ಮಂಗಳೂರು,ಡಿ.03 : ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹಣಕಾಸು ಸಂಸ್ಥೆಗಳ ಕುರಿತ ಸಭೆಯಲ್ಲಿ ಅಗ್ರಿಗೋಲ್ಡ್, ಸಮೃದ್ಧ ಜೀವನ್, ಪಿಎಸಿಎಲ್ ಕಂಪೆನಿಗಳನ್ನು ಮುಚ್ಚುವಂತೆ ಆಗ್ರಹಿಸಿದ್ದ ಡಿವೈಎಫ್ಐ ಸದಸ್ಯರು ನಿನ್ನೆ ನಗರದ ಸಮೃದ್ಧ ಜೀವನ್ ಮತ್ತು ಪಿಎಸಿಎಲ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಈ ಸಂದರ್ಭ ಹಣದ ವ್ಯವಹಾರಲ್ಲಿ ನಿರತವಾಗಿದ್ದ ಸಮೃದ್ಧ ಜೀವನ್ ಕಂಪೆನಿಯ ಎಲ್ಲಾ ಪಿಗ್ಮಿ ವಹಿವಾಟುಗಳನ್ನು ನಿಲ್ಲಿಸುವಂತೆ ಡಿವೈಎಫ್ಐ ಆಗ್ರಹಿಸಿದೆ.
ಮೊನ್ನೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹಣ ಕಾಸು ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸುವಾಗ ಮುನ್ನೆಚ್ಚರಿಕೆ ವಹಿಸುವಂತೆ ಹೇಳಿದ್ದರು ಮತ್ತು ಯಾವುದೇ ರೀತಿಯ ಖಾಸಗಿ ಹಣಕಾಸು ಕಂಪೆನಿಗಳು ಏಜೆಂಟರನ್ನು ನೇಮಿಸಿ, ಅಧಿಕ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಂದ ಪಿಗ್ಮಿ ಮಾದರಿಯಲ್ಲಿ ಹಣ ಸಂಗ್ರಹಿಸುವುದು ಕಾನೂನು ಬಾಹಿರವಾಗಿರುತ್ತದೆ. ಜನರ ಹಣಕ್ಕೆ ಪಂಗನಾಮ ಜಡಿದ ಹಲವಾರು ಸಂಸ್ಥೆಗಳ ಪುರಾಣಗಳು ಬಯಲಾಗುತ್ತಿವೆ. ಸದ್ಯ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಮುಂದೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ವಹಿವಾಟು ಆರಂಭಿಸುವ ಸಂಸ್ಥೆಗಳ ಮೇಲೆ ಮುನ್ನೆಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಇಂತಹ ಹಣಕಾಸು ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸಿ, ಸಮೀಪದ ಬ್ಯಾಂಕುಗಳಲ್ಲಿ ಅಥವಾ ಸಹಕಾರ ಸಂಘಗಳ ಇಲಾಖೆಯಲ್ಲಿ ಅವುಗಳನ್ನು ಪರಿಶೀಲಿಸಬೇಕು ಎಂದು ಅವರು ಮನಪಾ ಅಧಿಕಾರಿಗಳಿಗೆ ಆದೇಶಿಸಿದ್ದರು. ಇಷ್ಟರೊಳಗೆ ಈಗ ವ್ಯವಹಾರ ನಡೆಸುತ್ತಿರುವ ಕಂಪೆನಿಗಳ ಮೇಲೂ ನಿಗಾ ಇರಿಸುವಂತೆ ಮತ್ತು ಅಧಿಕೃತ ದಾಖಲೆಗಳಿಲ್ಲದಿದ್ದಲ್ಲಿ ಅಂಥವುಗಳನ್ನು ಮುಚ್ಚುವಂತೆ ಅವರು ಸಂಬಂಧಟ್ಟ ಅಧಿಕಾರಿಗಳಲ್ಲಿ ಆದೇಶಿಸಿದ್ದರು.’
ಜಿಲ್ಲಾಧಿಕಾರಿ ಜೊತೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಡಿವೈಎಫ್ಐ ಸಂಘಟನೆಯ ಕಾರ್ಯಕರ್ತರು, ನಿನ್ನೆ ಸಮೃದ್ಧ ಜೀವನ್ ಮತ್ತು ಪಿಎಸಿಎಲ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಮಾತನಾಡಿದ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಇಮ್ತಿಯಾಝ್ `ಹಣಕಾಸು ವ್ಯವಹಾರದ ಹೆಸರಲ್ಲಿ ಕಾನೂನು ಬಾಹಿರ ದಂಧೆ ನಡೆಸಲಾ ಗುತ್ತಿದೆ. ಜನರ ಬಳಿಯಿಂದ ಶೇಕಡಾ 11ಕ್ಕೂ ಹೆಚ್ಚು ಬಡ್ಡಿದರದಲ್ಲಿ ಹಣ ಸಂಗ್ರಹಿಸುವುದು ಅಪರಾಧ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದ್ದರೂ ಜಿಲ್ಲೆಯಲ್ಲಿ ಹಲವು ಖಾಸಗಿ ಕಂಪೆನಿಗಳು ಜನತೆಗೆ ಹೆಚ್ಚು ಬಡ್ಡಿಯ ಆಮಿಷವೊಡ್ಡಿ ಹಣ ಸಂಗ್ರಹಿಸುತ್ತಿದೆ. ಈಗಾಗಲೇ ಇಂತಹ ಹಲವು ಟೋಪಿ ಕಂಪೆನಿಗಳು ಮುಳುಗಿ ಜನರಿಗೆ ನೀರು ಕುಡಿಸಿಯಾಗಿವೆ. ಈಗ ಅದೇ ಮಾದರಿಯಲ್ಲಿ ಅಂದರೆ ಮುಂದೆ ಮುಳುಗುವ ಹಾದಿಯಲ್ಲೇ ಇರುವ ಸಮೃದ್ಧ ಜೀವನ್, ಪಿಎಸಿಎಲ್ ಎಂಬ ಹಣಕಾಸು ಸಂಸ್ಥೆಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದೇವೆ. ಅದಕ್ಕೆ ಅಧಿಕಾರಿಗಳು ವಂಚಕ ಕಂಪೆನಿಗಳ ಮೇಲೆ ರೇಡ್ ಮಾಡುವ ಭರವಸೆ ನೀಡಿದ್ದಾರೆ. ಈಗ ದಾಳಿ ಮಾಡಲು ಯಾರೂ ವಂಚನೆ ಪ್ರಕರಣ ದಾಖಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸುವುದು ತಪ್ಪು ಎಂದು ಮನದಟ್ಟು ಮಾಡಲು ಮುತ್ತಿಗೆ ಹಾಕಿದ್ದೇವೆ ಎಂದು ಅವರು ನುಡಿದರು.
ಈ ವೇಳೆ ಪಿಗ್ಮಿ ಹಣ ಸಂಗ್ರಹಿಸು ತ್ತಿದ್ದ ಸಮೃದ್ಧ ಜೀವನ್ ಕಚೇರಿ ಸಿಬ್ಬಂದಿಯಲ್ಲ್ಲಿ ಪಿಗ್ಮಿ ಹಣ ಸಂಗ್ರಹಿಸದಂತೆ ಒತ್ತಡ ಹೇರಿದ್ದರಿಂದ ಸಿಬ್ಬಂದಿ ತಮ್ಮ ಪಾಲಿನ ಕೆಲಸವನ್ನು ನಿಲ್ಲಿಸಿದರೆ, ಪಿಎಸಿಎಲ್ ಅದಾಗಲೇ ಬಂದ್ ಆಗಿದೆ ಎಂದು ತಿಳಿದು ಬಂದಿದೆ.