ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಡಿ.14: ಅಖಿಲ ಭಾರತ ತುಳು ಒಕ್ಕೂಟ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ಡಿ. 12ರಿಂದ 14ರವರೆಗೆ ಹಮ್ಮಿಕೊಂಡಿರುವ “ವಿಶ್ವ ತುಳುವೆರೆ ಪರ್ಬದ” ಎರಡನೇ ದಿನವಾದ ಶನಿವಾರ ವಿವಿಧ ಕಾರ್ಯಕ್ರಮಗಳು ಜರಗಿದವು.
ಬೆಳಿಗ್ಗೆ ತುಳುವೆರೆ ಐಸಿರಿ ಕಾರ್ಯಕ್ರಮ, ಮಧ್ಯಾಹ್ನ ಬಲೆ ತೆಲಿಪಾಲೆ – ಕುಸಾಲ್ ಕುಸೇಲ್ ಕಾರ್ಯಕ್ರಮ, ಸಂಜೆ ಕಾವ್ಯ – ಗಾನ -ಕುಂಚ-ನಲಿಕೆ ಹಾಗೂ ಸಂಜೆ ಆರು ಗಂಟೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ.ಹರ್ಷೇಂದ್ರ ಕುಮಾರ್, ಕರ್ನಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಂ ಭಟ್ ಸೇರಿದಂತೆ ಹಲವು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಕೂಟ ಕಲ – ತಮ್ಮನ ಬಲ್ಮನ ಕಾರ್ಯಕ್ರಮ, ಇದೇ ಸಂದರ್ಭದಲ್ಲಿ ಇನ್ನೊಂದು ವೇದಿಕೆಯಲ್ಲಿ ತುಳು ರಂಗ್ – ರಂಗಿತ ಎಂಬ ಮಹಾರಾಷ್ಟ್ರ ತುಳುವರ ಸಾಂಸ್ಕೃತಿಕ ವೈವಿಧ್ಯ ಹಾಗೂ ತುಳು ಯಕ್ಷಗಾನ ವೈಭವ ಜರಗಿತು.
ಇದೇ ಸಂದರ್ಭದಲ್ಲಿ ಆಟದ ಮೈದಾನದಲ್ಲಿ ಶ್ರೀ ವಿಜಯನಾಥ ವಿಠಲ ಶೆಟ್ಟಿಯವರ ನೇತ್ರತ್ವದಲ್ಲಿ ಅಯೋಜಿಸಲಾದ ಭೂತನಾಥೇಶ್ವರ ಕ್ರೀಡೋತ್ಸವದಲ್ಲಿ ತುಳುನಾಡ ಕಬಡ್ಡಿ ಪಂದ್ಯಾಟ ಹಾಗೂ ವಿವಿಧ ಆಟೋಟ ಸ್ಫರ್ಧೇಗಳು ಜರಗಿದವು.
ತುಳುವಿಗೆ ಸಂಬಂಧಿಸಿದ ವೈವಿಧ್ಯ ಮಯ ಕಾರ್ಯಕ್ರಮಗಳ ಜತೆಯಲ್ಲೇ ತಿಂಡಿ ತಿನಿಸುಗಳ ವೈವಿಧ್ಯ, ಮನೋರಂಜನ ತಾಣ, ಸಾಂಸ್ಕೃತಿಕ ವೈಭವವೂ ವಿಶ್ವ ತುಳು ಪರ್ಬದ ವಿಶೇಷ ಆಕರ್ಷಣೆಯಾಗಿತ್ತು. ಇದೇ ವೇಳೆ ತುಳು ಪರ್ಬ ವೇದಿಕೆಯ ಪಕ್ಕದಲ್ಲಿರುವ ನೇತ್ರಾವತಿ ನದಿಯಲ್ಲಿ ದೋಣಿ ವಿಹಾರ ಬಯಸುವವರಿಗೆ ‘ಕಡಪುದ ಓಡ’ದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕಾರ್ಯಕ್ರಮದುದ್ದಕ್ಕೂ ತುಳುನಾಡಿನ ಪಾರಂಪರಿಕ ಹುಲಿ ವೇಷಗಳ ನರ್ತನ ಕಾರ್ಯಕ್ರಮ ವಿಶೇಷ ಮೆರುಗು ನೀಡಿತು. ‘ಬೊಳ್ಳಿ ಬಂಗಾರ್ ಅಣಿ’ (ಭೂತಾರಾಧನೆಯಲ್ಲಿ ಉಪಯೋಗಿ ಸುವ ವಸ್ತು) ಪ್ರದರ್ಶನ ಮತ್ತಿತರ ಹಲವಾರು ವಿಶೇಷತೆಗಳು ಗಮನ ಸೆಳೆಯಿತು.
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್