ಮಂಗಳೂರು: ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹೆಸರಿನಲ್ಲಿದ್ದ ಅಂಚೆ ಚೀಟಿ ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಮಂಗಳೂರಿನ ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ದಿ| ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶ ಕಂಡ ಅಪ್ರತಿಮ ನಾಯಕರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು. ಇಂದಿರಾ ಗಾಂಧಿ ಅವರ ಸ್ಮರಣಾರ್ಥದ ಅಂಚೆ ಚೀಟಿಗಳು ಇತರ 8-10 ದೇಶಗಳಲ್ಲಿ ಇವೆ. ಆದರೆ ಅವರು ಪ್ರಧಾನಿಯಾಗಿದ್ದ ನಮ್ಮ ದೇಶದ ಅಂಚೆ ಚೀಟಿ ರದ್ದುಗೊಳಿಸಲಾಗಿದೆ.ಇದು ದ್ವೇಷ ಹಾಗೂ ನೀಚ ರಾಜಕಾರಣವಾಗಿದೆ ಎಂದು ಆರೋಪಿಸಿದರು.
ಅಂಚೆ ಚೀಟಿ ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮ ದೇಶಕ್ಕೆ ಒಂದು ಕಪ್ಪು ಚುಕ್ಕೆ. ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್, ಗಡ್ಡಾಫಿ ಅವರ ಹಾಗೆ ಸರ್ವಾಧಿಕಾರಿ ನೀತಿ ಅನುಸರಿಸುತ್ತಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ತನ್ನ ಈ ನಿರ್ಧಾರ ಹಿಂದೆಗೆದುಕೊಳ್ಳುವ ವರೆಗೆ ಯುವ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಲಿದೆ ಎಂದು ಮಿಥುನ್ ರೈ ತಿಳಿಸಿದರು.
ಪತಿಭಟನೆಯಲ್ಲಿ ಮನಪಾ ಸದಸ್ಯ ಪ್ರವೀಣ್ಚಂದ್ರ ಆಳ್ವ, ನವೀನ್ ಆರ್. ಡಿ’ಸೋಜಾ, ಯುವ ಕಾಂಗ್ರೆಸ್ ನಾಯಕರಾದ ರಮಾನಂದ ಪೂಜಾರಿ, ಲೂಕ್ಮನ್, ಹರ್ಷದ್, ಗಿರೀಶ್ ಆಳ್ವ, ಲತೀಫ್ ಕಂದಕ್ ಮೆರಿಲ್ ರೇಗೊ ಮುಂತಾದವರು ಪಾಲ್ಗೊಂಡಿದರು.
ಇದೇ ಸಂರದ್ಭದಲ್ಲಿ ಪ್ರತಿಭಟನಕಾರರು ಮಂಗಳೂರಿನ ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿ ಬಾಗಿಲಿಗೆ ಸಾಂಕೇತಿಕವಾಗಿ ಬೀಗ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.