ಮಂಗಳೂರು, ಡಿ.12: ಬೆಳಗಾವಿ ಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಪ್ರಯುಕ್ತ ಕರಾವಳಿ ಉತ್ಸವದ ಉದ್ಘಾಟನೆಯನ್ನು ಡಿ.23ಕ್ಕೆ ಮುಂದೂಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ. ಡಿ.23ರಿಂದ ಜನವರಿ 1ರವರೆಗೆ ಕರಾವಳಿ ಉತ್ಸವ ನಡೆಯಲಿದೆ. ಸಮಾರೋಪ ಸಮಾರಂಭ ಜನವರಿ 1ರಂದು ಪಣಂಬೂರು ಬೀಚ್ನಲ್ಲಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಅದ್ದೂರಿ ಮೆರವಣಿಗೆ: ಕರಾವಳಿ ಉತ್ಸವದ ಉದ್ಘಾಟನೆಯಂದು ಜಿಲ್ಲೆಯ ಸಂಸ್ಕೃತಿ ಮತ್ತು ಕಲೆ ಪ್ರತಿಬಿಂಬಿಸುವ ಅದ್ದೂರಿಯಾದ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಬುಧವಾರ ಮಂಗಳೂರು ತಹಶೀಲ್ದಾರ್ ಕಚೇರಿ ಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಮೂಡುಬಿದಿರೆ ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ.ಮೋಹನ್ ಆಳ್ವ ಮಾತನಾಡಿ ಜಿಲ್ಲೆಯ ಎಲ್ಲಾ ಕಲಾ ಪ್ರಕಾರಗಳ ತಂಡ ಗಳನ್ನು ಹಾಗೂ ವಿವಿಧ ವೇಷಗಳ ತಂಡಗಳನ್ನು ಮೆರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯ ಸಾಂಸ್ಕೃತಿಕ ಲೋಕದ ಶ್ರೀಮಂತಿಕೆಯು ಮೆರವಣಿಗೆಯಲ್ಲಿ ವ್ಯಕ್ತವಾಗಬೇಕು ಎಂದು ಹೇಳಿದರು.
ಡಿ.23ರಂದು ಮಧ್ಯಾಹ್ನ ನೆಹರು ಮೈದಾನದಿಂದ ಮಂಗಳಾ ಕ್ರೀಡಾಂಗಣ ಕರಾವಳಿ ಉತ್ಸವ ವೇದಿಕೆಯವರೆಗೆ ಮೆರವಣಿಗೆ ಸಂಚರಿಸಲಿದ್ದು, ಸುಮಾರು 35-40 ಕಲಾ ತಂಡಗಳು ಭಾಗವಹಿಸಲಿವೆ. ಕಲ್ಲಡ್ಕ ಗೊಂಬೆ, ಕೊಂಬು, ಕಹಳೆ, ಚಂಡೆ, ವಾದ್ಯ, ಆಕರ್ಷಕ ಕೊಡೆ, ದಫ್, ಕೋಲಾಟ, ಪೊಲೀಸ್ ಬ್ಯಾಂಡ್, ಅಗ್ನಿಶಾಮಕ, ಸ್ಕೌಟ್ಸ್ ಮತ್ತು ಗೈಡ್ಸ್, ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ.
ಸಭೆಯ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ ವಹಿಸಿ ಮಾತನಾಡಿ, ಕರಾವಳಿ ಉತ್ಸವ ಮೆರವಣಿಗೆಯಲ್ಲಿ ಜಿಲ್ಲೆಯ ಸಂಸ್ಕೃತಿಯ ಶಕ್ತಿ ಪ್ರದರ್ಶನವಾಗಬೇಕು ಎಂದರು.
ಸಭೆಯಲ್ಲಿ ಬ್ಯಾರಿ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಹನೀಫ್, ಮನಪಾ ಉಪ ಆಯುಕ್ತ ರಾಜು ಮೊಗವೀರ, ತಹಶೀಲ್ದಾರ್ ಮೋಹನರಾವ್, ಮುಡಾ ಆಯುಕ್ತ ಮುಹಮ್ಮದ್ ನಝೀರ್, ಎಸಿಪಿ ಉದಯಕುಮಾರ್ ಉಪಸ್ಥಿತರಿದ್ದರು