ಮಂಗಳೂರು, ಡಿ. 19: ಕರಾವಳಿ ಉತ್ಸವ ಪ್ರಯುಕ್ತ ಪಣಂಬೂರು ಬೀಚ್ ನಲ್ಲಿ ಒಂಬತ್ತು ದಿನಗಳ ಕರಾವಳಿ ಬೀಚ್ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಡಿ.24ರಂದು ಉದ್ಘಾಟನೆಗೊಳ್ಳಲಿದೆ. ಉತ್ಸವದಲ್ಲಿ ಯುವತಿಯರಿಗೆ ವಿಶಿಷ್ಟ್ಯ ಪಂದ್ಯಾವಳಿಗಳು , ಮಕ್ಕಳಿಗೆ ಸ್ಕೇಟಿಂಗ್ , ಫಾರ್ ಬೋಟಿಂಗ್, ಬೀಚ್ ವಾಲಿಬಾಲ್ ಇನ್ನಿತರ ಅನೇಕ ಸ್ಪರ್ಧೆಗಳು ಒಂಬತ್ತು ದಿನಗಳ ಕಾಲ ಪಣಂಬೂರು ಬೀಚ್ ನಲ್ಲಿ ನಡೆಯಲಿದೆ ಎಂದು ಕರಾವಳಿ ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ ಯತೀಶ್ ಬೈಕಂಪಾಡಿ ಅವರು ತಿಳಿಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಚ್ ಉತ್ಸವ ಸಂಧರ್ಭದಲ್ಲಿ ಬೀಚ್ ನಲ್ಲಿ ಆಹಾರ ಉತ್ಸವನ್ನು ಅಯೋಜಿಸಲಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಪ್ರದರ್ಶನ ನೀಡಿ ಖ್ಯಾತಿ ಗಳಿಸಿದ “ಟೀಮ್ ಮಂಗಳೂರು” ಇವರಿಂದ ಆಕರ್ಷಕ ಗಾಳಿಪಟಗಳ ಪ್ರದರ್ಶನ ನಡೆಯಲಿದೆ.
ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು “ಕೇರಳಾ ಸಮಾಜಂ ಕಲಾಮಂಡಲಂ” ಇವರಿಂದ ಹಾಗೂ ಗುಜರಾತಿನ ಹೆಸರಾಂತ ತಂಡವೊಂದರಿಂದ ಸಾಂಸ್ಕೃತಿಕ ನೃತ್ಯ ಪದರ್ಶನ ನಡೆಯಲಿದೆ. ಸ್ಥಳೀಯ ಕ್ರಿಕೆಟ್ ತಂಡಗಳಿಂದ ಬೀಚ್ ಕ್ರಿಕೆಟ್ ಪಂದ್ಯಾವಳಿಯನ್ನು ಕೂಡ ಅದೇ ದಿನ ಏರ್ಪಡಿಸಲಾಗಿದೆ. ಡಿಸೆಂಬರ್ 27ರಂದು, ಪುರುಷರು ಮತ್ತು ಮಹಿಳೆಯರ ಬೀಚ್ ವಾಲಿಬಾಲ್ ಸ್ಪರ್ಧೆಯ ಮೊದಲ ಸುತ್ತು ನಡೆಯಲಿದೆ ಎಂದು ಅವರು ತಿಳಿಸಿದರು.
ಡಿಸೆಂಬರ್ 28,ರಂದು ಶಾಲಾ ಮಕ್ಕಳ ಮರಳು ಶಿಲ್ಪ ಸ್ಪರ್ಧೆ, ಪುರುಷರು ಮತ್ತು ಮಹಿಳೆಯರ ಬೀಚ್ ವಾಲಿಬಾಲ್ ಸ್ಪರ್ಧೆಯ ಅಂತಿಮ ಸ್ಫರ್ಧೆ ಹಾಗೂ ಸಾರ್ವಜನಿಕರಿಗಾಗಿ ಸ್ಕೇಟಿಂಗ್. ಬೋಟಿಂಗ್ ನಡೆಯಲಿದೆ. ಜನವರಿ 1ರಂದು ನಡೆಯಲಿರುವ ಕರಾವಳಿ ಉತ್ಸವ 2014-15 ರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಹೆಸರಾಂತ ಚಲನಚಿತ್ರ ಗಾಯಕ ರಾಮದಾಸ್, ನಿತಿನ್ ಆಚಾರ್ಯ ಮತ್ತು ಮಂಗಳೂರಿನ ಇತರ ಖ್ಯಾತ ಗಾಯಕರು ತಮ್ಮ ಸುಮಧುರ ಸಂಗೀತದ ಮೂಲಕ ಕಲಾರಸಿಕರ ಮನರಂಜಿಸಲಿದ್ದಾರೆ ಎಂದು ಯತೀಶ್ ಬೈಕಂಪಾಡಿ ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಅಶೋಕ್ ಡಿ.ಆರ್ ಹಾಗೂ ಮಂಗಳೂರು ಬೀಚ್ ಉತ್ಸವ ಸಮಿತಿಯ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.