ಕುಂದಾಪುರ: ಸುಮಾರು 35 ವರ್ಷಗಳ ಹಿಂದೆ ಉಡುಪಿ ಹಾಗೂ ಕುಂದಾಪುರ ತಾಲೂಕಿನ 68 ಗ್ರಾಮಗಳ 15,702 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಸಲುವಾಗಿ, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆರಂಭವಾದ ವಾರಾಹಿ ನೀರಾವರಿ ಯೋಜನೆಯಲ್ಲಿ ರೈತರಿಗೆ ನೀರು ಕೊಡುವ ಯಾವುದೇ ಸ್ಪಷ್ಟ ಉದ್ದೇಶವು ಕಂಡುಬರುತ್ತಿಲ್ಲ, ಇನ್ನೂ ಅರ್ಧದಷ್ಟು ಕಾಮಗಾರಿ ಮುಗಿದಿಲ್ಲ, ಡಿಸೆಂಬರ್ ಅಂತ್ಯದೊಳಗಾಗಿ ವಾರಾಹಿ ನೀರು ಕೊಡಿಸುವ ಭರವಸೆಯನ್ನು ಸಂಬಂದಪಟ್ಟ ಸಚಿವರು ಹಾಗೂ ಉಸ್ತುವಾರಿ ಸಚಿವರು ನೀಡಿದ್ದು, ಈ ಭರವಸೆ ಈಡೇರದ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ರೈತ ಸಂಘ ಹೋರಾಟದ ದಾರಿ ಹಿಡಿದಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘ (ರಿ.) ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಹೇಳಿದ್ದಾರೆ.
ವಾರಾಹಿ ಯೋಜನೆಯಲ್ಲಿ ರೈತರಿಗೆ ಯಾವುದೇ ಅನುಕೂಲವಾಗುತಿಲ್ಲ, ಇನ್ನೂ ವಾರಾಹಿ ನೀರು ಬಿಡದ ಹಿನ್ನೆಲೆಯಲ್ಲಿ ವಾರಾಹಿ ನೀರಿಗಾಗಿ ಉಡುಪಿ ಜಿಲ್ಲಾ ರೈತಸಂಘ (ರಿ.) ವತಿಯಿಂದ ಗುರುವಾರ ಸಿದ್ದಾಪುರದ ವಾರಾಹಿ ಯೋಜನೆಯ ಕಾರ್ಯಪಾಲಕ ಇಂಜಿನೀಯರ್ ಕಚೇರಿ ಸಮೀಪದಲ್ಲಿ ಹಮ್ಮಿಕೊಂಡ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
೩೫ ವರ್ಷಗಳ ಹಿಂದೆ ವಾರಾಹಿಯ ಆರಂಭಿಕ ಅಂದಜು ವೆಚ್ಚ ಕೇವಲ ೯.೫೪ ಕೋಟಿ ರೂ. ಆಗಿದ್ದು ಸದ್ಯ ೫೮೯ ಕೋಟಿ ವೆಚ್ಚವನ್ನು ಈ ಯೋಜನೆಗಾಗಿ ಮಾಡಲಾಗಿದೆ, ಇಷ್ಟು ಹಣವನ್ನು ವೆಚ್ಚಮಾಡಿಯೂ ಒಂದು ಹನಿ ನೀರನ್ನು ಡ್ಯಾಮಿನಿಂದ ಕಾಲುವೆಗೆ ಹರಿಸಿಲ್ಲ ಆದರೂ ಕಾಲುವೆಗಳು ಕುಸಿಯುತ್ತಲಿದೆ ಎಂದು ಅವರು ಹೇಳಿದ ಅವರು ಇನ್ನೂ ಯಾವ ಗ್ರಾಮಕ್ಕೆ ನೀರು ಹರಿಸಬೇಕೆಂಬುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ವಾರಾಹಿ ಯೋಜನೆಯಲ್ಲಿ ಹಲವು ಹಗರಣಗಳು ನಡೆದಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕಾಗಿದೆ, ಈಗಾಗಲೇ ಉಪಲೋಕಾಯುಕ್ತರ ನೇತ್ರತ್ವದಲ್ಲಿ ತನಿಖೆ ನಡೆಯುತ್ತಿರುವುದು ಸಮಾಧಾನಕರ ವಿಚಾರವಾಗಿದೆ ಎಂದರು.
ಡಿಸೆಂಬರ್ ಅಂತ್ಯದೊಳಗೆ ನೀರು ಹರಿಸುವ ಬಗ್ಗೆ ಸಂಬಂದಪಟ್ಟ ಸಚಿವರು ಹೇಳಿದ್ದು, ಭರವಸೆ ಈಡೆರಿಸದೇ, ಕಾಲುವೆಗೆ ನೀರು ಹರಿಸದಿದ್ದಲ್ಲಿ ಜನವರಿಯಲ್ಲಿಯೇ ಹೋರಾಟ ನಡೆಸುವುದಾಗಿ ರೈತ ಸಂಘ ಎಚ್ಚರಿಕೆ ನೀಡಿತ್ತು. ಭರವಸೆ ಹುಸಿಯಾಗಿದ್ದು, ಆಶ್ವಾಸನೆಯಂತೆ ಅವರು ನೀರು ಹರಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾದಿ ಹಿಡಿದಿದು ಇದು ಅಹೋರಾತ್ರಿ ನಡೆಯಲಿದೆ, ಮುಂದಿನ ದಿನಗಳಲ್ಲಿಯೂ ವಾರಾಹಿ ನೀರಿಗಾಗಿ ಹಂತಹಂತವಾಗಿ ಪ್ರತಿಭಟನೆ ನಡೆಯಲಿದೆ ಎಂದರು.
ವಾರಾಹಿ ಯೋಜನೆ ಆರಂಭದಿಂದಲೂ ಸರಕಾರವಿತ್ತು, ಇಂದೂ ಇದ್ದು ಮುಂದು ಸರಕಾರ ಇರುತ್ತದೆ, ಸರಕಾರಯಿದೆಯೆಂದು ನಾವು ಸುಮ್ಮನೆ ಕೂತರೇ ಕೆಲಸ ಖಂಡಿತವಾಗಿಯೂ ಆಗೊಲ್ಲ, ದರಣಿ ಮಾಡುವುದು ತಪ್ಪು ಎಂದು ಯಾರು ಹೇಳಲಾಗುವುದುಇಲ್ಲ, ಯಾವುದೇ ಜವಬ್ದಾರಿಯುತ ಸ್ಥಾನದಲ್ಲಿರುವವರು ಇಂತಿಷ್ಟು ದಿನದೊಳಗೆ ವಾರಾಹಿ ನೀರು ಹರಿಸುತ್ತೇವೆಂದು ಭರವಸೆ ನೀಡಿದಲ್ಲಿ ನಮ ಪ್ರತಿಭಟನೆಯನ್ನು ನಿಲ್ಲಿಸುತ್ತೇವೆಂದು ಹೇಳಿದರು.
ಸ್ಥಳೀಯ ಯುವತಿ ಚೈತ್ರಾ ಶೆಟ್ಟಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ, ಜಿ.ಪಂ. ಸದಸ್ಯ ಗಣಪತಿ ಟಿ. ಶ್ರೀಯಾನ್, ತಾ.ಪಂ. ಸದಸ್ಯರಾದ ರಾಜು ಪೂಜಾರಿ, ಸದಾನಂದ ಶೆಟ್ಟಿ ಕೆದೂರು, ಬೈಂದೂರು ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ, ಕುಂದಾಪುರ ಕಾಂಗ್ರೆಸ್ ಕುಂದಾಪುರ ಪುರಸಭೆಯ ಸದಸ್ಯರು, ವಿವಿಧ ಗ್ರಾ.ಪಂ. ಅಧ್ಯಕ್ಷರು ಸದಸ್ಯರು, ಮೊದಲದವರು ಉಪಸ್ಥಿತರಿದ್ದರು.
ತಹಶಿಲ್ದಾರ್ ಭೇಟಿ: ಗುರುವಾರ ಸಂಜೆ ವೇಳೆಗೆ ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ಪ್ರಮುಖರು, ನಿರ್ದಿಷ್ಟ ದಿನಾಂಕದೊಳಗೆ ನೀರು ಹರಿಸುವ ಭರವಸೆಯನ್ನು ಸಂಬಂದಪಟ್ಟವರು ನೀಡಿದರೇ ಪ್ರತಿಭಟನೆ ಹಿಂತೆಗೆದೊಳ್ಳುವ ಬಗ್ಗೆ ಹೇಳಿದರು.