ಕನ್ನಡ ವಾರ್ತೆಗಳು

ಉಳಾಯಿಬೆಟ್ಟು ಗಲಭೆ ಪ್ರಕರಣ : ಸಿಸಿಬಿ ಪೊಲೀಸರಿಂದ ಪ್ರಮುಖ ಆರೋಪಿ ಖಾಲಿದ್ ಸೆರೆ

Pinterest LinkedIn Tumblr

Ulaibettu_kalid_arest

ಮಂಗಳೂರು: ಉಳಾಯಿಬೆಟ್ಟು ಎಂಬಲ್ಲಿ ಇತ್ತೀಚೆಗೆ ನಡೆದ ಗಲಭೆಯ ಪ್ರಮುಖ ಆರೋಪಿ ಉಳಾಯಿಬೆಟ್ಟು ಸಾಲೆ ಜುಮ್ಮಾ ಮಸೀದಿ ಸಮೀಪದ ಸೈನಾಝ್ ಮಂಜಿಲ್ ನಿವಾಸಿ ಖಾಲಿದ್ (24) ಎಂಬಾತನನ್ನು ಬುಧವಾರ ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಈತ ಇತ್ತೀಚೆಗೆ ನಡೆದ ಉಳಾಯಿಬೆಟ್ಟು ಗಲಭೆ ಪ್ರಕರಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ. ಉಳಾಯಿಬೆಟ್ಟು ಸೇತುವೆ ಬಳಿಯ ನಾಗಬನದ ಹತ್ತಿರ ಗಲಭೆ ಮಾಡಿ ನಂತರ ಉಳಾಯಿಬೆಟ್ಟುವಿನಲ್ಲಿ ಮನೆಗಳನ್ನು ಲೂಟಿ ಮಾಡಿ ಸಮಾಜದಲ್ಲಿ ಅಲ್ಲಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಸಂಚು ರೂಪಿಸಿದ್ದ. ಘಟನೆ ನಡೆದ ಬಳಿಕ ಈತ ತಲೆಮರೆಸಿಕೊಂಡಿದ್ದ.

ಈತನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಅರ್ಕುಳ ಎಂಬಲ್ಲಿರುವ ತುಪ್ಪೆಕಲ್ಲು ಮಗ್ರಂತಾಯ ದೈವಸ್ಥಾನದ ದ್ವಾರದ ಬಳಿ ಇರುವ ಬಸ್ ನಿಲ್ದಾಣದ ಸಮೀಪದಿಂದ ಬಂಧಿಸಿ ಮಂಗಳೂರು ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಿದ್ದಾರೆ.

ಹಳೆ ಆರೋಪಿ: ಖಾಲಿದ್ 2006ರಲ್ಲಿ ಉಳಾಯಿಬೆಟ್ಟು ಖಾದ್ರಿ ಬ್ಯಾರಿ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣ, 2007ರಲ್ಲಿ ಮರಳು ವ್ಯಾಪಾರಿಗಳಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣ, 2009ರಲ್ಲಿ ಉಳಾಯಿಬೆಟ್ಟುವಿನ ಅಬೂಬಕ್ಕರ್ ಎಂಬವರನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣ, 2013ರಲ್ಲಿ ನಸೀರ್ ಎಂಬವರನ್ನು ಕೊಲೆ ನಡೆಸಲು ಯತ್ನಿಸಿದ ಪ್ರಕರಣ, 2013ರಲ್ಲಿ ಉಳಾಯಿಬೆಟ್ಟುವಿನ ಹರೀಶ್ ಪೂಜಾರಿ ಹಾಗೂ ವಿಶ್ವನಾಥ ಪೂಜಾರಿ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

ಪೊಲೀಸ್ ಕಮಿಷನರ್ ಎಸ್.ಮುರುಗನ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಂತೋಷ್ ಬಾಬು ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್‌ಸ್ಪೆಕ್ಟರ್ ವೆಲೆಂಟೈನ್ ಡಿಸೋಜ ಮತ್ತು ಪಿಎಸ್‌ಐ ಶ್ಯಾಮ್‌ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

Write A Comment