(ಸಾಂದರ್ಭಿಕ ಚಿತ್ರ)
ಉಡುಪಿ: ನದಿಯ ನೀರಿನಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಬಾಲಕನೋರ್ವ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗಿ ಮ್ರತಪಟ್ಟ ಘಟನೆ ಬ್ರಹ್ಮಾವರದ ಸೀತಾನದಿಯಲ್ಲಿ ನಡೆದಿದೆ.
ಬ್ರಹ್ಮಾವರ ಮುದ್ದುಮನೆ ನಿವಾಸಿ ಭುಜಂಗ ಶೆಟ್ಟಿಯವರ ಪುತ್ರ ನಿಖಿಲ್ (10) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕ.
ಮನೆ ಸಮೀಪದ ಸೀತಾನದಿಯಲ್ಲಿ ಭುಜಂಗ ಶೆಟ್ಟಿಯವರ ಮಕ್ಕಳಾದ ನಿಖಿಲ್, ನಿಶಾಂತ್ ಮತ್ತು ಸಂಬಂಧಿಕರ ಮಕ್ಕಳಾದ ಮೈತ್ರಿ,ಶರಣ್ರವರು ಭುಜಂಗ ಶೆಟ್ಟಿರವರ ಹೆಂಡತಿಯ ಅಣ್ಣನಾದ ರವೀಶ್ ಎನ್ನುವವರ ಜೊತೆ ಆಟವಾಡುತ್ತಿದ್ದ ಸಂದರ್ಭ ನಿಖಿಲ್ ನೀರಿಗಿಳಿದಿದ್ದಾನೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗಿದ ನಿಖಿಲನನ್ನು ಮೇಲಕ್ಕೆತ್ತಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕೂಡ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.