ಕನ್ನಡ ವಾರ್ತೆಗಳು

ದೀನದಲಿತರ ಮಹಾತಾಯಿ ಮದರ್ ಥೆರೆಸಾರ ತೇಜೋವಧೆ ವಿರುದ್ಧ ಸಿಪಿಎಂ ಪ್ರತಿಭಟನೆ

Pinterest LinkedIn Tumblr

mother_teresha_protest_1

ಮಂಗಳೂರು,ಫೆ.27: ಮದರ್ ಥೆರೆಸಾ ಅವರು ಮತಾಂತರ ಉದ್ದೇಶಕ್ಕಾಗಿಯೇ ಭಾರತದಲ್ಲಿ ದೀನದಲಿತರ ಸೇವೆ ಮಾಡಿದ್ದಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವಹೇಳನ ಮಾಡಿರುವುದನ್ನು ಖಂಡಿಸಿ, ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆಯಿತು.

ಮದರ್ ಥೆರೆಸಾ ಭಾರತ ದೇಶಕ್ಕೆ ಬಂದು ಈ ದೇಶದ ದೀನ ದಲಿತರ ಸೇವೆ ಮಾಡಿ, ನೋಬೆಲ್ ಪ್ರಶಸ್ತಿಯಂಥ ಅಂತಾರಾಷ್ಟ್ರೀಯ ಗೌರವ ಪಡೆದವರು. ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳವರೆಗೂ ಅವರ ಬಗ್ಗೆ ಯಾರೊಬ್ಬರೂ ಕೀಳು ಮಾತು ಮಾತಾಡಿದ್ದಿಲ್ಲ, ಭಾರತದ ಎಲ್ಲರೂ ಅವರ ಸೇವೆಯನ್ನು ಶ್ಲಾಘಿಸಿದವರೇ. ಸಂಘ ಪರಿವಾರದ ಮುಖಂಡರು ಮಾತ್ರ ಕ್ರ್ರೈಸ್ತರನ್ನು, ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಾಗಿ ಪರಿಗಣಿಸಿ, ಅವರ ಮೇಲೆ ಅವರ ಪ್ರಾರ್ಥನಾಲಯಗಳ ಮೇಲೆ ದಾಳಿ ಮಾಡಿಸುತ್ತಿದ್ದಾರೆ ಎಂದು ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.

mother_teresha_protest_2

ಸೈಂಟ್ ಆಂಟೋನಿ ಆಶ್ರಮದ ನಿರ್ದೇಶಕ ಫಾದರ್ ಓನಿಲ್ ಡಿಸೋಜ ಮಾತನಾಡಿ, ಭಾರತದಲ್ಲಿ ರೋಗಿಗಳ ದುರ್ಬಲರ, ವೃದ್ಧರ ಸೇವೆ ನಿಸ್ವಾರ್ಥವಾಗಿ ಮಾಡಿದ ಕಾರಣದಿಂದ ಮದರ್ ಥೆರೆಸಾ ಅವರು ನೋಬೆಲ್ ಪ್ರಶಸ್ತಿಯಂಥ ಗೌರವಕ್ಕೂ, ಭಾರತರತ್ನ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಈ ರೀತಿ ಬಡವರ, ರೋಗಿಗಳ ಸೇವೆಯನ್ನು ಆರ್‌ಎಸ್‌ಎಸ್‌ನವರು ಯಾಕೆ ಮಾಡುತ್ತಿಲ್ಲ. ಇಲ್ಲದ ದೂರನ್ನು ಮಹಾತಾಯಿ ಮದರ್ ಥೆರೆಸಾ ಅವರಿಗೆ ಹೊರಿಸುವ ಬದಲು, ಆ ಮಹಾತಾಯಿ ಮಾಡಿದ ಕೆಲಸವನ್ನು ಆರೋಪಿಸುವವರು ಮಾಡಿ ತೋರಿಸಲಿ ಎಂದು ಹೇಳಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕಾಸ್ಟಲಿನೊ, ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಉತ್ತರ ಕಾರ್ಯದರ್ಶಿ ಕೃಷ್ಣಪ್ಪ ಕೊಂಚಾಡಿ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ವಾಸುದೇವ ಉಚ್ಚಿಲ ಮಾತನಾಡಿದರು.

mother_teresha_protest_3

ರೊಜಾರಿಯೊ ಚರ್ಚ್ ಧರ್ಮಗುರು ಫಾದರ್ ಜೆ.ಬಿ.ಕ್ರಾಸ್ತ, ಅಲೋಶಿಯಸ್ ಕಾಲೇಜಿನ ವೈಸ್‌ಪ್ರಿನ್ಸಿಪಾಲ್ ಫಾದರ್ ಫ್ರಾನ್ಸಿಸ್ ಅಲ್ಮೇಡಾ, ಫಾದರ್ ವೆಲೇರಿಯನ್ ಮಿನೇಜಸ್, ಬೆಥನಿ ಸಂಸ್ಥೆ ಮುಖ್ಯಸ್ಥರಾದ ಸಿಸ್ಟರ್ ಮಿಶೆಲ್, ಸಂತ ಆನ್ಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಸಿಸ್ಟರ್ ಶಾಲಿನಿ, ಐಸಿವೈಎಂ ಮುಖಂಡ ಶೆಲ್ಡನ್ ಕ್ರಾಸ್ತ, ಆಲ್ವಿನ್ ಡಿಸೋಜ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಜೈಸನ್ ಡಿಸೋಜ, ದಿಲೀಪ್ ಕಾಟಿಪಳ್ಳ, ಸಿಪಿಎಂ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಜಯಂತಿ ಬಿ.ಶೆಟ್ಟಿ, ಸಂತೋಷ್ ಶಕ್ತಿನಗರ, ಸಂತೋಷ್ ಬಜಾಲ್, ಪ್ರೇಮನಾಥ ಜಲ್ಲಿಗುಡ್ಡೆ, ಭಾರತಿ ಬೋಳಾರ, ದಿನೇಶ್ ಶೆಟ್ಟಿ ಮತ್ತಿತರರಿದ್ದರು. ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಯೋಗೀಶ್ ಜಪ್ಪಿನಮೊಗರು ವಂದಿಸಿದರು.

Write A Comment