ಕುಂದಾಪುರ: ಗುರುವಾರ ಮಧ್ಯಾಹ್ನ 4 ಗಂಟೆ ಬಳಿಕ ಸುರಿದ ಭಾರೀ ಮಳೆ ಹಾಗೂ ಬೀಸಿದ ಭಾರೀ ಬಿರುಗಾಳಿಗೆ ಕೊಲ್ಲೂರು ಸಮೀಪದ ಜಡ್ಕಲ್, ಮುದೂರು, ಹಾಲ್ಕಲ್ ಪ್ರದೇಶ ತತ್ತರಗೊಂಡಿದೆ.
ಸಂಜೆ ಸುಮಾರಿಗೆ ಬೀಸಿದ ಭಾರೀ ಬಿರುಗಾಳಿಗೆ ಹಲವು ವಿದ್ಯುತ್ ಕಂಬಗಳು, ರಸ್ತೆ ಸಮೀಪದ ಮರಗಳು, ಬಾಳೆ ಗಿಡಗಳು ಧರಾಶಾಹಿಯಾಗಿದ್ದು ಅಪಾರ ನಷ್ಟಕ್ಕೆ ಈ ಭಾಗದ ಜನರು ಗುರಿಯಾಗಿದ್ದಾರೆ. ಸ್ಥಳದಲ್ಲಿ ಗುರುವಾರ ಸಂಜೆಯಿಂದಲೇ ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದು, 4-5 ಕಿ.ಮೀ. ವ್ಯಾಪ್ತಿಯಲ್ಲಿ ಬಹುತೇಕ ವಿದ್ಯುತ್ ಕಂಬಗಳು ನೆಲಕ್ಕುರುಳಿದಿದೆ.
ಬಾಳೆಗಿಡಗಳು ನೆಲಸಮ: ಪರಿಸರದಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಕೊಲ್ಲೂರು ಸಮೀಪದ ಜಡ್ಕಲ್ ಪರಿಸರದ ಹಲವು ಭಾಗಗಳ 50000 ಕ್ಕೂ ಅಧಿಕ ಬಾಳೆ ಗಿಡಗಳು ನೆಲಕಚ್ಚಿದೆ. ಇನ್ನೇನು ಒಂದೆರಡು ವಾರಗಳಲ್ಲಿ ಬಾಳೆ ಗೊನೆಗಳು ಫಸಲಾಗುತ್ತಿದ್ದ ಈ ಸಂದರ್ಭದಲ್ಲಿ ಬಾಳೆ ಗಿಡಗಳು ನಾಶವಾದ ಕಾರಣ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಹತ್ತಕ್ಕೂ ಅಧಿಕ ಮಾಲೀಕರಿಗೆ ಸೇರಿದ ವಿವಿಧ ತೋಟಗಳಲ್ಲಿನ 5000 ಸಾವಿರಕ್ಕೂ ಅಧಿಕ ಬಾಳೆಗಿಡಗಳು ನಾಶವಾಗಿರುವ ಬಗ್ಗೆ ಮಾಹಿತಿಯಿದೆ.