ಮಂಗಳೂರು : ಬಂಟ್ವಾಳ ತಾಲೂಕಿನ ಮಣಿಯಾಲ ಬಳಿಯ ಜಕ್ರಿಬೆಟ್ಟುವಿನಲ್ಲಿ ನಡೆದ ಹರೀಶ್ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಿಜೆಪಿ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಕರೆ ನೀಡಿದ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಮಂಗಳೂರಿನಾದ್ಯಂತ ಅಂಗಡಿ,ಮುಂಗಟ್ಟುಗಳು ಬಾಗಿಲು ತೆರೆಯದೆ ಬಂದ್ಗೆ ಬೆಂಬಲ ಸೂಚಿಸಿವೆ. ಬಸ್ ಸಂಚಾರ ಸಂಪೂರ್ಣ ಸ್ತಗಿತಗೊಂಡ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಹಿಂದೂ ಪರ ಸಂಘಟನೆಗಳು ಗುರುವಾರ ತಡರಾತ್ರಿ ದಿಡೀರ್ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ಮುಂಜನೆ ಕೆಲಸ ಕಾರ್ಯಗಳಿಗಾಗಿ ಆಗಮಿಸಿದ ಸಾರ್ವಜನಿಕರು ಪರದಾಡುವಂತಾಯಿತು.
ಬಸ್ಸಿಗೆ ಕಲ್ಲು ತೂರಾಟ :
ಬಂದ್ ಹಿನ್ನೆಲೆಯಲ್ಲಿ ಪಂಪ್ವೆಲ್ ಸಮೀಪದ ಎಕ್ಕೂರು ಬಳಿ ಕಿಡಿಗೇಡಿಗಳು ಎರಡು ಖಾಸಗಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ ಬಗ್ಗೆ ವರದಿಯಾಗಿದೆ.
ತಲಪಾಡಿಯಲ್ಲಿ ಬಸ್ಸ್ಗಳಿಗೆ ತಡೆ :
ಗಡಿನಾಡು ತಲಪಾಡಿಗೂ ಬಂದ್ ಬಿಸಿ ತಟ್ಟಿದ್ದು, ಕೇರಳದಿಂದ ಕರ್ನಾಟಕಕ್ಕೆ ಬರುತ್ತಿದ್ದ ಬಸ್ಗಳಿಗೆ ತಲಪಾಡಿ ಬಳಿ ತಡೆಯೊಡ್ಡಿದ ಘಟನೆ ನಡೆದಿದೆ.
ಬಿ.ಸಿ.ರೋಡಿನಲ್ಲಿ ಬಿಗಿ ಪೊಲೀಸ್ ಭದ್ರತೆ :
ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲು ಬಳಿ ಕಿಡಿಗೇಡಿಗಳು ರಸ್ತೆ ಮಧ್ಯೆ ಟಯರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಬಸ್ ಸಂಚಾರ ಸಂಪೂರ್ಣ ಸ್ತಗಿತಗೊಂಡ ಕಾರಣ ಬಿಕೋ ಎನ್ನುತ್ತಿದೆ ಬಿ.ಸಿ.ರೋಡ್ ಪೇಟೆ. ದುರ್ಘಟನೆ ನಡೆದ ಸ್ಥಳವಾದ ಬಂಟ್ವಾಳ ಹಾಗೂ ಬಿ.ಸಿ.ರೋಡ ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಮೂಡಬಿದ್ರೆಯಲ್ಲಿ ಬಸ್ನ ಗಾಜಿಗೆ ಹಾನಿ :
ಮೂಡಬಿದ್ರೆಯಲ್ಲಿ ಕಿಡಿಗೇಡಿಗಳು ಬಸ್ಸ್ಗಳಿಗೆ ಕಲ್ಲೆಸೆದ ಪರಿಣಾಮ ಬಸ್ನ ಗಾಜುಗಳಿಗೆ ಹಾನಿಯುಂಟಾಗಿದೆ.
ಜಿಲ್ಲೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಆಗಮನ :
ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆ ಆಗಮಿಸಿದ್ದು, ಜಿಲ್ಲೆಯ ಸೂಕ್ಷ ಪ್ರದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ.
ಇನ್ನಷ್ಟು ಹೆಚ್ಚಿನ ವಿವರ ಹಾಗೂ ಚಿತ್ರ ನಿರೀಕ್ಷಿಸಿ..