ಬಂಟ್ವಾಳ, ಫೆ.27: ತುಂಬೆಯಲ್ಲಿ 7 ಮೀಟರ್ ಎತ್ತರದ ನೂತನ ವೆಂಟೆಡ್ ಡ್ಯಾಂ ನಿರ್ಮಾಣಗೊಂಡರೂ 4 ಮೀಟರ್ ಮಾತ್ರ ನೀರು ಸಂಗ್ರಹಣೆಯಿರುತ್ತದೆ. ಈ ಬಗ್ಗೆ ನದೀ ತೀರದ ಜನರು ಆತಂಕ ಪಡುವ ಅಗತ್ಯವಿಲ್ಲ. ಸಂತ್ರಸ್ತ ಕೃಷಿಕರಿಗೆ ಪರಿಹಾರ ನೀಡಿದ ಬಳಿಕವೇ ಡ್ಯಾನಲ್ಲಿ ನೀರು ಸಂಗ್ರಹಣೆ ಪ್ರಾರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ತುಂಬೆ ವೆಂಟೆಡ್ ಡ್ಯಾಂನಲ್ಲಿ ಗಂಗಾ ಪೂಜೆ ನೆರೆವೇರಿಸಿ ನೇತ್ರಾವತಿಗೆ ಬಾಗಿನ ಅರ್ಪಿಸಿದ ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುಂಬೆ ವೆಂಟೆಡ್ ಡ್ಯಾಂ ಕಳ್ಳಿಗೆ ಗ್ರಾಮದಲ್ಲಿಯೇ ಇದ್ದರೂ ಇಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾಮಾಜಿನ ನ್ಯಾಯದಡಿ ಈ ಭಾಗದ ಜನರಿಗೂ ನೀರು ಪೂರೈಸುವ ಬಗ್ಗೆ ಚಿಂತನೆಯಿದ್ದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು. ಮರವೂರು ಡ್ಯಾಂ ನಿರ್ಮಾಣಕ್ಕೆ ಎಡಿಬಿಯಡಿ ೮೦ ಕೋಟಿ ರೂ. ಹಣ ಒದಗಿಸಲಾಗಿದೆ ಎಂದರು.
ಜಲ ಮೂಲವನ್ನು ರಕ್ಷಿಸಬೇಕಾದರೆ ಕಾಡಿನ ರಕ್ಷಣೆಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಕೆರೆ, ಬಾವಿ, ಕೊಳವೆ ಬಾವಿಗಳು ಬತ್ತಿ ಹೋಗುತ್ತಿದ್ದು, ಅಂತರ್ಜಲ ಹೆಚ್ಚಳದ ಬಗ್ಗೆ ನಿಗಾ ವಹಿಸ ಬೇಕಾಗಿದೆ ಹಾಗೂ ನೀರಿನ ದುರ್ಬಳಕೆಯಾಗದಂತೆ ಎಚ್ಚರವಹಿಸ ಬೇಕಾಗಿದೆ ಎಂದರು.
ಮನಪಾ ಮೇಯರ್ ಜೆಸಿಂತಾ ವಿಲ್ಫ್ರೆಡ್ ಮಾತನಾಡಿ ನೂತನ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಗಾರಿ ಮುಂದಿನ ಜೂನ್ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನದಿಯಲ್ಲಿ ನೀರು ಹೇರಳವಾಗಿರುವುದರಿಂದ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುವುದಿಲ್ಲ ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಮನಪಾದ ಸಚೇತಕ ಶಶಿಧರ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದೀಪಕ್ ಪೂಜಾರಿ ಪ್ರಮುಖರಾದ ಪ್ರಕಾಶ್ ಸಾಲ್ಯಾನ್, ಹರಿನಾಥ್, ಕೇಶವ ಮರೋಳಿ ವೇದಿಕೆಯಲ್ಲಿದ್ದರು. ಮನಪಾ ಉಪ ಆಯುಕ್ತ ಶಿವಶಂಕರ ಸ್ವಾಮಿ ಸ್ವಾಗತಿಸಿ, ರಾಜೇಶ್ ಸುವರ್ಣ ನಿರೂಪಿಸಿ ವಂದಿಸಿದರು.