ಕುಂದಾಪುರ: ಕೊಲೆ ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಬೈಂದೂರು ಹೇನಬೇರು ನಿವಾಸಿ ರಾಧಾ ಹಾಗೂ ಬಾಬು ದೇವಾಡಿಗನ ಪುತ್ರಿ ಅಕ್ಷತಾ ನಿವಾಸಕ್ಕೆ ಭಾನುವಾರ ಮಧ್ಯಾಹ್ನ ಮಾಜಿ ಕೇಂದ್ರ ಸಚಿವ ಡಾ. ವೀರಪ್ಪ ಮೊಯ್ಲಿ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ ಅಕ್ಷತಾ ನಿವಾಸಕ್ಕೆ ಭೇಟಿ ನೀಡಿದ ಅವರು ಕುಟುಂಬಿಕರಿಗೆ ಸಾಂತ್ವಾನವನ್ನು ಹೇಳಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಭಾವಂತ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಕೊಲೆ ಪ್ರಕರಣದಿಂದ ಮನಸ್ಸಿಗೆ ತುಂಬಾ ನೋವಾಗಿದೆ, ಈಗಾಗಲೇ ಅಕ್ಷತಾ ಕೊಲೆ ಪ್ರಕರಣದ ಆರೋಪಿಗಳಿಬ್ಬರನ್ನು ಪೊಲಿಸರು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಯೂ ಈಗಾಗಲೇ ನಡೆಯುತ್ತಿದೆ. ಸರ್ಕಾರ ಈಗಾಗಲೇ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ, ಅದು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಹೇನಬೇರು ಹಾಗೂ ಮುದ್ದೋಡಿ ಗ್ರಾಮದ ಮೂಲ ಸೌಕರ್ಯ ಕೊರತೆಯನ್ನು ನೀಗಿಸುವ ಸಲುವಾಗಿ ಸಂಬಂಧಪಟ್ಟವರ ಗಮನಸೆಳೆದು ಶೀಘ್ರ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲದೇ ಅಕ್ಷತಾ ಸಹೋದರಿಯರಿಬ್ಬರ ಶಿಕ್ಷಣ ವೆಚ್ಚವನ್ನು ಸಂಘಟನೆ ಮೂಲಕ ಭರಿಸುವ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದರು.
ಈ ಸಂದರ್ಭ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ತಾ.ಪಂ. ಸದಸ್ಯ ರಾಜೂ ಪೂಜಾರಿ, ಮುಖಂಡ ರಾಜು ದೇವಾಡಿಗ, ಮಾಜಿ ಶಾಸಕ ಗೋಪಾಲ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.