪ್ರೋತ್ಸಾಹಕ ಪ್ರಶಸ್ತಿ ವಿಜೇತರೆಲ್ಲರೂ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಶಾಲು ಸಹಿತ ಅನುಕ್ರಮವಾಗಿ ರೂ.10,000, ರೂ.7,000, ರೂ.5,000 ಹಾಗೂ ತಲಾ ರೂ.2,000 ದ ನಗದು ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.
ಅಂತೆಯೇ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿನಿ ಕಾವ್ರಾಡಿ ವಿನಯ ರಾಮ ಮೊಗವೀರ ಅವರನ್ನು ಸಂಸ್ಥೆಯು ಪ್ರತ್ಯೇಕ ವಿದ್ಯಾರ್ಥಿವೇತನಕ್ಕೆ ಆಯ್ಕೆಗೊಳಿಸಿದ್ದು, ಅವರೂ ತಮ್ಮ ಶೈಕ್ಷಣಿಕ ಸಾಧನೆಗಾಗಿ ಪುರಸ್ಕಾರ ಸಹಿತ ರೂ.3,000 ಮೊತ್ತದ ಶೈಕ್ಷಣಿಕ ಅನುದಾನವನ್ನು ಸ್ವೀಕರಿಸಲಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಇದೇ ದಶಂಬರ ತಿಂಗಳ 28ರಂದು ಉಡುಪಿಯ ಮೊಗವೀರ ಯುವ ಸಂಘಟನೆ, ಮಲ್ಪೆ ಇವರ ಸಹಯೋಗದಲ್ಲಿ ಏಳೂರು ಮೊಗವೀರ ಸಭಾ ಭವನ, ಮಲ್ಪೆ ಇಲ್ಲಿ ಜರುಗಲಿರುವುದು.
ಸಂಸ್ಥೆಯ ಈ ಬಾರಿಯ ಪ್ರಶಸ್ತಿಗಳ ಮುಖ್ಯ ಪ್ರಾಯೋಜಕರಾಗಿ ಪ್ರಥಮ ಪ್ರಶಸ್ತಿಯನ್ನು ಸುಭಾಶ್ಚಂದ್ರ ಶೀರೂರು, ದ್ವಿತೀಯ ಪ್ರಶಸ್ತಿಯನ್ನು ಶಮಿತ್ ಕುಂದರ್ ಮತ್ತು ತೃತೀಯ ಪ್ರಶಸ್ತಿಯನ್ನು ಕೋದಂಡರಾಮ ಸಾಲಿಯಾನ್ ಇವರು ನೀಡಿರುತ್ತಾರೆ ಹಾಗೂ ಸಹ ಪ್ರಾಯೋಜಕರಾಗಿ ಲೀಲಾಧರ್ ಬೈಕಂಪಾಡಿ, ಗಿರೀಶ್ ಇಡ್ಯಾ, ತೀರ್ಥ ಸುವರ್ಣ, ಸುರೇಶ್ ಅಮೀನ್, ಪುನೀತ್ ಪುತ್ರನ್, ಪದ್ಮನಾಭ ಕಾಂಚನ್, ವಿನೋದ್ ಶ್ರೀಯಾನ್, ಚಂದ್ರಶೇಖರ ಮೆಂಡನ್, ಮನೋಜ್ ಸುವರ್ಣ, ಜನಾರ್ಧನ ತಿಂಗಳಾಯ ಮತ್ತು ಅರುಣ್ ಕಿದಿಯೂರು ಮುಂತಾದವರು ಸಹಕರಿಸಿರುತ್ತಾರೆ.
ಪ್ರಶಸ್ತಿ ವಿಜೇತರೆಲ್ಲರನ್ನೂ ಅಭಿನಂದಿಸಿರುವ ಸಂಸ್ಥೆಯ ದಶಮಾನೋತ್ಸವ ಅವಧಿಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಅಮೀನ್, ತೊಟ್ಟಂ [+973-39206045] ಅಥವಾ ಸ್ಥಳೀಯ ಕಾರ್ಯಕ್ರಮ ಸಂಯೋಜಕರ ಪರವಾಗಿ ಚಂದ್ರಕಾಂತ ಮಲ್ಪೆ [9980784769] ಇವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.