ವಿಶ್ವ ತುಳುವೆರೆ ಪರ್ಬ – 2014 ಅನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಕ್ಷೇತ್ರ ತಿರುಪತಿಯ ಪ್ರಧಾನ ಅರ್ಚಕ ಶ್ರೀ ರಮಣ ದೀಕ್ಷಿತ್ ಅವರು ಉದ್ಘಾಟಿಸಿದರು.
ಮಂಗಳೂರು,ಡಿ.12 : ತುಳುನಾಡಿನ ಜನತೆ ಎಲ್ಲೆ ಹೋಗಿ, ಎಲ್ಲೆ ಇರಿ, ಹೇಗೆ ಇರಿ, ಆದರೆ ನಮ್ಮ ತುಳುನಾಡಿನ ಕಲೆ, ಸಂಸ್ಕೃತಿ ಮರೆಯಬೇಡಿ. ಜೊತೆಗೆ ಸತ್ಯ, ಧರ್ಮ, ನ್ಯಾಯ ಬಿಡಬೇಡಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ವಿಶ್ವ ತುಳುವೆರೆ ಪರ್ಬದ ಗೌರವಾಧ್ಯಕ್ಷರಾದ ಪದ್ಮಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡ್ಡೆ ಅವರು ಕರೆ ನೀಡಿದರು.
ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿ ಹಬ್ಬದ ಪ್ರಯುಕ್ತ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸಹಭಾಗಿತ್ವದೊಂದಿಗೆ ನಗರದ ಹೊರವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜಿನಲ್ಲಿ ಇಂದಿನಿಂದ ಡಿ.14ರವರೆಗೆ ಮೂರು ದಿನಗಳ ಕಾಲ ಅಯೋಜಿಸಲಾಗಿರುವ “ವಿಶ್ವ ತುಳುವೆರೆ ಪರ್ಬ” – 2014ರ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಭಾಷೆ ತುಳು, ನಮ್ಮ ಸಂಸ್ಕೃತಿ ತುಳು, ನಮ್ಮ ಪರಂಪರೆ ತುಳು. ಒಟ್ಟಿನಲ್ಲಿ ಹೇಳಬೇಕೆಂದರೆ ನಾವು ತುಳುವರು ಎಂದು ಹೇಳಲು ನಮಗೆ ಅಪಾರ ಹೆಮ್ಮೆಯಾಗುತ್ತದೆ ಎಂದರು.
ಶಾಂತಿ ಸೌಹರ್ಧತೆಗೆ ಹೆಸರಾಗಿರುವ ನಮ್ಮ ತುಳುನಾಡಿನ ಜನರು ದೇಶವಿದೇಶಗಳಲ್ಲಿ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಇಂದಿನ ಯುವಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹೊರ ಬಂದು ನಮ್ಮ ತುಳು ನಾಡಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ನಾವು ತುಳುವೆರ್ ಎಂದು ಹೆಮ್ಮೆಯಿಂದ ಹೇಳುವ ಮೂಲಕ ನಮ್ಮ ಸಂಸ್ಕೃತಿಯನ್ನು ಗೌರವಿಸಬೇಕು ಎಂದು ಹೇಳಿದರು.
ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ತುಳುನಾಡು, ತುಳುನಾಡಿನ ಜನತೆ ತಮ್ಮ ಸಾಧನೆಯಿಂದ ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ. ಉದ್ಯಮ, ವ್ಯವಹಾರ, ಶಿಕ್ಷಣ, ಬ್ಯಾಂಕಿಂಗ್, ಹೋಟೇಲ್ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದವರಿದ್ದಾರೆ. ಮಧ್ವಾಚಾರ್ಯರಿಂದ ಹಿಡಿದು ಸಾಧನೆ ಮಾಡಿದ ಆನೇಕ ಮಹನೀಯರು ಈ ಮಣ್ಣಿನವರು. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಅತ್ಯಂತ ವೇಗವಾಗಿ ನಮ್ಮ ಜಿಲ್ಲೆ ಅದರಲ್ಲೂ ಮಂಗಳೂರು ಬೆಳೆಯುತ್ತಿದೆ. ತುಳುವರಲ್ಲಿರುವ ನಾಯಕತ್ವ ಗುಣ, ಸಾಧನಾಶೀಲತೆಯಿಂದ ತುಳುವರು ವಿಶ್ವವ್ಯಾಪಿಯಾಗಿ ಗುರುತಿಸಿಕೊಂಡಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಒಂದೊಮ್ಮೆ ತುಳು ಮಾತನಾಡುವುದೇ ಅವಮಾನ ಎಂದಾಗಿತ್ತು, ಆದರೆ ಈಗ ಕಾಲ ಬದಲಾಗಿದೆ ಈಗ ತುಳು ಭಾಷೆಯಲ್ಲಿ ಮಾತನಾಡುವುದೇ ಹೆಮ್ಮೆ ಎಂಬ ಮನೋಭಾವ ನಮ್ಮ ಜನರಲ್ಲಿ ಬೆಳೆದಿದೆ. ಕೋಮು ಸೌಹಾರ್ದತೆಗೆ ಹೆಸರಾದ ನಮ್ಮ ಜಿಲ್ಲೆಯಲ್ಲಿ ಇತ್ತೀಚಿಗಿನ ಕೆಲ ದಿನಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಪರಸ್ಪರರಲ್ಲಿ ಅಪನಂಬಿಕೆ, ಬೇಧ, ಸಮಸ್ಯೆ, ಸಂಶಯಗಳು ಬೆಳೆದಾಗ ಅದನ್ನು ಕುಳಿತು ಮಾತನಾಡಿ ಬಗೆಹರಿಸಬೇಕು. ಸೌಹಾರ್ದತೆಯಿಂದ ಮುನ್ನಡೆಯಬೇಕೆಂದರು.
ಹಿರಿಮೆಯ ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರುತ್ತದೆ, ಇದರಲ್ಲಿ ಯಾವುದೇ ಸಂಶಯವಿಲ್ಲ. ಸೇರಿಯೇ ಸೇರುತ್ತದೆ. ತುಳು ಭಾಷೆ ನಾಶವಾಗುವುದಿಲ್ಲ, ನಾಶವಾಗಲು ಸಾಧ್ಯವಿಲ್ಲ. ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಲ್ಲ. ಈ ತಾಂತ್ರಿಕ ಸಮಸ್ಯೆಯನ್ನು ನಿವಾರಿಸುವ ಕೆಲಸವಾಗುತ್ತಿದೆ. ಈಗಾಗಲೇ ಕೇಂದ್ರದಿಂದ ಭರವಸೆ ದೊರೆತಿದೆ, ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ಒಮ್ಮೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಗೊಂಡರೆ ತುಳು ಭಾಷೆಗೆ ರಾಜಮುದ್ರೆ ದೊರೆಯುತ್ತದೆ ಎಂದು ಹೆಗ್ಗಡೆ ಹೇಳಿದರು.
ಶ್ರೀ ತಿರುವತಿ ವೆಂಕಟರಮಣ ದೇವಸ್ಥಾನದ ಪ್ರಧಾನ ಆರ್ಚಕರಾದ ಶ್ರೀ ರಮಣ ದೀಕ್ಷಿತ್ ಅವರು “ವಿಶ್ವ ತುಳು ಪರ್ಬ” ವನ್ನು ಉದ್ಘಾಟಿಸಿ, ಆರ್ಶಿವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿ, ಶಾಸಕ ಬಿ.ಎ.ಮೊಯ್ದಿನ್ ಬಾವ, ದ.ಕ.ಜಿ.ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮಂಗಳೂರು ಮೇಯರ್ ಮಹಾಬಲ ಮಾರ್ಲ, ಹೇಮಾವತಿ ಹೆಗ್ಗಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕೇರಳ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಐ.ಸುಬ್ಬಯ್ಯ ರೈ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಮುಂಬೈ ಬಂಟ್ಸ್ ಅಸೋಸಿಯೇಶನ್ನ ಅಧ್ಯಕ್ಷ ಶ್ಯಾಮ ಎನ್. ಶೆಟ್ಟಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ತುಳು ಒಕ್ಕೂಟದ ಹಾಗೂ ತುಳುವೆರೆ ಪರ್ಬದ ಪದಾಧಿ ಕಾರಿಗಳಾದ ದಿವಾಕರ ಶೆಟ್ಟಿ ಸಾಂಗ್ಲಿ, ಅಡ್ಯಾರ್ಗುತ್ತು ಮಹಾಬಲ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಎ.ಸಿ.ಭಂಡಾರಿ, ತೋನ್ಸೆ ಜಯಕೃಷ್ಣ ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ, ಎಂ.ಬಿ.ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಸ್ವಾಗತಿಸಿದರು. ಗೌರವಾಧ್ಯಕ್ಷ ದಾಮೋದರ ನಿಸರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶ್ವ ತುಳುವೆರೆ ಪರ್ಬದ ಸಂಯೋಜಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ಒಕ್ಕೂಟದ ಬೆಳ್ಳಿಹಬ್ಬದ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ರತ್ನಕುಮಾರ್ ಎಂ. ವಂದಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಮತ್ತು ಪ್ರಿಯಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಡಾ.ವೀರೇಂದ್ರ ಹೆಗ್ಗಡೆಯವರ ಚಿತ್ರವನ್ನು ಕಲಾವಿದ ಚಿತ್ರ ಮಿತ್ರ ಪ್ರಶಾಂತ್ ಶೆಟ್ಟಿ ವೇದಿಕೆಯಲ್ಲಿ ರಚಿಸಿ ಗಮನ ಸೆಳೆದರು. / ವಿವಿಧ ಲೇಖಕ-ಲೇಖಕಿಯರು ರಚಿಸಿದ ಕೃತಿಗಳು, ತುಳು ಲಿಪಿ ಚಾರ್ಟ್, ತುಳು ಪಂಚಾಂಗವನ್ನು ಬಿಡುಗಡೆಗೊಳಿಸಲಾಯಿತು. / ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ಮೆರವಣಿಗೆ ನಡೆಯಿತು. /ಸಹ್ಯಾದ್ರಿ ತುಳುವೆರೆ ಐಸಿರಿಯನ್ನು ಡಾ.ಎನ್.ವಿನಯ ಹೆಗ್ಡೆ, ಪುಸ್ತಕ ಭಂಡಾರವನ್ನು ಏರ್ಯ ಲಕ್ಷ್ಮಿನಾರಾಯಣ ಆಳ್ವ, ಅಡ್ಯಾರ್ ಹಸನಬ್ಬ ನೆನಪಿನ ದೋಣಿವಿಹಾರವನ್ನು ಡಾ.ಯಶೋವರ್ಮ, ಅಡುಗೆ ಕೋಣೆ ಯನ್ನು ಮೈನಾ ಸದಾನಂದ ಶೆಟ್ಟಿ ಮತ್ತು ಉರ್ಮಿಳಾ ರಮೇಶ್, ಪ್ರದರ್ಶ ನಾಲಯವನ್ನು ಉಡುಪಿ ಜಿಲ್ಲಾಧಿಕಾರಿ ವಿಶಾಲ್ ಆರ್. ಹಾಗೂ ಛಾಯಾ ಚಿತ್ರ ಮಂಟಪವನ್ನು ಎ.ಈಶ್ವರಯ್ಯ ಉದ್ಘಾಟಿಸಿದರು. /ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ರಾರಾಜಿಸುತ್ತಿದೆ ಸ್ವಾಗತ ಕಮಾನು : ಎಲ್ಲೆಲ್ಲೂ ತಳಿರು ತೋರಣ,ವಿದ್ಯುದ್ದೀಪಾಲಂಕಾರಗಳ ಆಕರ್ಷಣೆ
ಮುಖ್ಯ ದ್ವಾರದಲ್ಲಿ ಬೃಹದಾಕಾರದ ಯಕ್ವಕಿರೀಟ ಹಾಕಲಾಗಿದ್ದು, ಅದರ ಎಡಬದಿಯಲ್ಲಿ ಕೊಡಲಿ ಸಹಿತನಾದ ಪರಶುರಾಮ, ಕರಾವಳಿಯ ಕಂಬಳ ಕಟೌಟ್ ರಾರಾಜಿಸುತ್ತಿದೆ. ಪ್ರವೇಶದ್ವಾರದ ಮುಂದೆ ಸಾಗುತ್ತಿದ್ದಂತೆ ಬಣ್ಣಬಣ್ಣದ ಆಕಾಶಬುಟ್ಟಿಗಳು ರಾರಾಜಿಸುತ್ತಿದೆ. ಸಮ್ಮೇಳನ ಕಾರ್ಯಕ್ರಮ ನಡೆಯುವ ಬೀದಿಯುದ್ದಕ್ಕೂ ತುಳುನಾಡಿನ ಸಂಸ್ಕೃತಿ, ಪರಂಪರೆ, ಜಾನಪದ ನೃತ್ಯ ವೈವಿಧ್ಯತೆಯನ್ನು ಸಾರಿ ಹೇಳುವ ಭೂತರಾಧನೆ, ಕಂಬಳ, ಬಲೀಂದ್ರ, ಕೃಷಿ ವೈಭವ, ಕೋಳಿ ಅಂಕ, ಯಕ್ಷಗಾನ ಸೇರಿದಂತೆ ನಾನಾ ಆಕೃತಿಗಳನ್ನು ಜೋಡಿಸಲಾಗಿದೆ. ಪ್ರಧಾನ ವೇದಿಕೆಯಿಂದ ವಸ್ತುಪ್ರದರ್ಶನದ ವೇದಿಕೆಗೆ ಹೋಗುವ ಹಾದಿಯಲ್ಲಿ ಯಕ್ಷಗಾನ ಹಾಗೂ ಯಕ್ಷಗಾನ ನಾನಾ ವೇಷಭೂಷಣಗಳ ಕಟೌಟ್ಗಳನ್ನು ಹಾಕಲಾಗಿದೆ. ಹುರಿಹಗ್ಗ ಹಾಗೂ ಬೈಹುಲ್ಲಿನಿಂದ ನಿರ್ಮಿಸಿದ ಪರಶುರಾಮ, ಕೋಟಿ ಚೆನ್ನಯ ಆಕರ್ಷಣೀಯವಾಗಿದೆ. ಪ್ರಧಾನ ವೇದಿಕೆಯನ್ನು ಸುವರ್ಣ ಆರ್ಟ್ಸ್ ಮೂಲ್ಕಿ ಇದರ ಚಂದ್ರಶೇಖರ ಸುವರ್ಣರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿದ್ದು, ಇದಕ್ಕೆ ಗುತ್ತಿನ ಮನೆಯ ಕಲ್ಪನೆಯನ್ನು ನೀಡಲಾಗಿದೆ. ತುಳುನಾಡಿನ ಜಾನಪದ ವೈವಿಧ್ಯತೆಯನ್ನು ಸಾರಿ ಹೇಳುವ ಚಿತ್ರಣ..
ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಬಣ್ಣಬಣ್ಣದ ಪತಾಕೆಗಳು, ಆಕಾಶ ಬುಟ್ಟಿಗಳು, ವಿದ್ಯುದ್ದೀಪಾಲಂಕಾರ, ತಳಿರು ತೋರಣ, ಬ್ಯಾನರ್, ಕಟೌಟ್, ಸ್ವಾಗತ ಕಮಾನುಗಳು ರಾರಾಜಿಸುತ್ತಿದೆ.
ವಸ್ತುಪ್ರದರ್ಶನ ಮಳಿಗೆಗಳು: ಸುಮಾರು 150ಕ್ಕೂ ಅಧಿಕ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳು. ಆಹಾರ ಮಾರಾಟ ಮಳಿಗೆಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಇಲ್ಲೂ 50ಕ್ಕೂ ಅಧಿಕ ಮಳಿಗೆಗಳಿವೆ.
ಬೃಹತ್ ಅನ್ನಛತ್ರ: 3 ದಿನದ ಸಮ್ಮೇಳನದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಆಗಮಿಸುವ ಎಲ್ಲರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಊಟದ ತಯಾರಿ ಜವಾಬ್ದಾರಿಯನ್ನು ಧನಕೀರ್ತಿ ಬಲಿಪರ ನೇತೃತ್ವದಲ್ಲಿ ಮಾಡಲಾಗಿದ್ದು, ಏಕಕಾಲಕ್ಕೆ 10ರಿಂದ 15ಸಾವಿರ ಮಂದಿ ಊಟ ಮಾಡುವಷ್ಟು ಅನ್ನಛತ್ರ ನಿರ್ಮಾಣ ಮಾಡಲಾಗಿದೆ. ಇದರ ಉಗ್ರಾಣ ಮುಹೂರ್ತ ಮತ್ತು ಪಾಕಶಾಲೆ ಪೂಜಾ ವಿಧಿವಿಧಾನ ಗುರುವಾರ ಬೆಳಗ್ಗೆ ನಡೆಯಿತು.
ಕ್ರೀಡಾಕೂಟಕ್ಕೆ ತಯಾರಿ: 13,14ರಂದು ನಡೆಯುವ ಭೂತನಾಥೇಶ್ವರ ಕ್ರೀಡೋತ್ಸವಕ್ಕೆ ಬೃಹತ್ ಕ್ರೀಡಾಂಗಣ, ಹೊನಲು ಬೆಳಕಿನ ವ್ಯವಸ್ಥೆ, ವೇದಿಕೆ ಮಾಡಲಾಗಿದೆ. ಕ್ರೀಡಾಂಗಣದ ಸುತ್ತ ತೋರಣ ಕಟ್ಟಲಾಗಿದೆ. ಕ್ರೀಡಾಂಗಣ ಒಂದು ಭಾಗದಲ್ಲಿ ವಿಜಯಾ ಬ್ಯಾಂಕ್ ಪ್ರಾಯೋಜಿತ ‘ಕಬಡ್ಡಿ ಪಂದ್ಯಾಟ’ ನಡೆಯುತ್ತಿದೆ. ಈ ಪಂದ್ಯಗಳ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 16 ತಂಡಗಳು ಈ ಪಂದ್ಯದಲ್ಲಿ ಭಾಗವಹಿಸುತ್ತಿದೆ.
ಅರಣ್ಯ ಕಲ್ಪನೆ: ಅರಣ್ಯ ಇಲಾಖೆಯಿಂದ ಮೂಡಿಬಂದ ‘ಅರಣ್ಯ ಕಲ್ಪನೆ’ ಸಮ್ಮೇಳನದ ಆಕರ್ಷಣೆಗಾಗಿ ಬಿದಿರುಗಳಿಂದ ನಿರ್ಮಿಸಿದ ಸ್ವಾಗತ ಗೋಪುರ, ಚಪ್ಪರ, ಅದರ ಒಳಹೋದಂತೆ ಗುಹೆ, ನೀರಿನ ಝರಿ, ಮರದ ಸೇತುವೆ, ಮನೆ, ನಮ್ಮೂರ ಶಾಲೆಗಳು ಉತ್ತಮವಾಗಿದೆ. ಚಾಪೆ ಹುಲ್ಲು ಹಾಸಲಾಗಿದ್ದು ಎಲ್ಲೆಡೆ ಹಚ್ಚ ಹಸಿರು ಕಾಣುತ್ತಿದೆ.
ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ: ಕಾರ್ಯಕ್ರಮದ ಅನತಿ ದೂರದಲ್ಲೇ ಗಣ್ಯರಿಗೆ, ಅತಿಥಿಗಳು ಸೇರಿದಂತೆ ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಕಡೆ ನಾನಾ ತಂಡಗಳ ನೇಮಕ ಮಾಡಲಾಗಿದೆ.
ಬಹುತೇಕ ಲಾಡ್ಜ್ ಬುಕ್ಕಿಂಗ್
ವಿಶ್ವ ಸಮ್ಮೇಳನಕ್ಕೆ ದೇಶ ಹಾಗೂ ವಿದೇಶದಿಂದ ಅನೇಕ ತುಳು ಅಭಿಮಾನಿಗಳು, ಸಂಘಟನೆಗಳು, ಕಲಾ ತಂಡಗಳು ಆಗಮಿಸಲಿದ್ದು, ನಗರದ ಬಹುತೇಕ ಹೊಟೇಲ್ ಬುಕ್ಕಿಂಗ್ ಆಗಿದೆ. ಈ ನಿಟ್ಟಿನಲ್ಲಿ ಹೊರರಾಜ್ಯದಿಂದ ಬರುವವರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಸಂಘಟಕರು.