ಮಂಗಳೂರು, ಜುಲೈ.05 : ನಕಲಿ ಪದವಿ ಪ್ರಮಾಣ ಪತ್ರ ಪಡೆದಿರುವ ಆರೋಪಿ ಕೇಂದ್ರ ಸಚಿವೆ ಸ್ಮೈತಿ ಇರಾನಿ ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿ ದ.ಕ.ಜಿಲ್ಲಾ ಎನ್ಎಸ್ಯುಐ ನಗರದ ಕ್ಲಾಕ್ಟವರ್ ಬಳಿ ಶನಿವಾರ ಪ್ರತಿಭಟನಾ ಧರಣಿ ನಡೆಸಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಎನ್ನೆಸ್ಯುವಐ ಜಿಲ್ಲಾಧ್ಯಕ್ಷ ಆಶಿತ್ ಪಿರೇರ, `ವಿದ್ಯಾರ್ಥಿಗಳು ಶ್ರಮ ವಹಿಸಿ ಪದವಿ ಪಡೆದರೆ ಕೇಂದ್ರ ಸಚಿವೆ ಸ್ಮೈತಿ ಇರಾನಿ ಹಣ ನೀಡಿ ನಕಲಿ ಪದವಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ನ ಜಿಲ್ಲಾ ಘಟಕದಅದ್ಯಕ್ಷ ಮಿಥುನ್ ರೈ ಮಾತನಾಡಿ ಸ್ಮೈತಿ ಇರಾನಿ 2004ರ ಚುನಾವಣೆಯಲ್ಲಿ ಬಿ.ಕಾಂ ಪದವಿ, 2008ರ ಚುನಾವಣೆಯಲ್ಲಿ ಬಿ.ಎ. ಪದವಿ, 2014ರಲ್ಲಿ ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದಿರುವುದಾಗಿ ನಾಮಪತ್ರದಲ್ಲಿ ತಿಳಿಸಿದ್ದಾರೆ . ಅವರು ಉನ್ನತ ಹುದ್ದೆಯಲ್ಲಿರುವುದು ದೇಶಕ್ಕೆ ಕಪ್ಪು ಚುಕ್ಕೆಯಾಗಿದೆ. ಸ್ಮೈತಿ ಇರಾನಿ, ಸುಷ್ಮಾ ಸ್ವರಾಜ, ವಸುಂಧರಾ ರಾಜೆ ತಕ್ಷಣ ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನಾಕಾರರು ಸ್ಮೈತಿ ಇರಾನಿ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎನ್ಎಸ್ಯುಐ ಮುಖಂಡರಾದ ಮನನ್, ಮಿಲಾಝ ಅತ್ತಾವರ, ಎನ್.ಜಿ ಇರ್ಷಾದ್, ರಿಝ್ವಾನ್, ಆಕರ್ಷ ಬಂಗೇರ, ಮನಮೋಹನ್ ಜೋಯಿಸ್, ದೀಕ್ಷಾ ಪಾಲ್ಗೊಂಡರು.