ಕಾಸರಗೋಡು, ಜು.24: ಬಸ್ ಬೈಕೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರೆ ಮಹಿಳೆ ಮೃತಪಟ್ಟು, ಆಕೆಯ ಪತಿ ಮತ್ತು ಪುತ್ರ ಗಾಯಗೊಂಡ ಘಟನೆ ಗುರುವಾರ ಸಂಜೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.
ಮೃತರನ್ನು ನಗರ ಹೊರವಲಯದ ಅಣಂಗೂರು ಬೆದಿರದ ಹನೀಫ್ ಎಂಬವರ ಪತ್ನಿ ರಝಿಯಾ(26) ಎಂದು ಗುರುತಿಸಲಾಗಿದೆ. ಹನೀಫ್ (35) ಮತ್ತು ಪುತ್ರ ಅಮೀನ್ ಗಾಯಗೊಂಡಿದ್ದು, ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆ ಬಸ್ ನಿಲ್ದಾಣದ ಸಮೀಪ ಬೈಕ್ನಲ್ಲಿಹೋಗುತ್ತಿದ್ದ ವೇಳೆ ನೀರ್ಚಾಲು ಕಡೆಯಿಂದ ಕಾಸರಗೋಡಿಗೆ ಅತೀ ವೇಗದಿಂದ ಬರುತ್ತಿದ್ದ ಖಾಸಗಿ ಬಸ್ ಬೈಕ್ಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದ್ದು, ಪರಿಣಾಮವಾಗಿ ರಸ್ತೆಗೆಸೆಯಲ್ಪಟ್ಟ ರಝಿಯಾರ ಮೇಲೆ ಬಸ್ನ ಚಕ್ರ ಹರಿದಿದೆ. ಬಸ್ ಹಲವು ಮೀಟರ್ಗಳಷ್ಟು ದೂರ ತೆರಳಿದ ಬಳಿಕ ನಿಂತಿದೆ. ಘಟನೆಯಿಂದ ರಝಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳದಲ್ಲಿ ಜಮಾಯಿಸಿದ ನಾಗರಿಕರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಸಂದರ್ಭ ರೊಚ್ಚಿ ಗೆದ್ದ ತಂಡವೊಂದು ಬಸ್ನ ಗಾಜುಗಳನ್ನು ಪುಡಿ ಮಾಡಿ ಹಾನಿಗೊಳಿಸಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಕಾಸರಗೋಡು – ಮಂಗಳೂರು ನಡುವೆ ಒಂದು ಗಂಟೆಗೂ ಅಧಿಕ ಸಮಯ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗಲ್ಫ್ ಉದ್ಯೋಗಿಯಾಗಿರುವ ಹನೀಫ್ ಈದುಲ್ ಫಿತ್ರ್ ಹಬ್ಬಕ್ಕೆ ಊರಿಗೆ ಬಂದಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಅವರ ಹೊಸ ಮನೆಯ ಗೃಹ ಪ್ರವೇಶ ನಡೆದಿತ್ತು. ಈ ಬಗ್ಗೆ ನಗರದ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.