ನವದೆಹಲಿ,ಡಿ.19 : ‘ಆರ್.ಎಸ್.ಎಸ್’ ನ ಘರ್ ವಾಪಸಿ ಬಗ್ಗೆ ದೆಹಲಿಯ ಪ್ರಧಾನ ಬಿಷಪ್ ಆಗಿರುವ ಆರ್ಕ್ ಬಿಷಪ್ ಅನಿಲ್ ಚೌಟೋ ಪ್ರತಿಕ್ರಿಯಿಸಿದ್ದು ಉತ್ತರ ಪ್ರದೇಶದಲ್ಲಿ ನಡೆದಿರುವ ಮಾತೃಧರ್ಮಕ್ಕೆ ವಾಪಸ್ಸಾಗುವ ಕಾರ್ಯಕ್ರಮ ಶಾಂತಿ, ಸೌಹಾರ್ದತೆಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮತಾಂತರ ನಿಷೇಧ ಕಾಯ್ದೆಗೆ ಕ್ರಿಶ್ಚಿಯನ್ ಸಮುದಾಯ ವಿರುದ್ಧವಾಗಿದೆ ಎಂದು ಬಿಷಪ್ ತಿಳಿಸಿದ್ದಾರೆ. ಮತಾಂತರ ಎಂಬುದು ಆಯ್ಕೆ ಹಾಗೂ ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆ. ಆದ್ದರಿಂದ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಥವಾ ಮತಾಂತರವನ್ನು ನಿಷೇಧಿಸುವ ಕಾಯ್ದೆ ಅಗತ್ಯವಿಲ್ಲ. ಮತಾಂತರ ನಿಷೇಧ ಕಾಯ್ದೆಯನ್ನು ಕ್ರಿಶ್ಚಿಯನ್ನರು ವಿರೋಧಿಸುತ್ತಾರೆ ಎಂದು ಬಿಷಪ್ ಅನಿಲ್ ಚೌಟೋ ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಆಮಿಷವೊಡ್ಡಿ ಅನ್ಯಧರ್ಮೀಯರನ್ನು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅನಿಲ್ ಚೌಟೋ, ಕ್ರಿಸ್ ಮಸ್ ದಿನವಾದ ಡಿ.25ರಂದು ಕೇಂದ್ರ ಸರ್ಕಾರ ‘ಉತ್ತಮ ಆಡಳಿತ ದಿನ’ ಆಚರಣೆ ಹೇರಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಕ್ರಿಶ್ಚಿಯನ್ ಸಮುದಾಯಕ್ಕೆ ಉಂಟಾಗುತ್ತಿರುವ ಅಸಮಾನತೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿರುವುದಾಗಿ ಇದೇ ವೇಳೆ ಅನಿಲ್ ತಿಳಿಸಿದ್ದಾರೆ.