ಉಡುಪಿ: ಉತ್ತರ ಕನ್ನಡ ಜಿಲ್ಲೆ ಕುಮಟಾ ಸಮೀಪದ ಬರ್ಗಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಬುಲ್ಲೆಟ್ ಟ್ಯಾಂಕರ್ (ಗ್ಯಾಸ್ ಟ್ಯಾಂಕರ್) ಸ್ಫೋಟಗೊಂಡ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆಶುಕ್ರವಾರಕ್ಕೆ ಐದಕ್ಕೇರಿದೆ. ಅವಘಡ ನಡೆದ ದಿನದಂದು ಓರ್ವ ಮ್ರತಪಟ್ಟಿದ್ದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಯಶ್ರೀ ಪಟಗಾರ್ (55) ಅವರ ಮಗ ಭರತ (24) ಅವರು ಬುಧವಾರ ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಿಗ್ಗೆನ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 5 ಎಂದು ತಿಳಿದುಬಂದಿದೆ.
ಜಯಶ್ರೀ ಅವರ ಪತಿ, ಕತಗಾಲದ ಉಪವಲಯ ಅರಣ್ಯಾಧಿಕಾರಿ ಶ್ರೀಕಾಂತ ಶೇಷು ಪಟಗಾರ, ಇನ್ನೊಬ್ಬ ಮಗ ಧೀರಜ್ ಸಹಿತ ಇತರ ಹತ್ತು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಸೇರಿದಂತೆ ಐವರ ಆರೋಗ್ಯ ಸ್ಥಿರವಾಗಿದೆ. ಬಲಗಾಲಿನ ಮೂಳೆ ಮುರಿತಕ್ಕೊಳಗಾದ ಚಾಲಕನಿಗೆ ಶಸ್ತ್ರಚಿಕಿತ್ಸೆ ನಡೆಯಿತು.
ಘಟನೆಯ ಹಿನ್ನೆಲೆ: ಅನಿಲ ಸಾಗಾಟ ಟ್ಯಾಂಕರ್ (ಗ್ಯಾಸ್ ಟ್ಯಾಂಕರ್) ಮಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದಾಗ ಕುಮಟಾ ಸಮೀಪದ ಬರ್ಗಿ ಬಳಿ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಈ ವೇಳೆ ಅನಿಲ ತುಂಬಿದ ಕಂಪಾರ್ಟ್ಮೆಂಟ್ ಒಡೆದು ಅನಿಲ ಸೋರಿಕೆ ಆರಂಭವಾಗಿ ಕೆಲವೇ ಕ್ಷಣದಲ್ಲಿ ಬೆಂಕಿಹೊತ್ತಿಕೊಂಡು ಸ್ಫೋಟ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಟ್ಯಾಂಕರ್ ಬಿದ್ದಲ್ಲಿಂದ 500 ಮೀ. ದೂರದವರೆಗೂ ಅನಿಲವು ಹೊತ್ತಿಕೊಂಡು ಬೆಂಕಿಯ ತೀವ್ರತೆಗೆ ಹಲವು ಮನೆಗಳು, 5 ಕೊಟ್ಟಿಗೆಗಳು ಸಂಪೂರ್ಣ ಸುಟ್ಟುನಾಶವಾಗಿದ್ದವು. ಗಾಯಗೊಂಡ ಸ್ಥಳಿಯ ಭಾಗದ ಜನರನ್ನು ಮಣಿಪಾಲ ಆಸ್ಪತ್ರೆಗೆ ಕರೆತರಲಾಯಿತು.