ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ., ಕುಂದಾಪುರ ತಾಲೂಕು, ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ (ರಿ), ಗುರುಕುಲ ವಿದ್ಯಾ ಸಂಸ್ಥೆ ವಕ್ವಾಡಿ ಹಾಗೂ ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಡಿ. 23, ಹಾಗೂ 24 ರಂದು ಕೋಟೇಶ್ವರದ ಗುರುಕುಲ ವಿದ್ಯಾ ಸಂಸ್ಥೆ ವಠಾರದಲ್ಲಿ ನಡೆಯಲಿರುವ ಕೃಷಿ ಉತ್ಸವ-೨೦೧೪ರ ಚಪ್ಪರ ಮಹೂರ್ತ ಮತ್ತು ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ದುಗ್ಗೇಗೌಡ, ಧ.ಗ್ರಾ. ಯೋಜನೆ ರಾಜ್ಯದ 26 ಜಿಲ್ಲೆಗಳಲ್ಲಿ ಕಾರ್ಯನಿರತವಾಗಿದ್ದು, ಕುಂದಾಪುರ ತಾಲೂಕಿನಲ್ಲಿ ಗಣನೀಯ ಸಾಧನೆ ಮಾಡಿ, ಮುಂಚೂಣಿಯಲ್ಲಿದೆ. ಕುಂದಾಪುರ ತಾಲೂಕಿನ ಇತಿಹಾಸದಲ್ಲಿ ವೈಶಿಷ್ಟ್ಯಪೂರ್ಣವಾಗಿ ಕೃಷಿ ಉತ್ಸವವನ್ನು ಆಚರಿಸಲು ನಿರ್ಧರಿಸಿದ್ದು, ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೦ರ ಶುಭಶಂಸನೆಯನ್ನು ಈ ಕಾರ್ಯಕ್ರದಲ್ಲಿ ಜೋಡಣೆ ಮಾಡಿಕೊಳ್ಳಲಾಗಿದೆ. ಡಿ.23 ಮತ್ತು 24 ರಂದು ಗುರುಕುಲ ವಿದ್ಯಾಸಂಸ್ಥೆಯ ವಠಾರದಲ್ಲಿ ನಡೆಯುವ ಕೃಷಿ ಉತ್ಸವವನ್ನು ಬೆಳಿಗ್ಗೆ 10 ಕ್ಕೆ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್.ಎಚ್.ಮಂಜುನಾಥ್ ಉದ್ಘಾಟಿಸಲಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ವಿಶೇಷ ಅಹ್ವಾನಿತರಾಗಿ ಭಾಗವಹಿಸಲಿದ್ದು, ಜಾನುವಾರು ತಳಿ ಪ್ರದರ್ಶನವನ್ನು ಶಾಸಕ ಗೋಪಾಲ ಪೂಜಾರಿ ಉದ್ಘಾಟಿಸುವರು. ವಸ್ತು ಪ್ರದರ್ಶನವನ್ನು ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷ ಕೊಂಕೊಡಿ ಪದ್ಮನಾಭ ಭಟ್ ಉದ್ಘಾಟಿಸಲಿದ್ದಾರೆ ಎಂದರು.
ಡಿ.24 ರಂದು 5001ನೇ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಉದ್ಘಾಟನೆ ಹಾಗೂ ಬಿ.ಅಪ್ಪಣ್ಣ ಹೆಗ್ಡೆಯವರ 80 ರ ಶುಭಾಶಂಸನೆ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಶ್ರೀ ರಾಮಕೃಷ್ಣ ಮಠದ ಶ್ರೀ ಸ್ವಾಮಿ ತ್ಯಾಗೇಶ್ವರಾನಂದ ಸಹಾಯಧನ ವಿತರಿಸಿ, ಆಶೀರ್ವಚನ ನೀಡಲಿದ್ದಾರೆ. ಬಿ.ಅಪ್ಪಣ್ಣ ಹೆಗ್ಡೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ಪ್ರೊ.ಬಿ.ಕೆ.ಕೊಣ್ಣೂರು ಯಲ್ಲಟ್ಟಿ ಅವರಿಗೆ ಬಿ.ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪ್ರದಾನಿಸಲಾಗುವುದು ಎಂದರು.
ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಗುರುಕುಲ ಶಿಕ್ಷಣ ಸಂಸ್ಥೆಯ ಜಂಟಿ ಮ್ಯಾನೇಜಿಂಗ್ ಟ್ರಸ್ಟಿಗಳಾದ ಅನುಪಮ ಎಸ್.ಶೆಟ್ಟಿ, ಕೆ.ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ ಮತ್ತು ಧ.ಗ್ರಾ.ಯೋಜನೆಯ ತಾ.ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ಕೃಷಿ ಉತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳು, ಪ್ರಗತಿಬಂಧು ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರುಗಳು ಉಪಸ್ಥಿತರಿದ್ದರು.
ಪತ್ರಕರ್ತ ಯು.ಎಸ್.ಶೆಣೈ ಕಾರ್ಯಕ್ರಮ ನಿರ್ವಹಿಸಿ, ಗುರುಕುಲ ವಿದ್ಯಾಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಪ್ರಭಾಕರ ಶೆಟ್ಟಿ ವಂದಿಸಿದರು.