ಮಂಗಳೂರು : ಮಂಗಳೂರಿನ ಕಾರಾಗೃಹದಲ್ಲಿ ನವೆಂಬರ್ 2ರಂದು ನಡೆದ ವಿಚಾರಣಾಧೀನ ಕೈದಿ ಯೂಸುಪ್ ಮಾಡೂರು ಹತ್ಯೆ ಒಳಗೊಂಡಂತೆ ದ.ಕ. ಜಿಲ್ಲೆಯಲ್ಲಿ ನಿರಂತರ ಮುಸ್ಲಿಮರ ಮೇಲೆ ಕೋಮುವಾದಿಗಳಿಂದ ಹಲ್ಲೆ, ನಿಂದನೆ ಪೊಲೀಸ್ ದೌರ್ಜನ್ಯಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಅಶ್ರಫ್ ರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹಾಗೂ ಗೃಹ ಸಚಿವ ಡಾ. ಪರಮೇಶ್ವರ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ. ಮಾತ್ರವಲ್ಲದೇ ತಮ್ಮ ಎಂಟು ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾರ ನೇತೃತ್ವದಲ್ಲಿ ದ.ಕ.ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಈ ಭೇಟಿಯನ್ನು ಏರ್ಪಡಿಸಿತು.
ಮನವಿ :
ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ದ.ಕ ಜಿಲ್ಲೆ ಈ ಹಿಂದಿನಿಂದಲೂ ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ಜಿಲ್ಲೆಯಾಗಿದ್ದು, ಈ ಜಿಲ್ಲೆಯ ಆಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಸರ್ವ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶಾಂತಿ ಸುವ್ಯಸ್ಥೆಯನ್ನು ಕಾಪಾಡಿಕೊಂಡು ಬಂದಿರುತ್ತದೆ ಮತ್ತು ಜಿಲ್ಲಾಡಳಿತದೊಂದಿಗೆ ಸರ್ವ ರೀತಿಯಲ್ಲಿ ಸಹಕರಿಸುತ್ತಾ ಬಂದಿರುತ್ತದೆ.
ಇತ್ತೀಚಿನ ಹಲವು ಅವಧಿಗಳಿಂದ ಜಿಲ್ಲಾದ್ಯಾಂತ ವಿವಿಧ ಮತೀಯ ಸೂಕ್ಷ್ಮ ವಿಷಯಗಳ ಬಗ್ಗೆ ತಗಾದೆ ಎಬ್ಬಿಸಿ ಸಂಘ ಪರಿಹಾರ, ಬಜರಂಗದಳ, ಯುವಸೇನೆ, ಸನಾತನ ಸಂಸ್ಥೆಗಳಂತಹ ಸಂಘಟನೆಗಳು ಜಿಲ್ಲೆಯ ಮತೀಯ ಅಲ್ಪ ಸಂಖ್ಯಾತ ಮುಸ್ಲಿಂ ಸಮೂದಾಯವನ್ನು ಕಾಲ್ಗೆರೆದು ತಗಾದೆ ಎಬ್ಬಿಸಿ ಕೋಮುಗಲಭೆಗಳನ್ನು ನಡೆಸಲು ಮತ್ತು ಈಗಾಗಲೇ ಜಿಲ್ಲೆಯ ವಿವಿದೆಡೆ ಈ ದುಷ್ಕರ್ಮಿಗಳ ಪ್ರಯತ್ನ ಯಶಸ್ವಿ ಕಂಡು ಭಯಬೀತ ವಾತವರಣ ಸೃಷ್ಟಿಯಾಗಿದೆ. ಈ ವಾಸ್ತವಗಳಿಗೆ ಪೂರಕವೆಂಬಂತೆ ಮಂಗಳೂರು ಹೊರವಲಯದ ಉಳಾಯಿಬೆಟ್ಟು ಎಂಬಲ್ಲಿ ಇತ್ತೀಚಿಗೆ ಸಂಘಪರಿಹಾರ ತಂಡ ನಡೆಸಿದ ಕೋಮುಗಲಭೆ , ಅಪಾರ ಅಸ್ತಿಪಾಸ್ತಿ ಹಾನಿ, ವಿವಿಧ ಜನರು ಗಾಯಗೊಂಡಿರುವ ಘಟನೆಗಳು ಸಾಕ್ಷಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಒಕ್ಕೂಟದ ಬೇಡಿಕೆಗಳು :
1. ಕಾರಾಗೃಹದಲ್ಲಿ ಹತ್ಯೆಯಾದ ಯೂಸೂಫ್ ಮಾಡೂರ್ ಕುಟುಂಬಕ್ಕೆ ರೂಪಾಯಿ 50 ಲಕ್ಷ ಪರಿಹಾರ ಧನವನ್ನು ಸರಕಾರದ ವತಿಯಿಂದ ಪಾವತಿಸುವುದು. ೨. ಕಾರಾಗೃಹದಲ್ಲಿ ಯೂಸುಫ್ ಮಾಡೂರ್ ರವರನ್ನು ಹತ್ಯೆ ಬಗ್ಗೆ ಸಿಓಡಿ ತನಿಖೆ ನಡೆಸುವುದು. 3. ಬಂಧಿಖಾನೆ ಇಲಾಖೆ ತನಿಖೆಯ ನೇತೃತ್ವವನ್ನು ಪ್ರಸ್ತುತ ಬೆಳಗಾಮ್ ಜೈಲಿನಲ್ಲಿ ಕರ್ತವ್ಯ ಹೊಂದಿರುವ ಟಿ.ಟಿ ಸಕ್ಸೇನಾರವರಿಗೆ ವಹಿಸಿ ಕೊಡುವುದು. 4. ಈ ಹತ್ಯೆಯಲ್ಲಿ ಬಳಸಲಾದ ಮಾರಕ ಆಯುಧವನ್ನು ಹೊರಗಿನಿಂದ ಜೈಲಿನೊಳಗೆ ರವಾನಿಸಿದ ಜೈಲು ಸಿಬ್ಬಂದಿ ಮತ್ತು ಭಾಹ್ಯ ವ್ಯಕ್ತಿಗಳು ಮತ್ತು ಹಣಕಾಸು ಪೊರೈಸಿದ ಮೂಲ ವ್ಯಕ್ತಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರ್ಪಡೆಗೊಳಿಸುವುದು ಮತ್ತು ಕೂಲಂಕುಷ ತನಿಖೆ ನಡೆಸುವುದು. 5. ಜಿಲ್ಲೆಯಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರ ಮುಸ್ಲಿಮ್ ಸಮುದಾಯದ ಆರೋಪಿಗಳನ್ನು ಪೊಲೀಸ್ ಇಲಾಖೆ ಮತೀಯ ದೃಷ್ಠಿಯಿಂದ ಪರಿಗಣಿಸಿ ಜಾತಿ ನಿಂದನೆ, ಅವಹೇಳನೆ , ಹಲ್ಲೆ ದೌರ್ಜನ್ಯ, ಸುಳ್ಳು ಕೇಸು ಫೀಟ್ ಮಾಡುವುದು ಇತ್ಯಾದಿಗಳನ್ನು ತಡೆಯಲು ಕ್ರಮಕೈಗೊಳ್ಳವುದು. 6. ಪೊಲೀಸ್ ಇಲಾಖೆಯಲ್ಲಿನ ಮತೀಯ ವ್ಯಕ್ತಿತ್ವದ ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವುದು. 7. ಮುಸ್ಲಿಮ್ ಸಮುದಾಯದ ಆರಾಧನಾಲಯ, ಮಾನವ ಹಕ್ಕುಗಳ ಸಂರಕ್ಷಣೆ, ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯ ಖಾತರಿಗೊಳಿಸುವುದು. 8. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುಸುದಿದ್ದು ಆರಕ್ಷಕ ಇಲಾಖೆಯಲ್ಲಿ ಸುದೃಢಗೊಳಿಸುವುದು ಇತ್ಯಾದಿ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದೆ.
ರಫೀಉದ್ದೀನ್ ಕುದ್ರೋಳಿ, ಅಬ್ದುಲ್ ಹಮೀದ್ ಕುದ್ರೋಳಿ, ಸಿ.ಎಂ.ಮುಸ್ತಫಾ, ಅಹ್ಮದ್ ಬಾವಾ ಬಜಾಲ್ ಹಾಗೂ ಉದ್ಯಮಿ ಪಿ.ಪಿ.ಮಜೀದ್ ಮೊದಲಾದವರು ನಿಯೋಗದಲ್ಲಿದ್ದರು.