ಕುಂದಾಪುರ: ಮೂರು ವರ್ಷ ಪ್ರಾಯದ ಬಾಲಕನೊಬ್ಬ ಕೆರೆಗೆ ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಗುರುವಾರ ಬೆಳಿಗ್ಗೆ ಬಸ್ರೂರು ಮೂರುಕೈ ಸಮೀಪ ನಡೆದಿದೆ.
ದುರಂತ ಸಾವನ್ನಪ್ಪಿದ ಬಾಲಕನನ್ನು ಮೂರುಕೈ ಸಮೀಪದ ವೆಂಕಟೇಶ ದೇವಾಡಿಗ ಎಂಬುವರ ಪುತ್ರ ಅಭಿಲಾಷ್ (3) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಬುಧವಾರ ಬಾಲಕನ ತಮ್ಮನ ನಾಮಕರಣ ಕಾರ್ಯಕ್ರಮವಿದ್ದು, ಈ ಸಂದರ್ಬ ಮನೆಗೆ ಬಂದಿದ್ದ ನೆಂಟರಿಷ್ಟರ ಹಾಗೂ ನೆರೆಕರೆಯ ಮಕ್ಕಳೊಂದಿಗೆ ಗುರುವಾರ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಗೆ ಆಟವಾಡುತ್ತಿದ್ದರೆನ್ನಲಾಗಿದೆ. ಆದರೆ ಹನ್ನೆರಡು ಗಂಟೆಯಾದರೂ ಬಾಲಕ ಅಭಿಲಾಷ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಹುಡುಕಾಟ ಆರಂಭಿಸಲಾಗಿದ್ದು, ಮನೆ ಸಮೀಪದ ಕೆರೆಯೊಂದರಲ್ಲಿ ಬಾಲಕನ ದೇಹ ಪತ್ತೆಯಾಗಿದ್ದು, ತಕ್ಷಣ ಸ್ಥಳೀಯರ ನೆರವಿನೊಂದಿಗೆ ಕುಂದಾಪುರದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಷ್ಟೊತ್ತಿಗಾಗಲೇ ಬಾಲಕ ಮೃತಪಟ್ಟಿರುವುದನ್ನು ವೈದ್ಯರು ದೃಢ ಪಡಿಸಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.