ಮಂಗಳೂರು, ಜೂನ್.24: ಬೆಂಗರೆ ಕಡಲ ತೀರದಲ್ಲಿ ಉದ್ಧೇಶಿತ ಗಾಲ್ಫ್ ಕೋರ್ಟ್ ರೆಸಾರ್ಟ್ ನಿರ್ಮಾಣವನ್ನು ವಿರೋಧಿಸಿ ಡಿವೈಎಫ್ಐ ಬೆಂಗರೆ ಘಟಕ ತನ್ನ ಹೋರಾಟವನ್ನು ತೀವ್ರಗೊಳಿಸಿದೆ.
ಮೂರನೇ ಹಂತದ ಕಾರ್ಯಕ್ರಮವಾಗಿ ಬೆಂಗರೆ ಗ್ರಾಮದಾದ್ಯಂತ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐನ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಜನತೆಯನ್ನು ಕತ್ತಲಲ್ಲಿಟ್ಟು ಸಾವಿರ ಕೋಟಿ ಬೆಲೆಬಾಳುವ ನೂರಾರು ಎಕರೆ ಸಮುದ್ರ ದಂಡೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದರ ಹಿಂದೆ ಬಹುದೊಡ್ಡ ಹಗರಣ ನಡೆದಿದೆ ಎಂದು ಆರೋಪಿಸಿದರು.
ಗಾಲ್ಫ್ಕೋರ್ಟ್, ರೆಸಾರ್ಟ್ ಯೋಜನೆಗಳ ಹಿಂದೆ ಸ್ಥಳೀಯ ಶಾಸಕರು ಶಾಮೀಲಾಗಿರುವುದು ಸಂಶಯ ಕಾಡುತ್ತಿದೆ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ನಿಷ್ಠೆ ಜನತೆಯ ಪರವಾಗಿರಬೇಕು. ಆದರೆ ಬೆಂಗರೆಯಲ್ಲಿ ಸಾವಿರಾರು ಮನೆಗಳಿಗೆ ಹಕ್ಕುಪತ್ರ, ಮನೆನಂಬ್ರ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಇನ್ನೂ ದೊರೆತಿಲ್ಲ. ಸಿಆರ್ಝಡ್ ನೆಪವನ್ನು ಹೇಳಿ ಅವರನ್ನು ಅಕ್ರಮವಾಸಿಗಳೆಂದು ಕರೆಯಲಾಗುತ್ತದೆ. ಆದರೆ ಸಮುದ್ರ ದಂಡೆಯಲ್ಲಿ ಖಾಸಗೀಯವರಿಗೆ ಅಕ್ರಮವಾಗಿ ಆವರಣ ಗೋಡೆ, ಐಷರಾಮಿ ರೆಸಾರ್ಟ್ ನಿರ್ಮಿಸಲು ಅನುಮತಿ ನೀಡಿದ್ದನ್ನು ನೋಡಿದರೆ ಜನಪ್ರತಿನಿಧಿಗಳ ನಿಷ್ಟೆ ಧಣಿಗಳ ಪರ ಎಂಬುದು ಸಾಬೀತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಡಿವೈಎಫ್ಐನ ಜಿಲ್ಲಾಧ್ಯಕ್ಷ, ಮನಪಾ ಸದಸ್ಯ ದಯಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿದರು. ಡಿವೈಎಫ್ಐ ಮುಖಂಡರಾದ ಸಾದಿಕ್ ಕಣ್ಣೂರು, ನಾಗೇಂದ್ರ ಉರ್ವಸ್ಟೋರ್ ಉಪಸ್ಥಿತರಿದ್ದರು.
ಪ್ರತಿಭಟನೆಯ ನೇತೃತ್ವವನ್ನು ರಿಯಾಝ್ ಬೆಂಗರೆ, ಹನೀಫ್, ರಿಜ್ವಾನ್, ಜಬ್ಬಾರ್, ಜಲಾಲುದ್ದೀನ್, ಹಸನ್ ಮೋನು ವಹಿಸಿದರು. ಬೆಂಗರೆ ಘಟಕದ ಅಧ್ಯಕ್ಷ ಎ.ಬಿ. ನೌಶಾದ್ ಕಾರ್ಯಕ್ರಮ ನಿರ್ವಹಿಸಿದರು. ಪ್ರತಿಭಟನೆಗೂ ಮುನ್ನ ಹೆಚ್ಚಿನ ಸಂಖ್ಯೆಯ ಮಹಿಳೆಯರೂ ಸಹಿತ ಗ್ರಾಮಸ್ಥರು ಗ್ರಾಮದಾದ್ಯಂತ ಮೆರವಣಿಗೆ ನಡೆಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಗಾಲ್ಫ್ಕೋರ್ಟ್ನ ಕಾಮಗಾರಿಯನ್ನು ಕೂಡ ಸ್ಥಗಿತಗೊಳಿಸಲಾಗಿತ್ತು.