ಕುಂದಾಪುರ: ಶುಕ್ರವಾರ ಬೆಳಿಗ್ಗೆ ಕುಂದಾಪುರದ ಹೇರಿಕುದ್ರು ಬ್ರಿಡ್ಜಿನಲ್ಲಿ ಆತ್ಮಹತ್ಯೆಗೆ ಶರಣಾದ ಕುಂದಾಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಭಾಸ್ಕರ್ ಖಾರ್ವಿ ಅವರ ಅಂತಿಮ ಸಂಸ್ಕಾರ ಸಕಲ ವಿಧಿವಿಧಾನಗಳೊಂದಿಗೆ ಕುಂದಾಪುರ ಮದ್ದುಗುಡ್ಡೆಯ ನಿವಾಸದಲ್ಲಿ ನಡೆಯಿತು.
ಈ ಮೊದಲು ಕೋಣಿಯ ಅಗ್ನಿಶಾಮಕ ಠಾಣೆಗೆ ಮ್ರತದೇಹವನ್ನು ಕೊಂಡೊಯ್ದು ಅಲ್ಲಿ ಅಗ್ನಿಶಾಮಕ ಠಾಣೆ ವತಿಯಿಂದ ಅಂತಿಮ ನಮನವನ್ನು ಸಲ್ಲಿಸಲಾಯಿತು. ಈ ಸಂದರ್ಭ ನೆರೆದಿದ್ದ ಠಾಣಾಧಿಕಾರಿ ಹಾಗೂ ಇತರ ಸಿಬ್ಬಂದಿಗಳು ಕಂಬನಿ ಮಿಡಿದ ದ್ರಶ್ಯ ಕಂಡುಬಂತು. ಎಲ್ಲರು ದುಖ:ತಪ್ತರಾಗಿಯೇ ಭಾಸ್ಕರ್ ಖಾರ್ವಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಕೋಣಿ ಪರಿಸರದ ನೂರರು ನಾಗರೀಕರು ಆಗಮಿಸಿ ಅಂತಿಮ ದರ್ಶನ ಪಡೆದರು.
ಕುಂದಾಪುರ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಭರತ್, ಭಟ್ಕಳ ಠಾಣಾಧಿಕಾರಿ ವೆಂಕಟರಮಣ, ಉಡುಪಿ ಠಾಣಾಧಿಕಾರಿ ಸದಾಶಿವ ಶೆಟ್ಟಿಗಾರ್, ಬಂಟ್ವಾಳ ಠಾಣಾಧಿಕಾರಿ ಸುಂದರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಭಾಸ್ಕರ್ ಖಾರ್ವಿ ಅವರು 18 ವರ್ಷಗಳಿಂದ ಅಗ್ನಿಶಾಮಕ ಸೇವೆಯಲ್ಲಿದ್ದು ನುರಿತ ಈಜುಪಟು ಹಾಗೂ ಮುಳುಗು ತಜ್ನರಾಗಿದ್ದರು. ತುರ್ತು ಸಂದರ್ಭಗಳಲ್ಲಿ ಮುನ್ನುಗ್ಗಿ ತನ್ನ ಕರ್ತವ್ಯ ನಿರ್ವಹಿಸಿ ಸೇವೆಯಲ್ಲಿ ಭೇಷ್ ಎನಿಸಿಕೊಂಡವರು.