ಕುಂದಾಪುರ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಎರಡನೇಯ ಅವಧಿಗಾಗಿ ಮಾರ್ಚ್ 24ರಂದು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಚುನಾವಣೆ ಆಯೋಜಿಸಲಾಗಿತ್ತು. ಆದರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಸುಮತಿ ನಾಗೇಶ್ ನಾಯರಿ ಅಧ್ಯಕ್ಷರಾಗಿ, ಬಿಜೆಪಿಯ ಉದಯ ಪೂಜಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
(ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಸುಮತಿ ನಾಗೇಶ್ ನಾಯರಿ)
(ಬಿಜೆಪಿಯ ಉದಯ ಪೂಜಾರಿ)
ಅವಿರೋಧ ಆಯ್ಕೆ…
ಕಾಂಗ್ರೆಸ್ ಪಕ್ಷದ ಮೂವರು ಮಹಿಳಾ ಸದಸ್ಯರಾದ ವಸುಮತಿ ನಾಗೇಶ್ ನಾಯಿರಿ, ಕುಸುಮ ಬಸವ ಪೂಜಾರಿ ಮತ್ತು ರತ್ನಾ ನಾಗರಾಜ್ ಗಾಣಿಗ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವಿದ್ದರು, ಇನ್ನ್ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆದಿದೆ. ವಸುಮತಿ ನಾಗೇಶ್ ನಾಯರಿ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಕುರಿತು ಬಿಜೆಪಿಯ ಸದಸ್ಯ ಭೋಜ ಪೂಜಾರಿ ಸೂಚಕರಾಗಿದ್ದರು. ಈ ಗೊಂದಲದ ನಡುವೆಯೇ ಯಾವುದೇ ಚುನಾವಣೆ ಇಲ್ಲದೇ ಅವಿರೋಧವಾಗಿ ಆಯ್ಕೆಯಾದ ವಸುಮತಿ ನಾಗೇಶ್ ನಾಯರಿ ಅವರು ಪಟ್ಟಣ ಪಂಚಾಯಿತಿ ಕಛೇರಿಯಿಂದ ವಿಜಯ ಮಾಲೆಯೊಂದಿಗೆ ಹೊರಬಂದು ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಕೆ.ಜಯಪ್ರಕಾಶ್ ಹೆಗ್ಡೆಯವರ ಪ್ರೋತ್ಸಾಹದ ಮೇರೆಗೆ ಬಿಜೆಪಿ ಬೆಂಬಲದಿಂದ ನಾಯಕಿಯಾಗಿದ್ದೇನೆ ಎಂದು ತಿಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕಾಗಿ ಹಿಂದುಳಿದ ವರ್ಗ ಎ ಮೀಸಲಾತಿ ಬಂದಿರುವ ಹಿನ್ನಲೆಯಲ್ಲಿ ಬಿಜೆಪಿಯ ಉದಯ ಪೂಜಾರಿ ಮತ್ತು ಕಾಂಗ್ರೆಸ್ನ ಶ್ರೀನಿವಾಸ ಅಮೀನ್ ನಾಮಪತ್ರ ಸಲ್ಲಿಸಿದ್ದರು. ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ ಬಹುಮತವಿರುವ ಕಾರಣ, ಅಂತಿಮ ಗಳಿಗೆಯಲ್ಲಿ ಶ್ರೀನಿವಾಸ ಅಮೀನ್ ನಾಮಪತ್ರ ಹಿಂದೆ ಪಡೆದಿದ್ದು, ಕಣದಲ್ಲಿ ಉಳಿದ ಬಿಜೆಪಿಯ ಉದಯ ಪೂಜಾರಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹೆಗ್ಡೆ ಬಣದ ವಿಜಯ?
ಗುರುವಾರ ಸಂಜೆ ನಡೆದ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಚುನಾವಣಾ ಪ್ರಕ್ರಿಯೆಗೆ ಬಹುತೇಕ ಎಲ್ಲಾ ಸದಸ್ಯರು ಹಾಜರಾಗಿದ್ದು, ಕಾಂಗ್ರೆಸ್ನ ರತ್ನಾ ನಾಗರಾಜ್ ಗಾಣಿಗ ಅಸಮಧಾನದ ಹಿನ್ನಲೆಯಲ್ಲಿ ಹಾಜರಾಗಿಲ್ಲ ಎನ್ನಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನವರು ಆರಿಸಿದ್ದ ವಸುಮತಿ ನಾಗೇಶ್ ನಾಯಿರಿ ಅವರನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಭಂಡಾಯ ಅಬ್ಯರ್ಥಿ ಗೆಲ್ಲುವಂತೆ ಮಾಡಿ ಮತ್ತೆ ಹೆಗ್ಡೆಯ ‘ಅಸ್ಥಿತ್ವ’ ಉಳಿಸಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಉಚ್ಛಾಟಿತರಾದ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಬೆಂಬಲಿಗರು ಮತ್ತು ಬಿಜೆಪಿ ಸದಸ್ಯರರು, ಕಾರ್ಯಕರ್ತರ ಮಾರ್ಗದರ್ಶನದಲ್ಲಿ ತಾನು ಗೆದ್ದಿರುವುದಾಗಿ ನೂತನ ಅಧ್ಯಕ್ಷೆ ವಸುಮತಿ ನಾಯರಿ ಹೇಳೀದರು.
ಶುಭಕೋರಿದ ಗಣ್ಯರು…
ಈ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬಿಜೆಪಿಯ ಕಿರಣ್ ಕೊಡ್ಗಿ, ಸುಪ್ರಸಾದ್ ಶೆಟ್ಟಿ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ಗೀತಾಂಜಲಿ ಸುವರ್ಣ, ಕೋಟ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಹೆಗ್ಡೆ ಬೆಂಬಲಿಗರಾದ ಗೋಪಾಲ ಬಂಗೇರ, ಪ್ರಥ್ವಿರಾಜ್ ಶೆಟ್ಟಿ, ಚಂದ್ರ ಶೇಖರ ಶೆಟ್ಟಿ, ರಾಜೇಶ್ ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.