ಹೆಣ್ಣಿಗೆ ತಾಯ್ತನ ಎಂಬುದು ವರ ಇದ್ದಂತೆ. ಭಗವಂತ ಸ್ತ್ರೀಯನ್ನು ಸೃಷ್ಟಿ ಮಾಡಿರುವ ಕಾರಣಗಳ ಪೈಕಿ ಇದೂ ಒಂದು. ಸ್ತ್ರೀ ಇಲ್ಲದಿದ್ದರೆ ಸೃಷ್ಟಿಯಲ್ಲಿ ಸಂತಾನೋತ್ಪತ್ತಿ ಸಾಧ್ಯವೇ ಇಲ್ಲ. ಜೀವವನ್ನು ಭೂಮಿಗೆ ನೀಡುವ ಸ್ತ್ರೀ ನಿಜಕ್ಕೂ ಈ ಕಾರಣಕ್ಕೆ ಪೂಜಾರ್ಹಳು.
ಹಿಂದೆಲ್ಲ ಹೆರಿಗೆ ಸಮಯದಲ್ಲಿ ಪ್ರಾಣ ಕಳೆದುಕೊಂಡವರು ಎಷ್ಟೋ ಮಂದಿ. ಹಾಗಾಗಿಯೇ ಹೆರಿಗೆ ಎಂಬುದು ಸ್ತ್ರೀಗೆ ಪುನರ್ಜನ್ಮ ಕೂಡ. ಸ್ತ್ರೀಗೆ ಮಾತೃತ್ವ ಎಂಬುದು ಮಹತ್ವಪೂರ್ಣ ಎಂದೇ ಸಂಶೋಧನೆಗಳು ಹೇಳುತ್ತವೆ.
ಸ್ತ್ರೀ ಗರ್ಭ ಧರಿಸುವುದರಿಂದ ಆಕೆಯ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ಮಗುವಿಗೆ ಜನ್ಮ ನೀಡುವ ತಾಯಿಗೆ ನವತಾರುಣ್ಯ ಬರುತ್ತದೆ. ತಾಯ್ತನ ಎಂಬುದು ಅಂಗಾಂಶದ ಮರು ನಿರ್ಮಾಣದ ಕೆಲಸ ಮಾಡುತ್ತದೆ ಎಂಬುದು ವಿಜ್ಞಾನಿಗಳ ಮಾತು. ಗರ್ಭಾವಸ್ಥೆಯಲ್ಲಿ ಮಹಿಳೆ ನಿಜಕ್ಕೂ ‘ಅರಳುತ್ತಾಳೆ’!
ಗರ್ಭದ ಅವಧಿ ಮಹಿಳೆಗೆ ನವತಾರುಣ್ಯದ ಪರಿಣಾಮ ಬೀರುತ್ತದೆ. ಕೊಂಚ ವಯಸ್ಸಾದ ಮಹಿಳೆಯರಿಗೆ ಮತ್ತೆ ಯೌವ್ವನ ಮರುಕಳಿಸಲು ಗರ್ಭಾವಸ್ಥೆ ನೆರವಾಗುತ್ತದೆ. ಅಂಗಾಂಶಗಳ ಪುನರುತ್ಥಾನದ ಜತೆಗೆ ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ತಡೆಯಲು ನೆರವಾಗುತ್ತದೆ.
ಗರ್ಭಾವಸ್ಥೆ ಎಂಬುದು ಮಾನವ ಶರೀರದ ಒಂದು ವಿಶಿಷ್ಟ ಸ್ಥಿತಿಯಾಗಿದೆ. ಹೀಗಾಗಿ ಏಕಕಾಲದಲ್ಲಿ ಇದು ಎರಡು ಜೀವಗಳ ವ್ಯವಸ್ಥೆಯನ್ನು ನಿಭಾಯಿಸಬೇಕಿರುತ್ತದೆ. ಹೆಣ್ಣು ಹೊಟ್ಟೆಯಲ್ಲಿ ಹೊತ್ತಿರುವ ಮಗುವಿನ ಸೀರಮ್(ರಕ್ತದ ತೆಳುಭಾಗ, ರಕ್ತಸಾರ) ತಾಯಿಯ ಶರೀರಕ್ಕೆ ಸೇರಿಸಿದಂಥ ಪರಿಣಾಮ ಬೀರುತ್ತದೆ. ಹಾಗಾಗಿಯೇ ಇದು ತಾಯಿಯ ಮೇಲೆ ನವತಾರುಣ್ಯದ ಪ್ರಭಾವ ಬೀರುತ್ತದೆ.
ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಅಂಗಾಂಶಗಳು ತಾವಾಗಿಯೇ ಪುನರ್ ನಿರ್ಮಾಣಗೊಳ್ಳುವುದು ಕಠಿಣ ವಿಚಾರ. ಆದರೆ, ಗರ್ಭಾವಸ್ಥೆ ಎಂಬುದು ಅಂಗಾಂಶಗಳ ಪುನರ್ ನಿರ್ಮಾಣದ ನಿಟ್ಟಿನಲ್ಲಿ ತಾಯಿಯ ಸ್ನಾಯುಗಳ ಸಾಮರ್ಥ್ಯವನ್ನೂ ಮರಳಿಸುತ್ತದಂತೆ.
ಒಂದು ಕೌತುಕ ಸಂಶೋಧನೆ
ಹೆಣ್ಣಿಗೆ ತಾಯ್ತನದಿಂದ ಯೌವ್ವನ ಹೆಚ್ಚಾಗುತ್ತದೆ ಎಂಬ ಸಂಶೋಧನೆಯನ್ನು ಇಲಿಗಳ ಮೇಲೆ ವಿಜ್ಞಾನಿಗಳು ಪ್ರಯೋಗ ಮಾಡಿ ಸಾಬೀತು ಪಡಿಸಿದ್ದಾರೆ. ವಯಸ್ಸಿನಲ್ಲಿ ಹಿರಿಯದಾದ ಇಲಿಗೆ, ಯುವ ಇಲಿಯ ರಕ್ತವನ್ನು ವರ್ಗಾಯಿಸಿದಾಗ ಸ್ವಾಭಾವಿಕವಾಗಿ ವಯಸ್ಸಾದ ಇಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸ್ಮರಣಶಕ್ತಿ ಉತ್ತಮಗೊಂಡಿದ್ದೂ ಕಂಡು ಬಂದಿದೆ.