ಮಂಗಳೂರು, ಸಪ್ಟೆಂಬರ್.04: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೋಳೂರು ಇವರ ಸಹಯೋಗದೊಂದಿಗೆ “ಪೌಷ್ಟಿಕ ಆಹಾರ ಸಪ್ತಾಹ” ಕಾರ್ಯಕ್ರಮ ಗುರುವಾರ ನಗರದ ಬೋಳೂರು ಅಂಗನವಾಡಿ ಕೇಂದ್ರ, ಅಕ್ಷರ ಸದನದಲ್ಲಿ ಜರಗಿತು.
ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನುಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಆರೋಗ್ಯ ರಕ್ಷಣೆಯಲ್ಲಿ ಆಹಾರ ಸೇವನೆ ವಿಧಾನವೂ ಕೂಡ ಬಹಳ ಮುಖ್ಯ. ಬಾಯಿಯನ್ನು ಮುಚ್ಚಿಕೊಂಡು ಚೆನ್ನಾಗಿ ಜಗಿದು ತಿನ್ನಬೇಕು ಎಂದರು. ಹಾಗೂ ಹಲವು ವಿಧದ ಯೋಗ (ಚಿನ್) ಮುದ್ರೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಆರೋಗ್ಯ ಇಲಾಖೆಯ ಶ್ರೀ ಜಯರಾಮ ಪೂಜಾರಿ ಅವರು ಮಾತನಾಡಿ, ಪೌಷ್ಟಿಕ ಆಹಾರದ ಮೂಲಕ ಅಗತ್ಯ ಪೋಷಕಾಂಶಗಳನ್ನು ಪಡೆಯುವುದರೊಂದಿಗೆ ದೇಹದ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಬಹುದು. ಅಲ್ಲದೆ ಧಾನ್ಯಗಳಾದ ಅಕ್ಕಿ, ರಾಗಿ, ಗೋಧಿ, ಮೊಳಕೆ ಬೇಳೆಕಾಳುಗಳು, ಸೊಪ್ಪು ತರಕಾರಿ, ಹಾಲು, ಮೊಸರು,ಬಾಳೆಹಣ್ಣು, ಪಪ್ಪಾಯಿ ಮುಂತಾದ ಮಿಶ್ರ ಆಹಾರವು ದೇಹದ ಸಮಗ್ರ ಬೆಳವಣಿಗೆ ಹಾಗೂ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ದೇವದಾಸ್ ಅವರು, ಆರೋಗ್ಯ ರಕ್ಷಣೆಯಲ್ಲಿ ಆಹಾರ ಸೇವನೆಯ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ನಾವು ಪರಿವರ್ತಿತ ಆಹಾರಗಳನ್ನು ಸೇವಿಸುತ್ತಿರುವುದರಿಂದ ರೋಗಗಳ ಉತ್ಪತ್ತಿಗೆಕಾರಣವಾಗುತ್ತಿದೆ ಎಂದರು.
ಸಹಸ್ರಾರು ವರ್ಷಗಳ ಸಂಪ್ರದಾಯಿಕ ಆಹಾರ ಪದ್ಧತಿಯನ್ನು ಬದಿಗೊತ್ತಿ ಅಕಾಲ ಭೋಜನ ಹಾಗೂ ಫಾಸ್ಟ್ ಫುಡ್ ಸಂಸ್ಕೃತಿಗಳನ್ನು ಬೆಳೆಸಿರುವುದರಿಂದ ಅಜೀರ್ಣ, ಆಮೋತ್ಪತ್ತಿಗೆ ಕಾರಣವಾಗಿ ಅಪೌಷ್ಟಿಕತೆ ಹಾಗೂ ವಿವಿಧ ರೋಗಗಳಿಗೆ ಆಹ್ವಾನವಿತ್ತಂತ್ತಾಗುತ್ತದೆ. ಅಪೌಷ್ಟಿಕತೆಯಿಂದ ಉಂಟಾಗುವ ಶಿಶುಮರಣ ಸಂಖ್ಯೆಯನ್ನು ಶೂನ್ಯದತ್ತ ಕೊಂಡೊಯ್ಯುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಅತ್ಯಗತ್ಯ. ಗರ್ಭಿಣಿ ಮಹಿಳೆಯು ಪ್ರತಿ ತಿಂಗಳೂ ಆಹಾರ ಸೇವನೆ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ ಎಂದು ಡಾ.ದೇವದಾಸ್ ಸಲಹೆನೀಡಿದರು.
ಬೋಳೂರು ವಾರ್ಡಿನ ಮಾಜಿ ಕಾರ್ಪೊರೇಟರ್ ಕಮಲಾಕ್ಷ ಸಾಲಿಯಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುನೈಟ್ಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಉತ್ತಮ ಪೌಷ್ಠಿಕ ಆಹಾರ ಸ್ಫರ್ಧೆಯನ್ನುಆಯೋಜಿಸಲಾಗಿದ್ದು, ಅದರಂತೆ ಸ್ತ್ರೀಶಕ್ತಿ ಸದಸ್ಯರು, ಮಕ್ಕಳ ಪೋಷಕರು , ಅಂಗನವಾಡಿಕಾರ್ಯಕರ್ತೆಯರು ಸ್ಥಳಿಯವಾಗಿ ದೊರೆಯುವ ಆಹಾರ ವಸ್ತುಗಳಿಂದ ಪೌಷ್ಠಿಕ ಆಹಾರಗಳನ್ನು ತಯಾರಿಸಿ ತಂದಿದ್ದರು. ಉತ್ತಮ ಪೌಷ್ಠಿಕ ಆಹಾರ ತಯಾರಿಸಿದ ಮಹಿಳೆಯರಿಗೆ ಅಧ್ಯಕ್ಷರು ಬಹುಮಾನ ವಿತರಿಸಿದರು.
ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಗುಲಾಬಿ ಹಾಗೂ ಜಿಲ್ಲಾ ಆಯುಷ್ ಆಸ್ಪತ್ರೆಯ ಶುಶ್ರೂಷಕಿ ಶ್ರೀಮತಿ ಸುನಂದಾ.ಡಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಜಯಲಕ್ಮಿ ಪ್ರಾರ್ಥನೆ ಗೈದರು, ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಶ್ರೀಮತಿ ಸುಧಾ. ಕೆ ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಕಾರ್ಯದರ್ಶಿ ಶ್ರೀಮತಿ ಕುಮುದಾಕ್ಷಿ ವಂದಿಸಿದರು.
ಶಕ್ತಿನಗರ 2 ನೇ ವಲಯದ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಹೆತ್ತವರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಶ್ರೀದೇವಿ ಕಾಲೇಜಿನ ಸಮಾಜ ಕಾರ್ಯ ವಿಧ್ಯಾರ್ಥಿಗಳು ಹಾಗೂ ಪ್ರಾಧ್ಯಪಕರು ಮತ್ತು ಆಯುಷ್ ಇಲಾಖೆಯ ಸಿಬ್ಬಂದ್ಧಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.