ಸುರತ್ಕಲ್ ,ಡಿ.27: ಜನರ ಸಮಸೈಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಕಾಲದಲ್ಲಿ ಸ್ಪಂದಿಸಿದರೆ ಸುಭದ್ರ ಸಮಾಜ ನಿರ್ಮಾಣ ಸಾದ್ಯ ಎಂದು ಕೇಂದ್ರ ಸರಕಾರದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನುಡಿದರು.
ಅವರು ಶನಿವಾರ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಮನಪಾ ವ್ಯಾಪ್ತಿಯ ಸುರತ್ಕಲ್ ಹೋಬಳಿ ಮಟ್ಟದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹಸಿವು – ಬಡತನ ಮುಕ್ತ ಸಮಾಜದ ನವ ನಿರ್ಮಾಣಕ್ಕೆ ಅಧಿಕಾರಿ ವರ್ಗ ಪ್ರಯತ್ನಿಸಬೇಕು. ಸರ್ವರಿಗೂ ಶಿಕ್ಷಣ – ಆರೋಗ್ಯ ನಮ್ಮೇಲ್ಲರ ಗುರಿಯಾಗಬೇಕು ಎಂದರು. ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಅರ್ಥಿಕವಾಗಿ ಹಿಂದುಳಿದವರಿಗೆ ಆರೋಗ್ಯ ಭಾಗ್ಯ ಯೋಜನೆಯಲ್ಲಿ ರಾಜ್ಯದಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಪರಿಹಾರ ಧನ ವಿತರಿಸಿರುವುದು ಅಭಿನಂದನಾರ್ಹ ವಿಚಾರ ಎಂದು ಆಸ್ಕರ್ ಹೇಳಿದರು.
ಸ್ಥಳಿಯ ಶಾಸಕ ಬಿ.ಎ.ಮೊಹಿಯುದ್ಧೀನ್ ಬಾವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುರತ್ಕಲ್ ಸೇರಿದಂತೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ವಿವಿಧ ಸಮಸೈಗಳಿಗೆ ಶಾಸ್ವತ ಪರಿಹಾರವನ್ನು ನೀಡುವ ಕುರಿತಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಹಕ್ಕು ಪತ್ರ ನೀಡಲು 94.ಸಿ (ಅಕ್ರಮ – ಸಕ್ರಮ) ಯೋಜನೆಯನ್ನು ರಾಜ್ಯ ಸರಕಾರವು ಜಾರಿಗೊಳಿಸಿದ್ದು, ಈ ವ್ಯವಸ್ಥೆಯನ್ನು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅತೀ ಶೀಘ್ರದಲ್ಲಿ ಜಾರಿ ಮಾಡಲಾಗುವುದು ಎಂದರು.
ಕೃಷ್ಣಪುರ, ಕಾಟಿಪಳ್ಳ, ಕುಳಾಯಿ, ಕೂಳೂರು,ಕಾವೂರು ಪ್ರದೇಶದಲ್ಲಿ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸುರತ್ಕಲ್ ನಲ್ಲಿ ಸಾರ್ವಜನಿಕ, ಖಾಸಗೀ ಸಹಭಾಗಿತ್ವದಲ್ಲಿ ಬೃಹತ್ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದರು.
ಪ್ರಸ್ತುತ ಸಾಲಿನಲ್ಲಿ ಸುಮಾರು 5 ಕೋಟಿಗಳ ಅನುದಾನವನ್ನು ದೇವಸ್ಥಾನ, ಮಸೀದಿ, ಚರ್ಚ್ ಮುಂತಾದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ವಿವಿಧ ಯೋಜನೆಗಳಡಿ ನೀಡಲಾಗಿದೆ ಎಂದರು. ವಿವಿಧ ಯೋಜನೆಗಳಿಂದ ಒಟ್ಟು 100 ಕೋಟಿಗೂ ಮಿಕ್ಕಿ ಅನುದಾನಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂದರು. ಸಾರ್ವಜನಿಕರು ಮಾಡಿದ ಮನವಿಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅದೇಶಿಸಿದರು.
132 ಮಂದಿಗೆ ಹಕ್ಕು ಪತ್ರ ವಿತರಣೆ :
ಅಶ್ರಯ ನಿವೇಶನ ಯೋಜನೆಯಲ್ಲಿ ಈ ಹಿಂದೆ ಫಲಾನುಭವಿಗಳಿಗಾಗಿರುವ 132 ಮಂದಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು, ವಾಜಪೇಯಿ ನಗರ ನಿವೇಶನ ಯೋಜನೆಗೆ 300 ಫಲಾನುಭವಿಗಳನ್ನು ಗುರುತಿಸಲಾಯಿತು, ವಾಜಪೇಯಿ ನಗರ ವಸತಿ ಯೋಜನೆಯಡಿ 17 ಮಂದಿಯ ಕಾಮಗಾರಿಗೆ ಆದೇಶ ನೀಡಲಾಯಿತು. ಕಂದಾಯ ಇಲಾಖಾ ವತಿಯಿಂದ 169 ಮಂದಿ ಫಲಾನುಭವಿಗಳಿಗೆ ಸಂದ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಯೋಜನೆಗಳ ಆದೇಶ ಪತ್ರವನ್ನು ವಿತರಿಸಲಾಯಿತು. ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 24 ಮಂದಿ ಫಲಾನುಭವಿಗಳಿಗೆ ಒಟ್ಟು 11,76,500 ರೂಗಳ ಮೊತ್ತದ ಚೆಕ್ ಗಳನ್ನು ಹಸ್ತಾಂತರಿಸಲಾಯಿತು. 200 ಫಲಾನುಭವಿಗಳಿಗೆ ಹಸಿರು ಪಡಿತರ ಚೀಟಿಯನ್ನು ವಿತರಿಸಲಾಯಿತು, ಅರೋಗ್ಯ ಕಾರ್ಡ್ ಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಮಾಜಿ ಶಾಸಕ ಕೆ ವಿಜಯ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ ಗಫೂರ್, ಜಿಲ್ಲಾ ಪಂಚಾಯತ್ ಸದಸ್ಯೆ ಯಶವಂತಿ ಆಳ್ವ, ಮಂಗಳೂರು ಮಹಾನಗರ ಪಾಲಿಕೆ ಮಹಾ ಪೌರ ಮಹಾಬಲ ಮಾರ್ಲ, ಉಪಮೇಯರ್ ಕವಿತಾ, ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅಶೋಕ್ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ , ಮತ್ತು ಅಶೋಕ್ ಡಿ.ಕೆ, ಮನಪಾ ಸದಸ್ಯರಾದ ಭಾಸ್ಕರ ಮೊಯಿಲಿ, ತಿಲಕ್ ರಾಜ್, ಕೃಷ್ಣಾಪುರ, ಪ್ರತಿಭಾ ಕುಳಾಯಿ, ಗುಣಶೇಖರ ಶೆಟ್ಟಿ, ರೇವತಿ ಪುತ್ರನ್, ಅಯಾಝ್ ಕೃಷ್ಣಾಪುರ, ಬಶೀರ್ ಅಹಮ್ಮದ್, ಮಹಮ್ಮದ್ ಕುಂಜತ್ತಬೈಲ್, ಕವಿತಾ ಸನಿಲ್, ದಯಾನಂದ್, ಮಾಜಿ ಮೇಯರ್ ಗಳಾದ ಹಿಲ್ಡಾ ಆಳ್ವ ಮತ್ತು ಗುಲ್ಜಾರ್ ಭಾನು, ಮಾಜಿ ಮನಪಾ ಸದಸ್ಯ ಹರೀಶ್ ಸುರತ್ಕಲ್ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷ ಎಸ್. ಎಸ್ ಪ್ರಕಾಶನ್, ಕಂದಾಯ ಇಲಾಖಾ ಸಹಾಯಕ ಅಯುಕ್ತ ಡಾ. ಅಶೋಕ್ ಮನಪಾ ಪ್ರಭಾರ ಅಯುಕ್ತ ಗೋಕುಲ್ ದಾಸ್ ನಾಯಕ್, ಮೂಡಾ ಅಯುಕ್ತ ಮಹಮ್ಮದ್ ನಝೀರ್, ತಹಶೀಲ್ದಾರ್ ಮೋಹನ್ ರಾವ್, ಆಹಾರ ಇಲಾಖಾ ಉಪ ನಿರ್ದೇಶಕ ಶರಣಬಸಪ್ಪ, ಪೊಲೀಸ್ ಉಪ ಆಯುಕ್ತ ಡಾ.ಜಗದೀಶ್ ವಿಷ್ಣುವರ್ಧನ, ಎಸಿಪಿ ರವಿಕುಮಾರ್, ಮನಪಾ, ಜಿಲ್ಲ್ಲಾ, ಪಂಚಾಯತ್ ಹಾಗೂ ಇನ್ನಿತರ ಸರಕಾರಿ ಇಲಾಖಾ ಅಭಿಯಂತರರು, ಆರೋಗ್ಯ, ಶಿಕ್ಷಣ ಇಲಾಖಾ ಜಿಲ್ಲಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.