ಮಂಗಳೂರು, ಮೇ 22: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ನಡೆದ ಏರ್ ಇಂಡಿಯಾ ವಿಮಾನ ಮಹಾದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ರವಿವಾರ ಕೂಳೂರಿನ “ಸ್ಮಾರಕ ಪಾರ್ಕ್”ನಲ್ಲಿ ನಡೆಯಿತು.
ಈ ಸಂದರ್ಭ ವಿಮಾನ ಮಹಾದುರಂತದಲ್ಲಿ ಸಾವನ್ನಪ್ಪಿ ಅಗಲಿದ ಪ್ರಯಾಣಿಕರ ಅತ್ಮಕ್ಕೆ ಶಾಂತಿ ಕೋರಿ ಮೌನಪ್ರಾರ್ಥನೆ ಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ಮಾತ್ರವಲ್ಲದೇ ಇದೇ ಸಂದರ್ಭದಲ್ಲಿ ಅಗಲಿದ ಪ್ರಯಾಣಿಕರ ನೆನಪಿಗೆ ಸ್ಮಾರಕ ಪಾರ್ಕ್ ನಲ್ಲಿ ಗಿಡಗಳನ್ನು ನೆಡಲಾಯಿತು.
ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ,ಮಂಗಳೂರು ವಿಮಾನ ದುರಂತ ದೇಶದಲ್ಲಿ ಸಂಭವಿಸಿದ ಭೀಕರ ದುರಂತವಾಗಿದೆ. ದುರಂತದಲ್ಲಿ ಮಡಿದವರ ನೆನಪಿಗಾಗಿ ಎನ್ ಎಂ ಪಿ ಟಿ ಯ ಜಾಗದಲ್ಲಿ ಎನ್ ಎಂಪಿಟಿಯವರು ಈ ಸ್ಮಾರಕ ಪಾರ್ಕ್ ಆನು ನಿರ್ಮಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ದುರಂತದಲ್ಲಿ ಮಡಿದವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ, ಜೊತೆಗೆ ದುರಂತದಲ್ಲಿ ಪ್ರಾಣ ತೆತ್ತ ಪ್ರಯಾಣಿಕರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು.
ಶ್ರದ್ಧಾಂಜಲಿ ಸಲ್ಲಿಸಿ, ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ ಅವರು ಮಾತನಾಡಿ, ವಿಮಾನ ದುರಂತದಲ್ಲಿ ಸಾವನ್ನಪಿದ 158 ಮಂದಿಯಲ್ಲಿ 12 ಮಂದಿಯನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಗುರುತಿಸಲಾಗದ ಮೃತದೇಹವನ್ನು ಈ ಜಾಗದಲ್ಲಿ ಅಂತ್ಯಸಂಸ್ಕಾರಗೈದ ಹಿನ್ನೆಲೆಯಲ್ಲಿ ಎನ್ ಎಂಪಿಟಿಯವರಲ್ಲಿ ವಿನಂತಿಸಿ 60 ಲಕ್ಷ ವೆಚ್ಚದಲ್ಲಿ ಸ್ಮಾರಕ ಪಾರ್ಕ್ ನಿರ್ಮಿಸಲಾಗಿದೆ. ಇನ್ನು 9 ಲಕ್ಷ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಸಗುವುದು. ಏರ್ ಪೋರ್ಟ್ ಅಥಾರಿಟಿ ಅಥವಾ ಏರ್ ಇಂಡಿಯಾರವರಲ್ಲಿ ಇದರ ನಿರ್ವಹಣೆ ಮಾಡಲು ವಿನಂತಿಸಲಾಗುವುದು. ಅವರು ಒಪ್ಪದಿದ್ದರೆ ಮನಪಾಕ್ಕೆ ವಿನಂತಿಸಲಾಗುವುದು. ವಿಮಾನ ದುರಂತದಲ್ಲಿ ಸಾವನ್ನಪ್ಪಿದ 158 ಮಂದಿಯ ಹೆಸರನ್ನು ಸ್ಮಾರಕ ದಲ್ಲಿ ನಮೂದಿಸಲಾಗುವುದು. ಈ ಸ್ಥಳದಲ್ಲಿ ಸಂತ್ರಸ್ತ ಕುಟುಂಬಗಳು ಗಿಡಗಳನ್ನು ನೆಡಬಹುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಡಿಸಿಪಿ ಶಾಂತರಾಜು, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ರಾಧಕೃಷ್ಙನ್, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮನಪಾ ಕಮೀಷನರ್ ಗೋಪಾಲಕೃಷ್ಣ , ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಮೊದಲಾದವರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
Comments are closed.