ಮಂಗಳೂರು: ನಗರದ ಫಳ್ನೀರ್ ರೋಡ್ ಹಾಗೂ ಬಂದರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ 2 ಮಕ್ಕಳನ್ನು ಚೈಲ್ಡ್ಲೈನ್ ಮಂಗಳೂರು-1098 ರಕ್ಷಿಸಿಸಿ, ಪುರ್ನವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದೆ.
ಮೈಸೂರು ಜಿಲ್ಲೆಯ ಸುಮಾರು 17 ವರ್ಷ ಪ್ರಾಯದ ಬಾಲಕ ಮನೆ ಬಿಟ್ಟು ಬಂದಿದ್ದು ಬೆಳಗ್ಗಿನ ಜಾವ ಫಳ್ನೀರ್ ರೋಡ್ನ ಇಂದಿರಾ ಆಸ್ಪತ್ರೆಯ ಹತ್ತಿರ ಸಿಕ್ಕಿರುತ್ತಾನೆ. ಬಾಲಕ ಒಂಟಿಯಾಗಿರುವುದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಚೈಲ್ಡ್ಲೈನ್ ಮಂಗಳೂರು-1098 ಕ್ಕೆ ಕರೆ ಮಾಡಿ ನೀಡಿದ ಮಾಹಿತಿಯ ಮೇರೆಗೆ ಬಾಲಕನಿದ್ದ ಸ್ಥಳಕ್ಕೆ ತೆರಳಿ ಬಾಲಕನನ್ನು ರಕ್ಷಿಸಿ ಮುಂದಿನ ರಕ್ಷಣೆ ಮತ್ತು ಪುರ್ನವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ಮಕ್ಕಳ ಕಲ್ಯಾಣ ಸಮಿತಿ ಬಾಲಕನಿಗೆ ತಾತ್ಕಾಲಿಕ ಪುರ್ನವಸತಿಯನ್ನು ನೀಡಿದೆ.
ಮತ್ತೊಂದು ಪ್ರಕರಣದಲ್ಲಿ, ಗೋವಾದಿಂದ ಬೆಂಗಳೂರಿನಲ್ಲಿರುವ ತನ್ನ ತಾಯಿಯ ಮನೆಗೆ ಹೊರಟ್ಟಿದ್ದ ಸುಮಾರು 13 ವರ್ಷ ಪ್ರಾಯದ ಬಾಲಕಿ ಒಂಟಿಯಾಗಿರುವುದನ್ನು ಗಮನಿಸಿದ ಮಂಗಳೂರಿಗೆ ಪ್ರಯಾಣಿಸುತ್ತಿದ ಸಹಪ್ರಯಾಣಿಕರೊಬ್ಬರು ಬಾಲಕಿಯಲ್ಲಿ ಮಾತನಾಡಿಸಿದಾಗ ಬಾಲಕಿಯು ನೀಡಿದ ಅಸ್ಪಷ್ಟವಾದ ಮಾಹಿತಿಗಳಿಂದ ಸಮಧಾನಗೊಳ್ಳದ ಅವರು ಬಾಲಕಿಯನ್ನು ಮಂಗಳೂರಿನಲ್ಲಿ ಇಳಿಸಿಕೊಂಡು ಬಂದರು ಪೋಲಿಸ್ ಠಾಣೆಗೆ ಹಸ್ತಾಂತರಿಸಿರುತ್ತಾರೆ.
ಬಂದರು ಪೋಲಿಸ್ ಠಾಣೆಯಿಂದ ಚೈಲ್ಡ್ಲೈನ್ಗೆ ನೀಡಿದ ಮಾಹಿತಿಯಂತೆ, ಸ್ಥಳಕ್ಕೆ ತೆರಳಿದ ಚೈಲ್ಡ್ಲೈನ್-1098 ತಂಡಕ್ಕೆ ಬಂದರು ಪೋಲಿಸರು ಬಾಲಕಿಯನ್ನು ಹಸ್ತಾಂತರಿಸಿರುತ್ತಾರೆ. ಬಾಲಕಿಯ ಮುಂದಿನ ರಕ್ಷಣೆ ಮತ್ತು ಪುರ್ನವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ಮಕ್ಕಳ ಕಲ್ಯಾಣ ಸಮಿತಿ ಬಾಲಕಿಗೆ ತಾತ್ಕಾಲಿಕ ಪುರ್ನವಸತಿಯನ್ನು ನೀಡಿದೆ.
ಈ ಮಕ್ಕಳ ರಕ್ಷಣೆ ಕಾರ್ಯಚರಣೆಯಲ್ಲಿ ಚೈಲ್ಡ್ಲೈನ್ ಮಂಗಳೂರು ಕೇಂದ್ರ ನಿರ್ದೇಶಕರಾದ ರೆನ್ನಿ ಡಿ’ಸೋಜರವರ ಮಾರ್ಗದರ್ಶನದಲ್ಲಿ, ಚೈಲ್ಡ್ಲೈನ್ ಮಂಗಳೂರು ಕೇಂದ್ರ ಸಂಯೋಜನಾಧಿಕಾರಿಯಾದ ಸಂಪತ್ ಕಟ್ಟಿ, ತಂಡ ಸದಸ್ಯೆ ರೇವತಿ ಹೊಸಬೆಟ್ಟು ಹಾಗೂ ಸ್ವಯಂ-ಸೇವಕರಾದ ದೀಪಕ್ ರಾಮಲ್ಕಟ್ಟೆ ಬಾಲಕ ಹಾಗೂ ಬಾಲಕಿಯ ರಕ್ಷಣೆಯನ್ನು ಮಾಡಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ೨ ಮಕ್ಕಳಿಗೂ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ನಿಖೇಶ್ ಶೆಟ್ಟಿ ತಾತ್ಕಾಲಿಕ ಪುರ್ನವಸತಿಗೆ ಆದೇಶ ನೀಡಿದ್ದಾರೆ