ಕುಂದಾಪುರ: ಕೆ.ಎಸ್.ಆರ್.ಟಿ.ಸಿ. ಬಸ್ಸು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು, ಸಹಸವಾರ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕುಂಭಾಸಿಯ ಆನೆಗುಡ್ಡೆ ಸ್ವಾಗತ ಗೋಪುರದ ಎದುರಿನ ರಾಷ್ಟ್ರೀಯ ಹೆದ್ದಾರಿಯ ಡಿವೈಡರಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಹರೆಗೋಡು ನಿವಾಸಿ ಕೇಶವ ಎನ್ನುವವರು ಗಂಭೀರವಾಗಿ ಗಾಯಗೊಂದ ಬೈಕ್ ಸವಾರ. ಹಿಂಬದಿ ಸವಾರ ಉಮೇಶ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ.
ಘಟನೆ ವಿವರ: ಕುಂದಾಪುರ ಕೆ.ಎಸ್.ಆರ್.ಟಿ.ಸಿ. ಡಿಪ್ಪೋದಲ್ಲಿ ಬಸ್ಸಿನ ಸಣ್ಣಪುಟ್ಟ ರಿಪೇರಿ ಕೆಲಸ ಮುಗಿಸಿಕೊಂಡು ತಪಾಸಣೆಗಾಗಿ ಚಾಲನೆಮಾಡಿಕೊಂಡು ಬಂದು ಕುಂಭಾಸಿ ಡಿವೈಡರ್ ಸಮೀಪ ಬಸ್ಸನ್ನು ತಿರುಗಿಸುವ ವೇಳೆ ಅದೇ ಮಾರ್ಗವಾಗಿ ಬಂದ ಬೈಕ್ ಬಸ್ಸಿಗೆ ಡಿಕ್ಕಿಯಾಗಿದೆ ಅಲ್ಲದೇ ಅಪಘಾತದ ತೀವ್ರತೆಗೆ ಬೈಕ್ ಬಸ್ಸಿನ ಅಡಿಭಾಗಕ್ಕೆ ತೂರಿ ಹೋಗಿತ್ತು. ಬಸ್ಸಿನ ಅಡಿಗೆ ಬಿದ್ದ ಕೇಶವ ಅವರ ಬೆನ್ನು ಹಗೂ ಕಾಲು ಭಾಗಕ್ಕೆ ಗಂಭೀರ ಏಟಾಗಿದೆ. ಬಸ್ಸು ಚಾಲಕ ಯಾವುದೇ ಸೂಚನೆ ನೀಡದೇ ಏಕಾಏಕಿ ಬಸ್ಸು ತಿರುಗಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಲಗ್ನಪತ್ರಿಕೆ ಹಂಚಲು ಹೊರಟಿದ್ದರು..
ಬೈಕಿನಲ್ಲಿ ಬರುತ್ತಿದ್ದ ಕೇಶವ್ ಹಾಗೂ ಉಮೇಶ್ ಅವರು ಮುಮ್ದಿನ ವಾರ ನಡೆಯಲಿದ್ದ ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳುತ್ತಿದ್ದರು ಎನ್ನಲಾಗಿದ್ದು ಬ್ಯಾಗೊಂದರಲ್ಲಿ ಆಮಂತ್ರಣ ಪತ್ರಿಕೆಗಳು ಸಿಕ್ಕಿದೆ. ಇಬ್ಬರು ಹೆಲ್ಮೆಟ್ ಧರಿಸಿದ್ದ ಕಾರಣ ತಲೆಗೆ ಪೆಟ್ಟು ಬೀಳುವುವುದು ತಪ್ಪಿದೆ.
ಬ್ಯಾರಿಕೇಡ್ ಇರಲಿಲ್ಲ..!
ಒಂದೆರಡು ವರ್ಷಗಳ ಅಂತರದಲ್ಲಿ ಈ ಭಾಗದಲ್ಲಿ ಹಲವು ಅಪಘಾತಗಳನ್ನು ನಡೆದಿದ್ದು ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೆದ್ದಾರಿಯ ಎರಡು ಕಡೆಗಳಿಗೆ ತಲಾ ಮೂರು ಬ್ಯಾರಿಕೇಡ್ ಅಳವಡಿಸುವ ಕಾರ್ಯ ಈ ಹಿಂದೆ ನಡೆದಿದ್ದರೂ ಕೂಡ ರಾತ್ರಿ ವೇಳೆ ಈ ಬ್ಯಾರಿಗೇಟ್ಗಳನ್ನು ಕಿಡಿಗೇಡಿಗಳು ರಸ್ತೆ ಬದಿಗೆ ಸರಿಸುವ ಕೆಲಸ ಮಾಡುತ್ತಿದ್ದಾರೆ. ಡಿವೈಡರ್ ಸಮೀಪ ಒಂದೊಮ್ಮೆ ಬ್ಯಾರಿಕೇಡ್ ಇದ್ದರೇ ಈ ಅಪಘಾತ ನಡೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಬಸ್ಸು ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಅಪಘಾತದ ಬಳಿಕ ಅರ್ಧಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.