ಮಂಗಳೂರು,ಜುಲೈ.27 : ಈಗ ತಾನೇ ಹುಟ್ಟಿದ ಹಸುಗೂಸಿನಿಂದ 5 ವರ್ಷದ ಮಗುವಿನ ತನಕ ಮಕ್ಕಳಲ್ಲಿ ಆಗಿಂದಾಗ್ಗೆ ಕಾಡುವ ಅತಿಸಾರ ಭೇದಿಯಿಂದ ಮಕ್ಕಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕೆಲವೊಮ್ಮೆ ಮರಣ ಸಂಭವಿಸಬಹುದಾಗಿದೆ, ಅದ್ದರಿಂದ ತಾಯಂದಿರು ಮಕ್ಕಳಲ್ಲಿ ನೀರಿನ ರೀತಿ ಭೇದಿ ಆಗುತ್ತಿದ್ದರೆ, ಕೂಡಲೇ ಮಗುವಿಗೆ ದ್ರವ ರೂಪದ ಆಹಾರ ನೀಡುವುದರ ಜೊತೆಗೆ ಓ.ಆರ್.ಎಸ್. ನೀರನ್ನು ವೈದ್ಯರ ಸಲಹೆ ಮೇರೆಗೆ ನೀಡುವ ಮೂಲಕ ಮಗುವಿನ ಆರೋಗ್ಯ ರಕ್ಷಣೆ ಮಾಡಬೇಕೆಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ತಾಯಂದಿರಲ್ಲಿ ವಿನಂತಿಸಿದ್ದಾರೆ.
ಅವರು ಇಂದು ಬೆಳಿಗ್ಗೆ ನಗರದ ಲೇಡಿಗೋಶನ್ ಅಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಅತಿಸಾರಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಓ.ಆರ್.ಎಸ್. ಪೊಟ್ಟಣ ವಿತರಿಸುವ ಮೂಲಕ ಉದ್ಘಾಟಿಸಿದರು.
ಅತಿಸಾರ ಭೇದಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ಮನೆಮದ್ದು ನೀಡುತ್ತಿದ್ದರು ಅದೂ ಉತ್ತಮ ಪರಿಣಾಮದಿಂದ ಕೂಡಿತ್ತು, ಆದರೆ ಅತಿಸಾರ ಬೇದಿಯಿಂದ ಮಕ್ಕಳು ತೊಂದರೆಗೆ ಸಿಲುಕದಂತೆ ಹಾಗೂ ನಿರ್ಧಿಷ್ಟ ಪ್ರಮಾಣದಲ್ಲಿ ಔಷಧ ನೀಡುವುದರಿಂದ ಮಗುವಿನ ಆರೋಗ್ಯದಲ್ಲಿ ಏರುಪೇರಾಗದಂತೆ ಸರ್ಕಾರದಿಂದ ನೀಡುವ ಓ.ಆರ್.ಎಸ್. ದ್ರಾವಣವನ್ನೇ ಬಳಸುವಂತೆ ಸಚಿವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೊಬೊ ಅವರು ವಹಿಸಿದ್ದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣರಾವ್, ಲೇಡಿಗೋಶನ್ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಕುಂತಳಾ, ಆರ್.ಸಿ.ಹೆಚ್. ಅಧಿಕಾರಿ ಡಾ.ರುಕ್ಮಿಣಿ, ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ಮುಂತಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.