ಚಿತ್ರ / ವರದಿ: ರೋನ್ಸ್ ಬಂಟ್ವಾಳ್
ಮುಂಬಯಿ, ಜೂ.21: ಬಹುಮುಖ ಪ್ರತಿಭೆಯ ಯುವ ಕಲಾವಿದ, ಕವಿತೆಯ ಮೂಲವನ್ನು ತನ್ನ ಮಧುರ ಕಂಠಸ್ವರದಿಂದ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸುವಲ್ಲಿ ಯಶಕಂಡ ಬಹುಮುಖಿ ಪ್ರತಿಭೆ, ಪ್ರತಿಭಾನ್ವಿತ ಕಲಾಕಾರನಾಗಿದ್ದು ಇತ್ತೀಚೆಗೆ ಅಕಾಲಿಕವಾಗಿ ಇಹಲೋಕ ತ್ಯಜಿಸಿ ಭಗವಂತನ ಸಾನಿಧ್ಯ ಸೇರಿದ ಪ್ರವೀಣ್ ಟಿ.ಬೈಕಂಪಾಡಿ (ಪ್ರವೀಣ್ ತುಕರಾಮ ಸುವರ್ಣ) ಅವರಿಗೆ ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯು ಶ್ರದ್ಧಾಂಜಲಿ ಸಭೆ ಆಯೋಜಿಸಿ ನುಡಿನಮನ ಸಲ್ಲಿಸಿತು.
ಇಂದಿಲ್ಲಿ ಶುಕ್ರವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಸಂಘದ ಸಮರಸ ಭವನದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಾಂಗಾರ್, ಮಾಜಿ ಉಪಾಧ್ಯಕ್ಷ ಡಾ| ಭರತ್ಕುಮಾರ್ ಪೊಲಿಪು, ರಾಜ್ಕುಮಾರ್ ಕಾರ್ನಾಡ್, ಶೇಖರ್ ಸಸಿಹಿತ್ಲು, ಮೋಹನ್ ಮಾರ್ನಾಡ್, ಪದ್ಮನಾಭ ಸಸಿಹಿತ್ಲು ಮತ್ತಿತರರು ಆದಿಯಲ್ಲಿ ಉಪಸ್ಥಿತರಿದ್ದು ಪ್ರವೀಣ್ ಭಾವಚಿತ್ರಕ್ಕೆ ಪುಷ್ಫಾಂಜಲಿಗೈದು ಶೋಕ ಸಭೆಗೆ ಚಾಲನೆಯನ್ನೀಡಿ ನಮನ ಸಲ್ಲಿಸಿದರು. ಬಳಿಕ ಮನೋಜ್ ರಾವ್ ನೇತೃತ್ವದಲ್ಲಿ ಶೇಖರ್ ಸಸಿಹಿತ್ಲು, ಪದ್ಮನಾಭ ಸಸಿಹಿತ್ಲು, ಗಣೇಶ್ ಎರ್ಮಾಳ್, ಅವಿನಾಶ್ ಕಾಮತ್, ಲತೇಶ್ ಪೂಜಾರಿ, ಜನಾರ್ಧನ ಸಾಲ್ಯಾನ್ ಅವರು ಗಾನನುಡಿಗಳೊಂದಿಗೆ ಕಲಾತ್ಮಕವಾಗಿ ಭಾಷ್ಪಾಂಜಲಿ ಸಲ್ಲಿದರು. ರಾಜ್ಕುಮಾರ್ ಕಾರ್ನಾಡ್ ಗಾನ ಕಾರ್ಯಕ್ರಮ ಸಂಯೋಜಿಸಿದರು.
ಓಂದಾಸ್ ಕಣ್ಣಾಂಗಾರ್, ಅವಿನಾಶ್ ಕಾಮತ್, ಮೋಹನ್ ಮಾರ್ನಾಡ್, ನಾರಾಯಣ ಶೆಟ್ಟಿ ನಂದಳಿಕೆ, ಪದ್ಮನಾಭ ಸಸಿಹಿತ್ಲು, ಮೋಹನ್ ಸಾಲ್ಯಾನ್, ಶ್ರೀಕಾಂತ್ ರಾವ್ ಮತ್ತು ಅನೀಲ್ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿ ಪ್ರವೀಣ್ ಅವರ ಒಳನಾಟದ ಅನುಭವಗಳನ್ನು ಹಂಚಿಕೊಂಡು ನುಡಿ ನಮನಗೈದು ಅಶ್ರುತಾರ್ಪಣೆ ಸಲ್ಲಿಸಿದರು.
ಕತ್ತಲ ಮಧ್ಯೆಯೂ ಮಿಡಿದ ಮನಗಳು
ಕಳೆದ ಒಂದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಮಾಟುಂಗಾ-ಮಾಹಿಮ್ ಪರಿಸರದಾದ್ಯಂತ ವಿದ್ಯುಚ್ಛಕ್ತಿ ಕಡಿತವಾಗಿದ್ದು ಇದು ಕರ್ನಾಟಕ ಸಂಘಕ್ಕೂ ಬಾಧಿಸಿತ್ತು. ಆದುದರಿಂದ ಇಲ್ಲೂ ದಿನವಿಡೀ ಕತ್ತಲು ಕವಿದಿತ್ತು. ಆದರೆ ನೆರೆದ ಕಲಾಕಾರರ ವಿಶಾಲವಾದ ಹೃನ್ಮನಗಳು ಮಾತ್ರ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದ್ದ ಕಾರಣ ಕತ್ತಲ ಮಧ್ಯೆಯೂ ಅಗಲಿಗ ಪ್ರತಿಭಾನಿವಿತ ಕಲಾಕಾರನೋರ್ವನಿಗೆ ಕಲಾತ್ಮಕವಾಗಿ ನಮನ ಸಲ್ಲಿಸಿ ಕತ್ತಲ ಮಧ್ಯೆಯೂ ಕಲಾವಿದರ ಮನಗಳು ಮಿಡಿದವು.
ನಾರಾಯಣ ಶೆಟ್ಟಿ ನಂದಳಿಕೆ, ಕರುಣಾಕರ ಕಾಪು, ಡಾ| ಎಸ್.ಕೆ ಭವಾನಿ, ಶೇಖರ್ ಎ.ಅಮೀನ್, ಕೃಷ್ಣರಾಜ್ ಶೆಟ್ಟಿ, ಜಯಲಕಿ ಉದ್ಯಾವರ, ಕೃಪಾ ಪೂಜಾರಿ, ಬಿ.ಜಿ ನಾಯಕ್, ಪ್ರಭಾಕರ್ ಬೆಳುವಾಯಿ ಸೇರಿದಂತೆ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಪದಾಧಿಕಾರಿಗಳು, ಮಹಾನಗರದಲ್ಲಿನ ಹಿರಿ-ಕಿರಿಯ ಕಲಾವಿದರು ಉಪಸ್ಥಿತರಿದ್ದು, ಪ್ರವೀಣ್ ಅವರ ಸೇವಾಗುಣ, ಕಲಾರಂಗದ ಕೊಡುಗೆಗಳು ಮತ್ತು ಸರಳ ವ್ಯಕ್ತಿತ್ವದ ಜೀವನಶೈಲಿ ಮೆಲುಕು ಹಾಕುತ್ತಾ ಅವರ ಪ್ರತಿಭಾ ಸಂಪನ್ನತೆ ನೆನಪಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ನಮ್ಮ ಸಹೋದರನೋರ್ವನ ಅಗಲಿಕೆ ತುಂಬಲಾಗದ ನಷ್ಟವೇ ಸರಿ. ನಷ್ಟವು ಪ್ರವೀಣ್ ಪರಿವಾರಕ್ಕೆ ಭಾರೀ ಕಷ್ಟಕ್ಕೆ ಸಿಲುಕಿಸಿದ್ದು, ಅವರ ಆಥಿಕ ಸ್ಥಿತಿ ತೀರಾ ಹದಗೆಟ್ಟಿದೆ. ಪ್ರವೀಣ್ರ ಏಕೈಕ ಸುಪುತ್ರಿ ದಿಷಿ ಪ್ರವೀಣ್ ಏಳನೇ ತರಗತಿ ವಿದ್ಯಾಥಿನಿ ಆಗಿದ್ದು ಶಾಲಾ ಖರ್ಚನ್ನೂ ಭರಿಸಲಸಾಧ್ಯವಾಗಿದೆ. ಈ ವರೇಗೆ ಯಾರದ್ದೂ ಬೆಂಬಲವಿಲ್ಲದೆ ಸಂಕಷ್ಟದ ಬದುಕನ್ನಾವರಿಸಿದೆ. ಅವರಿಗೆ ಆಥಿಕ ನೆರವು ಅಗತ್ಯವಾಗಿದೆ. ಕಲಾಭಿಮಾನಿಗಳು, ಸಶಕ್ತ ಕಲಾವಿದರು, ಉದಾರ ದಾನಿಗಳು ಇದನ್ನು ಪೂರೈಸಿದಲ್ಲಿ ಅದೇ ಅರ್ಥಪೂರ್ಣ ಶ್ರದ್ಧಾಂಜಲಿ ಆಗಬಲ್ಲದು ಎಂದು ಡಾ| ಭರತ್ಕುಮಾರ್ ಪೊಲಿಪು ನೆರೆದವರಲ್ಲಿ ಮನವಿಗೈದರು.