ವರದಿ : ಸತೀಶ್ ಕಾಪಿಕಾಡ್ / ಚಿತ್ರಗಳು : ಸತೀಶ್ ಕಾಪಿಕಾಡ್ ಹಾಗೂ ಗಣೇಶ್ ಶೆಣೈ
ಮಂಗಳೂರು,ಡಿ.03: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಶಿಸ್ತು ಅಳವಡಿಸಿಕೊಳ್ಳ ಬೇಕು.ಬಾಲ್ಯದಲ್ಲೇ ಉನ್ನತ ತಳಹದಿ ಹೊಂದಿದ್ದರೆ ಮಾತ್ರ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸಾದ್ಯ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ|ಫಾ| ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದರು. ಅವರು ನಗರದ “ಉರ್ವಾ ಪ್ಯಾರಿಶ್ ಶಾಲೆ” (ಸಂತ ಆಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ, ಪೊಂಪ್ಯೆ ಪ್ರೌಡಶಾಲೆ ಹಾಗೂ ಸಂತ ಅಲೋಶಿಯಸ್ ಕನ್ನಡ ಪ್ರಾಥಮಿಕ ಶಾಲೆ) ಯ ಸಹಯೋಗದಲ್ಲಿ ಮಂಗಳವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ಜರಗಿದ “ಸಂಸ್ಥಾದಿನಾ” ಆಚರಣೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರತಿಭೆಗಳಿಗೆ ಬೆಳಕು ಚೆಲ್ಲುವ ಕಾರ್ಯವನ್ನು ಈ ಸಂಸ್ಥೆ ಯಶಸ್ವಿಯಾಗಿ ನಿರ್ವಾಹಿಸುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ವಿಶೇಷ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಮೇಯರ್ ಮಹಾಬಲ ಮಾರ್ಲ ಅವರು ಮಾತನಾಡಿ,ಶಿಕ್ಷಣದ ಜೊತೆಗೆ ಮಕ್ಕಳ ವ್ಯಕ್ತಿತ್ವ ವಿಕಾಸನ ಹಾಗೂ ಮಕ್ಕಳ ಮನೋಭಾವನೆ ಬೆಳೆಸುವ ಮತ್ತು ಮಾನವೀಯ ಮೌಲ್ಯಗಳನ್ನು ಜೋಡಿಸುವ ಕಾರ್ಯ ಈ ವಿದ್ಯಾ ಸಂಸ್ಥೆಯ ಮೂಲಕಆಗುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ದ.ಕ.ಜಿಲ್ಲೆಯ ಹೆಚ್ಚಿನ ವಿದ್ಯಾ ಸಂಸ್ಥೆಗಳು ಬಿಷಪ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯ ಪತದತ್ತ ಸಾಗುತ್ತಿದ್ದು, ಇದೀಗ ಈ ಮೂರು ವಿದ್ಯಾ ಸಂಸ್ಥೆಗಳ ಸಾಧನೆ ಅಪೂರ್ವ. ಇದಕ್ಕಾಗಿ ಈ ಮೂರು ಶಾಲೆಗಳ ಆಡಳಿತ ಮಂಡಳಿಗೂ ಅಭಿನಂದನೆ ಸಲ್ಲಿಸುವುದಾಗಿ ಮೇಯರ್ ಹೇಳಿದರು.
ಸ್ವಚ್ಛ ಮಂಗಳೂರು ಹಾಗೂ ವ್ಯವಸ್ಥಿತ ಆರೋಗ್ಯವಂತ ಮಂಗಳೂರು ನಗರ ಮಾಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕರೆ ನೀಡಿದ ಅವರು, ಮಹಾನಗರ ಪಾಲಿಕೆ ವತಿಯಿಂದ ಸಮಾಜದ ಒಳಿತಿಗೆ ನಡೆಯುವ ಅಭಿವೃದ್ಧಿ ಕಾರ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳು ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಥೋಲಿಕ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ|ಫಾ| ಜೆರಾಲ್ಡ್ ಡಿ’ಸೋಜ ಅವರು ಮಾತನಾಡಿ, ಕಲಿಕೆಯೊಂದಿಗೆ ಮೂಲಭೂತ ಶಿಕ್ಷಣದ ಪ್ರಭೋಧನೆ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ವಿಶೇಷ ಸಾಧನೆ ಮಾಡಿ, ಇದೀಗ ಮೂರು ವಿದ್ಯಾ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ “ಸಂಸ್ಥಾದಿನಾ” ಆಚರಣೆ ಆಚರಿಸುತ್ತಿರುವ ಈ ದಿನ ಸುವರ್ಣಕ್ಷರದಲ್ಲಿ ಬರೆದಿಡಬೇಕಾದ ದಿವಸ ಎಂದು ಕೊಡಾಡಿದರು.
ವಂ| ಫಾ| ಜೀವನ್ ಸಿಕ್ವೇರಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀ ವಾಲ್ಟರ್ ಡಿಮೆಲ್ಲೊ, ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.
ಗೌರವ ಅಥಿತಿಗಳಾಗಿ ಭಾಗವಹಿಸಿದ ಸ್ಥಳೀಯ ಕಾರ್ಪೋರೇಟರ್ ರಾಧಾಕೃಷ್ಣ, ವಂ.ವೆಲೇರಿಯನ್ ಡಿಸೋಜಾ, ಮೊ.ವಂ.ಡೆನಿಸ್ ಮೋರಸ್ ಪ್ರಭು, ವಂ ಆಯಂಡ್ರು ಲೂವಿಸ್,ಶ್ರೀಮತಿ ಡ್ಯಾಫ್ನಿ ಅಂಗರ್, ಸಿ.ಶಾಲಿನಿ ಎಸ್.ಎರ್ ಎ, ಶ್ರೀ ಎಡ್ರಿಯನ್ ದಾಂತಿಸ್, ವಂ ಐವನ್ ಎಂ.ರೊಡ್ರಿಗಸ್, ಶ್ರೀಮತಿ ಸಿಲ್ವಿಯಾ ಲೋಬೋ, ಶ್ರೀ. ಬಿ.ಶ್ರೀನಿವಾಸ ರಾವ್ (ರಾಷ್ಟ್ರಪತಿ ವಿಜೇತರು), ಕುಮಾರಿ ಪ್ಲೋರಿನ್ ಡಿಸೋಜಾ, ಶ್ರೀಮತಿ ಹೈಸಿಂತಾ ಸಲ್ಡಾನ್ಹ, ಉರ್ವಾ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಶ್ರೀ ಹಿಲರಿ ಡಿಸೋಜಾ, ಕಾರ್ಯದರ್ಶಿ ಶ್ರೀಮತಿ ಜೆನಿವಿವ್ ಮಥಾಯಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೂರು ಶಾಲೆಗಳ ಮುಖ್ಯೋಪಾಧ್ಯಾಯರು, ಮುಖ್ಯೋಪಾಧ್ಯಾಯನಿಯರು ಹಾಗೂ ವಿವಿಧ ವಿಭಾಗಗಳ ಶಿಕ್ಷಕರು, ಶಾಲಾ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ವಿಶೇಷ ಸಾಧನೆಗೈದ ಐವರು ನಿವೃತ್ತ ಮುಖ್ಯೋಪಾಧ್ಯರನ್ನು ಬಿಷಪ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು.
ಮೊದಲಿಗೆ ಉರ್ವಾ ದೇವ ಮಂದಿರದಲ್ಲಿ ನಡೆದ ಅಶೀರ್ವಚನದ ನಂತರ ಮಕ್ಕಳು ಮೆರವಣಿಗೆ ಮೂಲಕ ಮಂಗಳಾ ಕ್ರೀಡಾಂಗಣಕ್ಕೆ ಸಾಗಿ ಬಂದರು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ, ವಿಶೇಷ ಶೈಲಿಯ ಸಮೂಹ ನೃತ್ಯ ಹಾಗೂ ಭಾರತ ದರ್ಶನ ಕಾರ್ಯಕ್ರಮ ಜರಗಿತು. ಕೊನೆಯಲ್ಲಿ ಸಂಗೀತಾ ರಸಮಂಜರಿ ಹಾಗೂ “ತೆಲಿಕೆ ಬಾಯಿ ನಿಲಿಕೆ” ಎಂಬ ವಿನೂತನ ಹಾಸ್ಯ ಕಾರ್ಯಕ್ರಮ ನಡೆಯಿತು.
ವಂ| ಫಾ| ವಿಕ್ಟರ್ ಡಿ’ಮೆಲ್ಲೋ ಸ್ವಾಗತಿಸಿದರು. ಸಂತ ಅಲೋಶಿಯಸ್ ಕನ್ನಡ ಪ್ರಾಥಮಿಕ ಶಾಲೆಯ ಎಚ್.ಎಮ್ ಶ್ರೀಮತಿ ಪ್ಲೋರಿನ್ ಪಿರೇರಾ ಶಾಲೆಯ ವರದಿ ವಾಚಿಸಿದರು. ಶ್ರೀಮತಿ ರೋಸ್ ಜೆ.ಡಿ’ಸೋಜ ಹಾಗೂ ಶ್ರೀಮತಿ ಶಾಂತಿ ಲೋಬೋ ಕಾರ್ಯಕ್ರಮ ನಿರೂಪಿಸಿದರು. ಡಾ| ಪ್ರೆಸಿಲ್ಲಾ ಡಿ’ಸೋಜ ವಂದಿಸಿದರು.