ಉಡುಪಿ: ಪ್ರಸಿದ್ಧ ಪತ್ರಿಕೆಯ ಸಂಪಾದಕರ ಹೆಸರಿನಲ್ಲಿ ಕುಂದಾಪುರದ ವಿಠಲವಾಡಿಯ ಉದ್ಯಮಿ ಗಣೇಶ ಪೂಜಾರಿ ಎಂಬುವವರಿಗೆ ಹಣದ ಬೇಡಿಕೆಯಿಟ್ಟು ದೂರವಾಣಿ ಕರೆ ಬಂದಿರುವ ಬಗ್ಗೆ ಕುಂದಾಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ಕುಂದಾಪುರದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಗಣೇಶ್ ಪೂಜಾರಿ ಅವರು ಪ್ರಕರಣದ ಬಗ್ಗೆ ಸುದ್ದಿಗಾರರಿಗೆ ವಿವರವನ್ನು ನೀಡಿದ್ದಾರೆ.
(ಪತ್ರಿಕಾಗೋಷ್ಟಿಯಲ್ಲಿ ಗಣೇಶ್ ಪೂಜಾರಿ)
ಕುಂದಾಪುರದಲ್ಲಿ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾಗಿರುವ ಗಣೇಶ್ ಪೂಜಾರಿ ಅವರಿಗೆ ಸೆ.1ರಂದು ಪ್ರಸಿದ್ಧ ಪತ್ರಿಕೆ ಸಂಪಾದಕರೆನ್ನಲಾದ ಸಂತೋಷ್ ಸುವರ್ಣ ಹಿರಿಯಡಕ ಎನ್ನುವವರು ಕರೆಮಾಡಿ, ನೀವು ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಅದಕ್ಕೆ ಸಂಬಂಧಿಸಿ ಸುದ್ದಿ ಪ್ರಕಟಿಸುವಂತೆ ಪತ್ರಿಕೆ ಕಛೆರಿಗೆ ನಿಮ್ಮದೇ ಭಾಗಗಳಿಂದ ಕೆಲವು ಕಾಗದ ಪತ್ರಗಳು ಹಾಗೂ ದೂರವಾಣಿ ಕರೆಗಳು ಬರುತ್ತಿದ್ದು, ನಿತ್ಯ ಒತ್ತಡ ಹೆಚ್ಚಿದೆ. ಈ ಬಗ್ಗೆ ಪ್ರಸಿದ್ಧ ಪತ್ರಿಕೆಯಲ್ಲಿ ಬರೆಯುವುದಾಗಿ ತಿಳಿಸಿದ್ದರೆನ್ನಲಾಗಿದ್ದು ತಾನೂ ಇವೆಲ್ಲದಕ್ಕೂ ಸಂಪಾದಕರಿಗೆ ಸ್ಪಷ್ಟನೆ ನೀಡಿ ತಾವೂ ಹೇಳಿದ ವಿಚಾರವೆಲ್ಲವೂ ಸತ್ಯಕ್ಕೆ ದೂರವೆನ್ನುವುದನ್ನು ತಿಳಿಸಿದ್ದೇನೆ. ಆದರೂ ತನಗೆ ಅವರು ನಿರಂತರ ಕರೆಮಾಡಿ 30,000ದಿಂದ 1,20,000 ರೂಪಾಯಿಯವರೆಗೆ ಹಣ ನೀಡುವಂತೆ ಬೇಡಿಕೆ ಒಡ್ಡಿದ್ದಾರೆ ಇದರಿಂದ ಬೇಸತ್ತ ನಾನು ಉಡುಪಿ ಎಸ್ಪಿ ಅವರ ಗಮನಕ್ಕೆ ಈ ವಿಚಾರವನ್ನು ತಂದು ಬಳಿಕ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಸಿದ್ಧ ಪತ್ರಿಕೆ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ ಎಂದು ಗಣೇಶ್ ಪೂಜಾರಿ ಹೇಳಿದ್ದಾರೆ.
ಓದುಗರ ಬಳಗ ವಿಠಲವಾಡಿ ಹಾಗೂ ಕೆಲವು ಅಪರಿಚಿತ ವ್ಯಕ್ತಿಗಳಿಂದ ತಮ್ಮ ಬಗ್ಗೆ ಬರೆಯುವ ಸಲುವಾಗಿ ಒತ್ತಡ ಬಂದಿದ್ದು ನಿಮ್ಮ ಹಗರಣಗಳ ವರದಿಯನ್ನು ಪ್ರಕಟಿಸದಿರಲು ಹಣ ನೀಡಬೇಕಾಗುತ್ತದೆ ಎಂದು ಸಂಪಾದಕ ಸಂತೋಷ್ ಸುವರ್ಣ ಬೆದರಿಕೆ ಹಾಕಿದ್ದಾರೆಂದು ಗಣೇಶ್ ಆರೋಪಿಸಿದ್ದು ನನ್ನ ಜೀವನದಲ್ಲಿಯೇ ನಡೆಯದ ಕಪೋಕಲ್ಪಿತ ಸುಳ್ಳುಗಳನ್ನು ಇಟ್ಟುಕೊಂಡು ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ, ಇದರಿಂದ ನಾನು ಕುಗ್ಗಿ ಹೋಗಿದ್ದು ಇದನ್ನು ಪತ್ರಕರ್ತರ ಸಂಘವು ಗಂಭೀರವಾಗಿ ಪರಿಗಣಿಸಿ ಸಂಪಾದಕರ ಸದಸ್ಯತ್ವವನ್ನು ವಜಾ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇವರು ಇದೇಸಂದರ್ಭ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಮಲಾಕ್ಷ ಹಾಗೂ ರಮೇಶ್ ಕುಮಾರ್ ಇದ್ದರು.