ಉಡುಪಿ: ಭೂಗತ ಪಾತಕಿಯಾಗಿ ದೇಶ ರಾಜ್ಯ ಹಾಗೂ ವಿದೇಶವನ್ನು ಕಾಡಿದ್ದ ಪಾತಕಿ ಬನ್ನಂಜೆ ರಾಜಾ ಸೆರೆಯಾದ ಮೇಲೆ ಆತನನ್ನು ಭಾರತಕ್ಕೆ ಕರೆತರುವಲ್ಲಿ ಸರಕಾರ ಹಾಗೂ ಇಲಾಖೆ ದಿಟ್ಟ ಕ್ರಮವನ್ನು ಕೈಗೊಂಡಿತ್ತು. ಈ ಹಿನ್ನೆಲೆ ಕಳೆದ ನಾಲ್ಕೈದು ದಿನಗಳ ಹಿಂದೆ ರಾಜ್ಯದಿಂದ ತೆರಳಿದ್ದ ಅಧಿಕಾರಿಗಳ ತಂಡ ಬನ್ನಂಜೆಯನ್ನು ಭಾರತಕ್ಕೆ ಕರೆತಂದಿದ್ದು ಸದ್ಯ ಆತ ಕರ್ನಾಟಕದಲ್ಲಿಯೇ ಪೊಲೀಸರ ವಶದಲ್ಲಿದ್ದಾನೆ.
ಈ ಹಿಂದೆ ಕಾರವಾರದಲ್ಲಿ ನಡೆದ ಆರ್.ಎನ್. ನೈಕ್ ಕೊಲೆ ಪ್ರಕರಣದಲ್ಲಿ ಬನ್ನಂಜೆ ರಾಜಾ ವಿರುದ್ಧ ದೂರು ದಾಖಲಾಗಿತ್ತು. ಆದ್ದರಿಂದಲೇ ಮೊರೊಕ್ಕೊದಿಂದ ಆತನನ್ನು ತಮ್ಮ ವಶಕ್ಕೆ ಪಡೆದ ಪೊಲೀಸರ ತಂಡ ಭಾರತಕ್ಕೆ ಕರೆತಂದ ಬಳಿಕ ಬನ್ನಂಜೆಯನ್ನು ಮೊದಲಾಗಿ ಬೆಳಗಾವಿಗೆ ಕರೆತಂದಿರುವ ಬಗ್ಗೆ ಉನ್ನತ ಪೊಲೀಸ್ ಮೂಲಗಳ ಮಾಹಿತಿ ಲಭಿಸಿದೆ. ಬೆಳಗಾವಿಗೆ ಸಂಜೆ ವೇಳೆ ಬನ್ನಂಜೆಯನ್ನು ಕರೆತಂದ ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.
ಉಡುಪಿ ಭಾಗದಲ್ಲಿಯೂ ಈತನ ಬಗ್ಗೆ ಗಂಭೀರ ಪ್ರಕರಣ ದಾಖಲಾಗಿದ್ದು ಈ ಹಿನ್ನೆಲೆ ಆತನನ್ನು ಆಗಸ್ಟ್ ೨೮ ರವರೆಗೆ ಉಡುಪಿ ಪೊಲೀಸರ ಕಸ್ಟಡಿಗೆ ನೀಡಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆ ಬಾಡಿ ವಾರೆಂಟ್ ಪಡೆದು ಉಡುಪಿ ಪೊಲೀಸರು ಪಾತಕಿ ಬನ್ನಂಜೆಯನ್ನು ತಮ್ಮ ವಶಕ್ಕೆ ಪಡೆದಿದ್ದು ಶನಿವಾರವೇ ಆತನನ್ನು ಉಡುಪಿಗೆ ಕರೆತರುವ ಸಾಧ್ಯತೆಯಿದೆ
ಬನ್ನಂಜೆಯನ್ನು ಬೆಳಗಾವಿಗೆ ಕರೆತಂದಿರುವ ಬಗ್ಗೆ ಸೇರಿದಂತೆ ಮುಂದಿನ ನಡೆಯ ಬಗ್ಗೆ ಅಧಿಕಾರಿಗಳು ಗೌಪ್ಯತೆ ಕಾಪಾಡುತ್ತಿದ್ದು, ಬನ್ನಂಜೆಗೆ ಮಾತ್ರ ಸಖತ್ ಭದ್ರತೆ ನೀಡಲಾಗಿದೆಯಂತೆ. ಮೊರಕ್ಕೋಗೆ ತೆರಳಿದ ಅಧಿಕಾರಿಗಳ ತಂಡದಲ್ಲಿ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಕೂಡ ಇದ್ದರು.