ಮಂಗಳೂರು, ಏ.05: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ವತಿಯಿಂದ ತುಳುನಾಡು ರಕ್ಷಣಾ ವೇದಿಕೆ ಇದರ ಸಹಯೋಹದಲ್ಲಿ ತುಳುನಾಡ ಸ್ವಾತಂತ್ರ್ಯ ಪೊರುಂಬಾಟದ ನೆಂಪು ಕಾರ್ಯಕ್ರಮ ಮಂಗಳವಾರ ಮುಂಜಾನೆ ಪ್ರಾರಂಭಗೊಂಡಿತು. ಮುಂಜಾನೆ ಜ್ಯೋತಿ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಸ್ಟೇಟ್ಬ್ಯಾಂಕ್ ತನಕ ಸಾಗಿಬಂತು.
ಧರ್ಮದರ್ಶಿ ಹರಿಕೃಷ್ಣ ಪುನರೂರು, ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ರಾಮಚಂದ್ರ ಬೈಕಂಪಾಡಿ ಮತ್ತಿತರರು ಪಾಲ್ಗೊಂಡಿದ್ದರು. ಸಂಜೆ 3.30ಕ್ಕೆ ಉರ್ವಾಸ್ಟೋರ್ನಲ್ಲಿರುವ ತುಳುಭವನದ ‘ಸಿರಿ ಚಾವಡಿ’ಯಲ್ಲಿ ವಿದೇಶಿಯರ ಆಡಳಿತದ ವಿರುದ್ಧ ನಡೆದ ತುಳುನಾಡ ಸ್ವಾತಂತ್ರ್ಯ ಹೋರಾಟದ ನೆಂಪು ಕಾರ್ಯಕ್ರಮ ನಡೆಯಲಿದೆ.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಂ.ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಅಕಾಡೆಮಿ ಮಾಜಿ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್ ಸಂಪಾಜೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.