ಮಂಗಳೂರು:: ಪಾಂಡೇಶ್ವರ ಬಳಿಯಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಗಳ ಸಮುಚ್ಚಯ ಕಟ್ಟಡ (ವೌಲಾನಾ ಆಝಾದ್ ಅಲ್ಪಸಂಖ್ಯಾತರ ಭವನ) ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಖಾಸಗಿ ಶಾಲೆಯ ವಿದ್ಯಾರ್ಥಿಗಳು, ಬಿಜೆಪಿ ಕಾರ್ಪೊರೇಟರ್ಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಧಿಕ್ಕಾರ, ಪ್ರತಿಭಟನೆಯ ನಡುವೆಯೇ ಪೊಲೀಸ್ ಬಂದೋಬಸ್ತ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸವನ್ನು ನೆರವೇರಿಸಿದ ಘಟನೆ ಶನಿವಾರ ನಡೆಯಿತು.
ಇದೇ ಸಂದರ್ಭ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದಿಂದಲೂ ಈ ಜಾಗದಲ್ಲಿ ಪ್ರಸ್ತಾವಿತ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ. ಅತ್ತಾವರ ಗ್ರಾಮದ ಸರ್ವೇ ನಂ. 103/1ಬಿಯಲ್ಲಿನ 16 ಸೆಂಟ್ಸ್ ಸರಕಾರಿ ಜಮೀನಿನಲ್ಲಿ ನಿರ್ಮಿಸಲುದ್ದೇಶಿಸಿರುವ ಈ ಭವನಕ್ಕೆ ಶನಿವಾರ ಆಯೋಜಿಸಿದ್ದ ಶಿಲಾನ್ಯಾಸವನ್ನು ವಿರೋಧಿಸಿ ಬೆಳಗ್ಗೆ 8:30ರ ಸುಮಾರಿಗೆ ಸ್ಥಳದಲ್ಲಿ ಸಮೀಪದ ಕೇರಳ ಸಮಾಜಂ ಶಾಲಾ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರೊಂದಿಗೆ ಜಮಾಯಿಸಿ, ‘ನಮಗೆ ಆಟದ ಮೈದಾನ ಬೇಕು’ ಎಂದು ಪ್ರತಿಭಟನೆ ಆರಂಭಿಸಿದ್ದರು.
ಸ್ಥಳಕ್ಕೆ ಪ್ರಥಮವಾಗಿ ಆಗಮಿಸಿದ್ದ ಶಾಸಕ ಜೆ.ಆರ್.ಲೋಬೋ ವಿದ್ಯಾರ್ಥಿಗಳನ್ನು ಮನವೊಲಿಸಲು ಪ್ರಯತ್ನಿಸಿದರು. ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಆಗಮಿಸಿದಾಗ ಸ್ಥಳೀಯ ಕಾರ್ಪೊರೇಟರ್ ದಿವಾಕರ್ ಮಾತನಾಡಿ, ಏಕಾಏಕಿಯಾಗಿ ನಿನ್ನೆ ರಾತ್ರಿ ವೇಳೆಗೆ ಈ ಜಾಗದಲ್ಲಿ ಅಲ್ಪಸಂಖ್ಯಾತರ ಭವನ ನಿರ್ಮಿಸಲು ನಿರ್ಧರಿಸಲಾಗಿದೆ. ಇದು ಕಂದಾಯ ಇಲಾಖೆಯ ವಸತಿ ಗೃಹಕ್ಕೆ ಮೀಸಲಿಟ್ಟ ಜಾಗವಾಗಿದ್ದು, ಸಾರ್ವಜನಿಕರು ಇದನ್ನು ಆಟದ ಮೈದಾನವಾಗಿ ಉಪಯೋಗಿಸುತ್ತಿದ್ದಾರೆ. ಈ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡಬೇಕೆಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಅಷ್ಟು ಹೊತ್ತಿಗೆ ಸ್ಥಳಕ್ಕಾಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರು ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ ಹಾಗೂ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಜೊತೆಯಾಗಿ ಪೊಲೀಸ್ ಬಂದೋಬಸ್ತ್ನಲ್ಲಿ ಗುದ್ದಲಿ ಪೂಜೆ ನೆರವೇರಿಸಿ ತೆರಳಿದರು.
ಆದರೆ ಅಷ್ಟು ಹೊತ್ತಿಗಾಗಲೇ ಬಿಜೆಪಿಯ ಕಾರ್ಪೊರೇಟರ್ಗಳಾದ ರೂಪಕಲಾ ಡಿ. ಬಂಗೇರ, ಸುಧೀರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಹಾಗೂ ಬಜರಂಗದಳ ಶರಣ್ ಪಂಪವೆಲ್ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.
ಸ್ಥಳದಲ್ಲಿದ್ದ ಬಿಗುವಿನ ಪರಿಸ್ಥಿತಿ ಏರ್ಪಟ್ಟ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳಾದ ಡಿಸಿಪಿ ಡಾ. ಜಗದೀಶ್, ಎಸಿಪಿ ಪವನ್ ನೆಜ್ಜೂರು ಹಾಗೂ ಇತರ ಅಧಿಕಾರಿಗಳು ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರು. ಪೊಲೀಸ್ ಆಯುಕ್ತ ಆರ್.ಹಿತೇಂದ್ರರೂ ಆಗಮಿಸಿದ್ದರು.
ಶಾಲಾ ವಿದ್ಯಾರ್ಥಿಗಳು ಬ್ಯಾಟ್ಬಾಲ್ ಹಿಡಿದು ಮೈದಾನದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಶಾಲಾ ಕವಾಯತನ್ನೂ ನಿರ್ವಹಿಸಿದರು. ಬಳಿಕ ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ಅಲ್ಲಿ ನೆರೆದಿದ್ದ ಸಂಘಟನೆಗಳ ಕಾರ್ಯಕರ್ತರನ್ನು ತೆರವುಗೊಳಿಸಿ, ಮಕ್ಕಳನ್ನು ತರಗತಿಗೆ ಕಳುಹಿಸಲಾಯಿತು.
ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಸಾಬೀರ್ ಅಹ್ಮದ್ ಮುಲ್ಲಾ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.