ಮಂಗಳೂರು, ಜೂನ್ 21: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧ ಕೇಂದ್ರಗಳಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಯೋಗ ದಿನಾಚರಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಯೋಗಾಭ್ಯಾಸ ನಡೆಸಿದರು.
ಕರಾವಳಿಯಲ್ಲಿ ದ.ಕ. ಜಿಲ್ಲಾಡಳಿತ, ವಿವಿಧ ಯೋಗಾಸಕ್ತ ಸಂಘಟನೆ, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಯೋಗ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸಿದ್ದು, ಮುಂಜಾನೆ 5 ಗಂಟೆಯಿಂದ ಬೆಳಗ್ಗೆ ಸುಮಾರು 10 ಗಂಟೆ ವರೆಗೆ ಬಹುತೇಕ ಸ್ಥಳದಲ್ಲಿ ಯೋಗಾಭ್ಯಾಸ ನಡೆಯಿತ್ತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿ. ಪಂ., ಜಿಲ್ಲಾ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಂಗಳೂರಿನ ಡಾ| ಟಿಎಂಎ ಪೈ ಕನ್ವೆನ್ಶನ್ ಹಾಲ್ನಲ್ಲಿ ಬಾನುವಾರ ಬೆಳಗ್ಗೆ ನಡೆಯಿತ್ತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ನಿಕ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು. ದ. ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ರಾಮಕೃಷ್ಣ ರಾವ್, ಜಿಲ್ಲಾ ಆಯುಷ್ ಪ್ರಭಾರ ಅಧಿಕಾರಿ ಡಾ| ದೇವದಾಸ್, ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಪಾಂಡುರಂಗ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಜಾತಿ, ಮತ, ಧರ್ಮ, ವಯಸ್ಸು, ಲಿಂಗ ಭೇದವಿಲ್ಲದೆ ಯೋಗ ಕಾರ್ಯಕ್ರಮ ನಡೆಯಿತ್ತು. ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಮಾರ್ಗದರ್ಶನ ನೀಡಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಕಷ್ಟವಾಗದಂತೆ ಸರಳ ಯೋಗವನ್ನು ಕಾರ್ಯಕ್ರಮದಲ್ಲಿ ಕಲಿಸಿಕೊಡಲಾಯಿತ್ತು.
ಸಂಘನಿಕೇತನದಲ್ಲಿ 5,000 ಜನರಿಂದ ಯೋಗಾಸನ
ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಬಹುತೇಕ ಯೋಗ ಶಿಕ್ಷಕರ ನೇತೃತ್ವದಲ್ಲಿ ಈಗಾಗಲೇ ದ.ಕ. ಜಿಲ್ಲಾ ಸಮಿತಿ ರಚಿಸಲಾಗಿದ್ದು, ಇದರ ಆಶ್ರಯದಲ್ಲಿ ಇಂದು ಮುಂಜಾನೆ 6 ಗಂಟೆಗೆ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದ 4 ವಿಶಾಲ ಸಭಾಂಗಣದಲ್ಲಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 5 ಸಾವಿರ ಜನರಿಗೆ ಯೋಗಾಸನ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತ್ತು. ಸಂಸದ ನಳಿನ್ಕುಮಾರ್ ಕಟೀಲು ಅವರು ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ಬ್ಯಾಂಕಿನ ಮಾಜಿ ಸಿಎಂಡಿ ಅನಂತಕೃಷ್ಣ, ಮಾಜಿ ಶಾಸಕ ಎನ್.ಯೋಗೀಶ್ ಭಟ್, ವಿಧಾನ ಪರಿಷತ್ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ನಿಕ್, ಮಾಜಿ ಎಮ್ ಎಲ್ಸಿ ಮೋನಪ್ಪ ಭಂಡಾರಿ, ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ
ಪದ್ಮನಾಭ ಕೊಟ್ಟಾರಿ. ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅತಿಥಿಗಳಾಗಿದ್ದರು.
ಲಿಮ್ಕಾದಲ್ಲಿ ದ. ಕ. ಎನ್ಸಿಸಿ ವಿದ್ಯಾರ್ಥಿಗಳು
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಎನ್ಸಿಸಿ ವತಿಯಿಂದ ದೇಶಾದ್ಯಂತ ನಡೆಯುವ ಯೋಗ ಕಾರ್ಯಕ್ರಮ ಲಿಮ್ಕಾ ವಿಶ್ವ ದಾಖಲೆ ಸೃಷ್ಟಿಸಲಿದ್ದು, ಇದರ ಭಾಗವಾಗಿ ಬೆಳಗ್ಗೆ 7ರಿಂದ 7.35ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 3 ಸ್ಥಳಗಳಲ್ಲಿ ಎನ್ಸಿಸಿ ಯೋಗ ಕಾರ್ಯಕ್ರಮ ನಡೆಯಿತ್ತು. ಕೆನರಾ ಪ್ರೌಢಶಾಲೆ ಉರ್ವಾ, ಮಂಗಳೂರು (1600 ಕೆಡೆಟ್ಗಳು), ಆಳ್ವಾಸ್ ಕಾಲೇಜು ಮೂಡಬಿದ್ರೆ (1100 ಕೆಡೆಟ್ಗಳು) ಹಾಗೂ ಉಜಿರೆ ಎಸ್ಡಿಎಂ ಪ್ರೌಢಶಾಲೆಯಲ್ಲಿ (900 ಕೆಡೆಟ್ಗಳು) ಯೋಗ ನಡೆಯಿತ್ತು.
ಕೆನರಾ ಪ್ರೌಢಶಾಲೆ ಉರ್ವಾ ಇಲ್ಲಿ ನಡೆದ ಯೋಗ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ನಿಕ್ ಅವರು ಉದ್ಘಾಟಿಸಿ, ಯೋಗದ ಬಗ್ಗೆ ಉಪನ್ಯಾಸ ನೀಡಿದರು.
ಬಿಜೆಪಿಯಿಂದ ಜಿಲ್ಲೆಯಾದ್ಯಂತ ಯೋಗ ಕಾರ್ಯಕ್ರಮ
ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲೆಯ 8 ಮಂಡಲಗಳಲ್ಲಿ ಯೋಗ ಕಾರ್ಯಕ್ರಮ ಜರಗಿತ್ತು. ಮೂಡಬಿದಿರೆ, ಬಜಪೆ, ಬೆಳ್ತಂಗಡಿ, ಪುತ್ತೂರು, ಉಪ್ಪಿನಂಗಡಿ, ಬೆಟ್ಟಂಪಾಡಿ, ವಿಟ್ಲ, ಬಂಟ್ವಾಳದ ಸಜೀಪ, ಕೋಡಿಕಲ್, ಕುಳಾಯಿ, ಅರ್ಕುಳ ತುಪ್ಪೆಕಲ್ಲು, ಅಡ್ಯಾರ್, ದ.ಕ. ಬಿಜೆಪಿ ಕಚೇರಿ ಹಾಗೂ ಇತರೆಡೆಗಳಲ್ಲಿ ನಿಗದಿತ ಸಮಯದಲ್ಲಿ ಯೋಗ ನಡೆಯಿತ್ತು.
ಐವನ್ ಡಿ’ಸೋಜಾ ನೇತೃತ್ವದಲ್ಲಿ ಯೋಗ
ಯೋಗ ದಿನಾಚರಣೆ ಅಂಗವಾಗಿ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿಯ ಕಾಂಗ್ರೆಸ್ ಕಚೇರಿ ಕಟ್ಟಡದ ಕೆಳಭಾಗದಲ್ಲಿ ಇಂದು ಬೆಳಗ್ಗೆ ಸಾರ್ವಜನಿಕವಾಗಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತ್ತು. ಜೊತೆಗೆ ಸಾರ್ವಜನಿಕರಿಗೆ ಯೋಗ ದಿನಾಚರಣೆ ಹಾಗೂ ಯೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತ್ತು.