ಕನ್ನಡ ವಾರ್ತೆಗಳು

ಏಪ್ರಿಲ್ 25ರ ನಂತರ ಟ್ರಿವಲೆಂಟ್ ಒರಲ್ ಪೋಲೀಯೋ ನಿಷೇದ: ಎ.ಬಿ. ಇಬ್ರಾಹಿಂ

Pinterest LinkedIn Tumblr

dc_meet_1

ಮ೦ಗಳೂರು,ಏ.01:  ವಿಶ್ವದಾದ್ಯಂತ ಪೋಲಿಯೋ ನಿರ್ಮೂಲನೆಗೆ ಪೋಲಿಯೋ ಕಾರಕ ಮೂರು ವೈರಾಣುಗಳ ವಿರುದ್ಧ ನೀಡಲಾಗುತ್ತಿದ್ದ ಟ್ರಿವಲೆಂಟ್ ಒರಲ್ ಪೋಲೀಯೋ ಲಸಿಕೆಯನ್ನು ಏಪ್ರಿಲ್ 25 ರ ನಂತರ ಮಕ್ಕಳಿಗೆ ನೀಡುವುದು ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಅವರು ಇಂದು ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪೋಲಿಯೋ  ಕಾರಕ 3 ವೈರಾಣುಗಳಲ್ಲಿ ಎರಡನೇ ವೈರಾಣುವನ್ನು ಈಗಾಗಲೇ ನಿರ್ಮೂಲನೆ ಮಾಡಲಾಗಿದ್ದು, ಇನ್ನು ಮುಂದೆ ಟ್ರಿವಲೆಂಟ್ ಒರಲ್ ಪೋಲಿಯೋ ಹನಿಗಳ ಬದಲಾಗಿ ಬೈವಲೆಂಟ್ ಒರಲ್ ಪೋಲಿಯೋ ಹನಿಗಳನ್ನು ನೀಡಬೇಕು, ಇದರ ಜೊತೆ ಇನ್‌ಆಕ್ಟಿವ್ ಪೋಲಿಯೋ ವ್ಯಾಕ್ಸಿನ್‌ನ್ನು ಚುಚ್ಚುಮದ್ದು ರೂಪದಲ್ಲಿ ನೀಡಿದಲ್ಲಿ ಅದು ಅತ್ಯಂತ ಪರಿಣಾಮಕಾರಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕನ್ಸಲ್‌ಟೆಂಟ್ ಡಾ. ಸತೀಶ್ ಸಭೆಗೆ ಮಾಹಿತಿ ನೀಡಿದರು.

ಟ್ರಿವಲೆಂಟ್ ಲಸಿಕೆ ಮಾರಾಟ ಮಾಡುವುದು ಅದನ್ನು ಮಕ್ಕಳಿಗೆ ನೀಡುವುದು ಏಪ್ರಿಲ್ 25 ರ ನಂತರ ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬಹುದಾಗಿದೆ. ಆದ್ದರಿಂದ ಸರ್ಕಾರಿ ಖಾಸಗಿ ವೈದ್ಯಕೀಯ, ಔಷಧ ಮಾರಾಟಗಾರರು ತಮ್ಮಲ್ಲಿರುವ ಟ್ರಿವಲೆಂಟ್ ಲಸಿಕೆ ಬಾಕಿ ದಾಸ್ತಾನನ್ನು ಆರೋಗ್ಯ ಇಲಾಖೆಗೆ ಒಪ್ಪಿಸಬೇಕು ಎಂದು ಡಾ. ಸತೀಶ್ ತಿಳಿಸಿದ್ದಾರೆ.

ಟ್ರಿವಲೆಂಟ್ ಬದಲಿಗೆ ಬೈವಲೆಂಟ್ ನೀಡುವುದರ ಬಗ್ಗೆ ಗ್ರಾಮ ಪಂಚಾಯ್ತಿ ಮಟ್ಟದಿಂದ ಅರಿವು ಮೂಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀ ವಿದ್ಯಾ ತಿಳಿಸಿದ್ದಾರೆ.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ರಾಮಕೃಷ್ಣ ರಾವ್, ಖಾಸಗಿ, ವೈದ್ಯಕೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment