ಉಡುಪಿ: ಕಾರ್ಕಳ ತಾಲೂಕಿನ ಮುದ್ರಾಡಿ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನ ಮೆರವಣಿಗೆ ವೇಳೆ ಗಣೇಶನ ಮೂರ್ತಿ ಹೊತ್ತ ಲಾರಿ ಯುವಕನ ಮೇಲೆ ಹರಿದ ಪರಿಣಾಮ ಯುವಕ ಮೃತಪಟ್ಟು, ಇನ್ನೋರ್ವ ವ್ಯಕ್ತಿಗೆ ಗಂಭೀರವಾದ ಗಾಯವಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೂಡಬಿದಿರೆ ರಾಮ ನಾಸಿಕ್ ಬ್ಯಾಂಡ್ ತಂಡದ ಸದಸ್ಯ ಅಭಿಜಿತ್ ಜೈನ್ (18) ಮೃತಪಟ್ಟ ದುರ್ದೈವಿ.
ಇದೇ ವೇಳೆ ಸಮೀಪದ ನಿವಾಸಿ ಬೊಗ್ಗು ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗಿದ್ದಾದರೂ ಏನು?: ಮುದ್ರಾಡಿ ಶಾಲೆಯಿಂದ ಗಣೇಶ ಮೂರ್ತಿಯನ್ನು ಹೊತ್ತು ಮೆರವಣಿಗೆ ಹೋಗುತ್ತಿರುವಾಗ ಮುದ್ರಾಡಿ ಸರ್ಕಲ್ ಬಳಿ ಗಣೇಶ ಮೂರ್ತಿ ಹೊತ್ತ ಲಾರಿ ಬ್ರೇಕ್ ವೈಫಲ್ಯದಿಂದಾಗಿ ಮೆರವಣಿಗೆಯಲ್ಲಿದ್ದ ಸಾರ್ವಜನಿಕರ ಮೇಲೆ ಹರಿದ ಪರಿಣಾಮ ಲಾರಿಯ ಎದುರಿದ್ದ ಅಭಿಜಿತ್ ಜೈನ್ ಅವರ ತಲೆ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಭಿಜಿತ್ ಆಟೋ ಮೆಕ್ಯಾನಿಕ್ ಆಗಿದ್ದು, ಬಡತನದಿಂದ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.